Cyclone Mocha : ಮೋಚಾ ಜೊತೆಗೆ ಮತ್ತೊಂದು ಅಪಾಯಕಾರಿ ಚಂಡಮಾರುತದ ಸೂಚನೆ
ಮೋಚಾ ಚಂಡಮಾರುತ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ನಾನಾ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತಿರುವಾಗಲೇ ಮತ್ತೊಂದು ಚಂಡಮಾರುತ ಬರಲಿದೆ ಎಂದು ಫ್ರೆಂಡ್ಸ್ ಆಫ್ ದಿ ಅರ್ಥ್ ನ ಸುಂದರರಾಜನ್ ಮಾಹಿತಿ ನೀಡಿದ್ದಾರೆ.
ಮೇ 8 ರಂದು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿತು. ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಕಡಿಮೆ ಒತ್ತಡದ ಪ್ರದೇಶದಲ್ಲಿ ಇದು ಬಲಗೊಂಡು ಕೆಲ ದಿನಗಳ ಹಿಂದೆ ವಾಯುವ್ಯ ದಿಕ್ಕಿನತ್ತ ಸಾಗಿತ್ತು.

ಮೇ 10 ರಂದು ಬೆಳಿಗ್ಗೆ ಅಂಡಮಾನ್ನ ಪೋರ್ಟ್ ಬ್ಲೇರ್ನಿಂದ 520 ಕಿ.ಮೀ ದೂರದಲ್ಲಿ ರೂಪಗೊಂಡ ಈ ಚಂಡಮಾರುತ ಉತ್ತರ-ವಾಯವ್ಯ ದಿಕ್ಕಿನಲ್ಲಿ ಚಲಿಸಿ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಈ ಚಂಡಮಾರುತಕ್ಕೆ ಯೆಮನ್ನ 'ಮೋಚಾ' ಎಂದು ಹೆಸರಿಡಲಾಗಿದೆ.
ಈ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದ್ದು, ಮಧ್ಯರಾತ್ರಿಯ ವೇಳೆಗೆ ತೀವ್ರ ಚಂಡಮಾರುತವಾಗಿ ಬಲಗೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಚಂಡಮಾರುತ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪುಗೊಂಡು ಬಂಗಾಳಕೊಲ್ಲಿಯ ಮಧ್ಯಭಾಗವನ್ನು ದಾಟಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವೆ ಗಂಟೆಗೆ 120-145 ಕಿಮೀ ವೇಗದಲ್ಲಿ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವೆ ಇಂದು ಕರಾವಳಿಯನ್ನು ದಾಟಲಿದೆ. ಹವಾಮಾನ ಇಲಾಖೆಯ ಮುನ್ಸೂಚಯಂತೆ ಚಂಡಮಾರುತವು ಗಂಟೆಗೆ ಸುಮಾರು 200 ಕಿಲೋಮೀಟರ್ ವೇಗದಲ್ಲಿ ಕರಾವಳಿಯನ್ನು ದಾಟುತ್ತಿದೆ. ಪ್ರಬಲ ಚಂಡಮಾರುತದಿಂದಾಗಿ ದೇಶದ ಎರಡೂ ಭಾಗಗಳಲ್ಲಿ ಅಪಾರ ಹಾನಿಯಾಗುವ ಸಾಧ್ಯತೆ ಇದೆ.
ಈಗಾಗಲೇ ಮೋಚಾ ಚಂಡಮಾರುತದಿಂದಾಗಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ಮತ್ತು ಚಟ್ಟೋಗ್ರಾಮ್ ನಗರಗಳು ಭಾರೀ ಹಾನಿಯನ್ನು ಎದುರಿಸುತ್ತಿವೆ. ಈಗಾಗಲೇ ಚಂಡಮಾರುತದಿಂದ ಭೂಕುಸಿತ, ಭಾರಿ ಮಳೆ ಸಂಭವಿಸುತ್ತಿದೆ. ಹೀಗಾಗಿ ಬಾಂಗ್ಲಾದೇಶದ ಆ 2 ನಗರಗಳಿಂದಲೇ 5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಮ್ಯಾನ್ಮಾರ್ನ ಕ್ಯೆಕ್ಪಿಯು ನಗರ ಮತ್ತು ಅನೇಕ ಪಕ್ಕದ ಕರಾವಳಿ ಪ್ರದೇಶಗಳು ತೀವ್ರವಾಗಿ ಬಾಧಿತವಾಗಿವೆ. ಅಲ್ಲಿಯೂ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವವು ಅಸ್ಸಾಂ, ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬೀರುವ ಸಾಧ್ಯತೆಯಿರುವುದರಿಂದ, ಹವಾಮಾನ ಇಲಾಖೆ ಈ ಪ್ರದೇಶದ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಈ ವರ್ಷ ಇಲ್ಲಿಯವರೆಗೆ, ಪ್ರಪಂಚದಾದ್ಯಂತ 16 ಚಂಡಮಾರುತಗಳು ರೂಪುಗೊಂಡಿವೆ. ಅದರಲ್ಲಿ "ಸೈಕ್ಲೋನ್ ಮೋಚಾ" ಪ್ರಬಲವಾಗಿದೆ ಎಂದು ಹವಾಮಾನ ಇಲಾಖೆ ಡೇಟಾ ಹೇಳುತ್ತದೆ. ವಿಶ್ಲೇಷಕರು ಹೇಳುವ ಪ್ರಕಾರ ಇದರ ಗಾಳಿಯ ವೇಗವು ಪಾನಿ ಚಂಡಮಾರುತದ ಮಟ್ಟದಲ್ಲಿದೆ. ಇದುವರೆಗೆ ಉತ್ತರ ಹಿಂದೂ ಮಹಾಸಾಗರ/ಬಂಗಾಳ ಕೊಲ್ಲಿ ಪ್ರದೇಶವನ್ನು ಅಪ್ಪಳಿಸಿರುವ ಅತ್ಯಂತ ತೀವ್ರವಾದ ಚಂಡಮಾರುತ ಮೋಚಾವಾಗಿದೆ. ಮ್ಯಾನ್ಮಾರ್ನ ಹಲವು ಭಾಗಗಳಿಗೆ ಮೋಚಾ ತೀವ್ರ ಹಾನಿಯನ್ನುಂಟು ಮಾಡಿದೆ. ಈಗ ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮತ್ತೊಂದು ಚಂಡಮಾರುತ ರೂಪುಗೊಂಡಿದೆ.
ಇದರಿಂದ ಆತಂಕ ಹೆಚ್ಚಾಗಿದೆ. ಮೀನುಗಾರರಿಗೆ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.












Click it and Unblock the Notifications