Breaking News: ಕದನ ವಿರಾಮ ಘೋಷಣೆ, ಗಾಜಾ ಜನರಿಗೆ ಗುಡ್ ನ್ಯೂಸ್ ಕೊಟ್ಟ ಇಸ್ರೇಲ್!
ಕಳೆದ 1 ತಿಂಗಳಿಂದ ಬಡಿದಾಡುತ್ತಿರುವ ಹಮಾಸ್ ಉಗ್ರರು VS ಇಸ್ರೇಲ್ ಸೇನೆಯ ನಡುವೆ ಭೀಕರ ರಕ್ತಪಾತ ನಡೆದಿದೆ. ಇಡೀ ಜಗತ್ತು ಇಂತಹ ಪರಿಸ್ಥಿತಿ ನೋಡಿ ರೊಚ್ಚಿಗೆದ್ದು, ತೀವ್ರ ಆಕ್ರೋಶ ಹೊರಹಾಕುತ್ತಿದೆ. ಎಲ್ಲೆಲ್ಲೂ ಹಮಾಸ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆ ಚರ್ಚೆ ನಡೆಯುವಾಗಲೇ 'ಕದನ ವಿರಾಮ' ಘೋಷಣೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಹಾಗಾದ್ರೆ ಯುದ್ಧ ನಿಂತು ಹೋಯ್ತಾ?
ಇಸ್ರೇಲ್ & ಹಮಾಸ್ ಉಗ್ರರ ನಡುವೆ ಕಳೆದ ತಿಂಗಳು ಶುರುವಾದ ಯುದ್ಧ, ಮೊನ್ನೆ ಬರೋಬ್ಬರಿ 1 ತಿಂಗಳು ಮುಗಿಸಿದೆ. ಎರಡೂ ಕಡೆ ಸೇರಿ ಸಾವಿನ ಸಂಖ್ಯೆ 11,000 ಗಡಿ ದಾಟಿದೆ. ಸ್ಥಿತಿ ಹೀಗೆ ಕೈಮೀರಿ ಹೋದ ಸಮಯಕ್ಕೆ, ಹಮಾಸ್ ಉಗ್ರರ ಸರ್ವನಾಶ ಮಾಡಲು ಇಸ್ರೇಲ್ ಸೇನೆ ಭರ್ಜರಿ 30 ಸಾವಿರ ಟನ್ ಬಾಂಬ್ ಹಾಕಿದೆ. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಕದನ ವಿರಾಮಕ್ಕೆ ಒತ್ತಡ ಹೆಚ್ಚಾಗಿತ್ತು. ಇಸ್ರೇಲ್ ಯುದ್ಧ ನಿಲ್ಲಿಸಲಿ ಎಂಬ ಒತ್ತಾಯ ಕೂಡ ಕ್ಷಣಕ್ಷಣಕ್ಕೆ ಹೆಚ್ಚಾಗುತ್ತಾ ಇತ್ತು. ಅಂತೂ, ಕೊನೆಗೂ ಕದನ ವಿರಾಮ ಘೋಷಣೆಗೆ ಇಸ್ರೇಲ್ ಒಪ್ಪಿದೆ!

ದಿಢೀರ್ ಯುದ್ಧ ನಿಂತು ಹೋಗುತ್ತಾ?
ಹೌದು, ಈ ವಿಚಾರ ನಂಬಲು ಸಾಧ್ಯವಾಗದೇ ಇದ್ದರೂ ನಿಜ. ಹಮಾಸ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಬ್ರೇಕ್ ಹಾಕಲು ಇಸ್ರೇಲ್ ಸೇನೆ ಮುಂದಾಗಿದೆ. ಅದ್ರಲ್ಲೂ ಗಾಜಾಪಟ್ಟಿ ಭಾಗದಲ್ಲಿ ಸಿಲುಕಿ ನರಳುತ್ತಿರುವ ಜನರನ್ನು ರಕ್ಷಣೆ ಮಾಡಲು, ವಿಶ್ವಸಂಸ್ಥೆ & ಇತರ ಜಾಗತಿಕ ಸಂಸ್ಥೆಗಳಿಗೆ ನೆರವಾಗೋಕೆ ಇಸ್ರೇಲ್ ಇಂಥ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ. ಹಾಗಾದರೆ ಇದೀಗ ಇಸ್ರೇಲ್ ಸೇನೆ ಯಾವ ರೀತಿ ಕದನ ವಿರಾಮಕ್ಕೆ ಓಕೆ ಅಂತಿದೆ? ಜಗತ್ತಿನ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕ ಈ ಬಗ್ಗೆ ಹೇಳಿರೊದು ಏನು?
'ಕದನ ವಿರಾಮ' ಸುದ್ದಿ ಕೇಳಿ ಜನ ನಿರಾಳ!
ಈಗ ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಬ್ರೇಕ್ ಬೀಳುತ್ತಿರುವ ಬಗ್ಗೆ ಖುದ್ದು ಅಮೆರಿಕ ಮಾಹಿತಿ ನೀಡಿದೆ. ಹೀಗಂತ ಯುದ್ಧ ಸಂಪೂರ್ಣ ನಿಂತು ಹೋಗುತ್ತಿಲ್ಲ, ಬದಲಾಗಿ ಪ್ರತಿ ದಿನ ಇಷ್ಟು ಗಂಟೆ ಅಂತಾ ಯುದ್ಧಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆಯಂತೆ ಇಸ್ರೇಲ್ ಸೇನೆ. ಈಗ ಅಮೆರಿಕ ನೀಡಿರುವ ಮಾಹಿತಿ ಪ್ರಕಾರ ಪ್ರತಿದಿನ 4 ಗಂಟೆ ಕಾಲ ಈ ರೀತಿ ಕದನ ವಿರಾಮ ಘೋಷಣೆ ಮಾಡಲಾಗುತ್ತದೆ.

ಏನಿದು ಕದನ ವಿರಾಮ ಘೋಷಣೆ?
ಈ ಸಮಯದಲ್ಲಿ ಇಸ್ರೇಲ್ ಸೇನೆಯು ಯಾವುದೇ ರೀತಿ ಸೇನಾ ಕಾರ್ಯಾಚರಣೆ ನಡೆಸಲ್ಲ. ಅಂದ್ರೆ ಬಾಂಬ್ ಹಾಕುವುದು, ಗುಂಡಿನ ದಾಳಿ ಮಾಡುವುದು ಹೀಗೆ ಯಾವುದೇ ದಾಳಿಗಳು ಕದನ ವಿರಾಮ ಘೋಷಣೆ ಮಾಡಿದ ಸಮಯದಲ್ಲಿ ನಡೆಯಲ್ಲ. ಈ ಮೂಲಕವೇ ಉತ್ತರ ಗಾಜಾಪಟ್ಟಿ ಜನ, ಸಂಪೂರ್ಣವಾಗಿ ಉತ್ತರ ಗಾಜಾದಿಂದ ಸ್ಥಳಾಂತರ ಆಗಲು ನೆರವಾಗುವ ತಂತ್ರ ಇದರಲ್ಲಿದೆ ಎಂಬ ಮಾತು ಕೇಳಿಬಂದಿದೆ.
'ಗಾಜಾಪಟ್ಟಿ' ಸಂಪೂರ್ಣ ಇಸ್ರೇಲ್ ವಶಕ್ಕೆ?
ಈ ಹಿಂದೆ ಕೂಡ ಇಸ್ರೇಲ್ ಸೇನೆ ಇದೇ ರೀತಿ 'ಗಾಜಾಪಟ್ಟಿ' ನಗರದ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಅಂತಾರಾಷ್ಟ್ರೀಯ ಒಪ್ಪಂದಗಳ ಹಿನ್ನೆಲೆ ತನ್ನ ಸೇನೆಯ ಹಿಂದಕ್ಕೆ ಪಡೆದಿತ್ತು. ಹೀಗಿದ್ದಾಗ ಕಳೆದ ತಿಂಗಳು ಅಂದ್ರೆ ಅಕ್ಟೋಬರ್ 7 ರಂದು ಹಮಾಸ್ ಹಾಗೂ ಇಸ್ರೇಲ್ ನಡುವೆ ಮತ್ತೆ ಯುದ್ಧ ಶುರುವಾದಾಗ ಸ್ಥಿತಿ ಕೈಮೀರಿದೆ. ಹೀಗಾಗಿ ಮತ್ತೆ ಇಸ್ರೇಲ್ 'ಗಾಜಾಪಟ್ಟಿ' ನಗರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎನ್ನುವ ಮಾತು ಬಿರುಗಾಳಿ ಎಬ್ಬಿಸಿದೆ.
ಅಲ್ಲದೆ ಅಮೆರಿಕ ಕೂಡ ಈ ಕಾರಣಕ್ಕೆ ಆಕ್ರೋಶ ಹೊರಹಾಕಿತ್ತು ಎಂಬ ವರದಿ ಬಂದಿತ್ತು. ಆದರೆ ಇಂದು ಈ ಕುರಿತು ಇಸ್ರೇಲ್ ಸೇನಾಧಿಕಾರಿ ಸ್ಪಷ್ಟನೆ ನೀಡಿದ್ದು ಅಂತಹ ಯಾವುದೇ ಉದ್ದೇಶ ಇಲ್ಲ ಎಂದಿದ್ದಾರೆ. ಇದರ ಜೊತೆಗೆ ನಾವು ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಿದ ಬಳಿಕ, ಗಾಜಾಪಟ್ಟಿ ಬಿಟ್ಟು ಹೊರಡುತ್ತೇವೆ ಅಂತಿದ್ದಾರೆ ಇಸ್ರೇಲ್ ಹಿರಿಯ ಸೇನಾಧಿಕಾರಿ. ಒಟ್ಟಾರೆ ಇದೆಲ್ಲವೂ ಏನೇ ಇರಲಿ, ದಿನಕ್ಕೆ 4 ಗಂಟೆ ಕಾಲ ಕದನ ವಿರಾಮ ಘೋಷಣೆ ಹಿಂದೆ ದೊಡ್ಡ ರಣತಂತ್ರ ಅಡಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.












Click it and Unblock the Notifications