ಶ್ರೀಲಂಕಾದ ಮಾಜಿ ಪೊಲೀಸ್ ಮುಖ್ಯಸ್ಥ, ಮಾಜಿ ಗೃಹ ಕಾರ್ಯದರ್ಶಿ ಬಂಧನ
ಕೊಲಂಬೋ, ಜುಲೈ 2: ಶ್ರೀಲಂಕಾದ ಮಾಜಿ ಗೃಹ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಹಾಗೂ ಅಮಾನತಾಗಿದ್ದ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ದಾಳಿ ಇನ್ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಆ ದಾಳಿಯನ್ನು ತಡೆಯಲು ವಿಫಲರಾದ ಅವರಿಬ್ಬರ ವಿರುದ್ಧ ಕ್ರಮಕ್ಕೆ ಅಟಾರ್ನಿ ಜನರಲ್ ಸೋಮವಾರ ಸೂಚನೆ ನೀಡಿದ್ದರು.
ಭಾರತವು ಹಂಚಿಕೊಂಡಿದ್ದ ಉಗ್ರಗಾಮಿಗಳ ದಾಳಿಯ ಗುಪ್ತಚರ ಮಾಹಿತಿಯ ಹೊರತಾಗಿಯೂ ಯಾವ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ನೀಡಿ, ಜಯಸುಂದರ ಹಾಗೂ ಫರ್ನಾಂಡೋ ಅವರನ್ನು ಅಧ್ಯಕ್ಷ ಮೈತ್ರಿಪಾಲ ಅಮಾನತು ಮಾಡಿದ್ದರು. ಏಪ್ರಿಲ್ ಇಪ್ಪತ್ತೊಂದರ ಈಸ್ಟರ್ ಭಾನುವಾರದಂದು ಇಸ್ಲಾಮಿಕ್ ಉಗ್ರರ ದಾಳಿ ನಡೆಸಿ, ಸರಣಿ ಸ್ಫೋಟ ಸಂಭವಿಸಿತ್ತು.
ಪೊಲೀಸ್ ವಕ್ತಾರ ಎಸ್.ಪಿ.ರುವಾನ್ ಗುಣಶೇಖರ ಮಾತನಾಡಿ, ಸಿಐಡಿ ಅಧಿಕಾರಿಗಳು ಜಯಸುಂದರ ಅವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜಯಸುಂದರ ಅವರನ್ನು ಪೊಲೀಸ್ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಈಸ್ಟರ್ ಭಾನುವಾರದ ದಾಳಿ ಬಗ್ಗೆ ಹೇಳಿಕೆ ದಾಖಲಿಸಲು ಸಿಐಡಿ ಮುಂದೆ ಮಂಗಳವಾರ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದಿಂದ ಪೊಲೀಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸಿಐಡಿ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಪ್ರಶ್ನೆ ಮಾಡಿದ್ದರು. ನಂತರ ಬಂಧಿಸಿದ್ದರು.
ಗುಪ್ತಚರ ಮಾಹಿತಿ ಸಿಕ್ಕಿದರೂ ಉನ್ನತಾಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಅವರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ಸಿರಿಸೇನಾ ನೇಮಿಸಿದ್ದಾರೆ. ಸಿರಿಸೇನಾ ರಕ್ಷಣಾ ಉಸ್ತುವಾರಿ ಆಗಿದ್ದಾರೆ.












Click it and Unblock the Notifications