ಟ್ವಿಟ್ಟರ್ ಬಗ್ಗೆ ಟ್ವಿಟ್ಟರ್ನಲ್ಲೇ ದೂರು ನೀಡುವುದನ್ನು ಇಷ್ಟಪಡುತ್ತೇನೆ: ಎಲಾನ್ ಮಸ್ಕ್
ವಾಷಿಂಗ್ಟನ್, ನವೆಂಬರ್ 11: ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರು ಕಳೆದ ವಾರ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡರು. ಆ ನಂತರ ಅರ್ಧದಷ್ಟು ಸಿಬ್ಬಂದಿಯನ್ನು ಕಂಪನಿ ವಜಾಗೊಳಿಸಿತ್ತು. ಟ್ವಿಟ್ಟರ್ನಿಂದ ವಜಾಗೊಂಡ ಉದ್ಯೋಗಿಗಳಲ್ಲಿ ಭಾರತದ 200 ಮಂದಿಯೂ ಇದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟ್ವರ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಸಾಮಾಜಿಕ ತಾಣಗಳಲ್ಲಿ ಟ್ವಿಟ್ಟರ್ನ ಹೊಸ ನೀತಿಗಳ ವಿರುದ್ಧ ಟೀಕೆಗಳು ಕೇಳಿಬರುತ್ತಲೇ ಇವೆ. ಆದರೆ, ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಎಲಾನ್ ಮಸ್ಕ್ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ.
ಜನರು ದೂರು ನೀಡುವುದನ್ನು ಇಷ್ಟಪಡುತ್ತೇನೆ
ಟ್ವಿಟ್ಟರ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಕುತೂಹಲದ ವಿಚಾರವೆಂದರೆ, ಜನರು ಟ್ವಿಟ್ಟರ್ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಟ್ವಿಟ್ವರ್ನಲ್ಲೇ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಟೀಕೆಗಳನ್ನು ಟ್ವಿಟ್ಟರ್ನಲ್ಲೇ ಬರೆದುಕೊಳ್ಳುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್ನಲ್ಲಿ ಮಂಡಿಸುತ್ತಿದ್ದಾರೆ.
ಇದಕ್ಕೆ ಟ್ವಿಟ್ಟರ್ನಲ್ಲೇ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, 'ಜನರು ಟ್ವಿಟ್ಟರ್ ಬಗ್ಗೆ ಟ್ವಿಟ್ಟರ್ನಲ್ಲೇ ದೂರು ನೀಡುತ್ತಿದ್ದಾರೆ. ಇದನ್ನು ನಾನು ಇಷ್ಟಪಡುತ್ತೇನೆ' ಎಂದು ಮಸ್ಕ್ ಹೇಳಿದ್ದಾರೆ. ಇದರೊಂದಿಗೆ ಹಾಸ್ಯಭರಿತ ಎಮೋಜಿಗಳನ್ನು ಹಾಕಿದ್ದಾರೆ.
ಸಾಮಾಜಿಕ ಹೋರಾಟಗಾರರನ್ನು ದೂರಿದ ಎಲಾನ್ ಮಸ್ಕ್
ಟ್ವಿಟ್ಟರ್ ವಿರುದ್ಧ ಸಾಮಾಜಿಕ ಹೋರಾಟಗಾರರು ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ದೊಡ್ಡ ಜಾಹೀರಾತುದಾರರು ನಮಗೆ ಜಾಹೀರಾತುಗಳನ್ನು ನೀಡುತ್ತಿಲ್ಲ. ಅವರಿಗೆ ನಮ್ಮ ಸ್ವಾಧೀನ ಪ್ರಕ್ರಿಯೆ ಬಗ್ಗೆ ಆತಂಕವಿದೆ. ಪ್ರತಿದಿನ ನಮಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ಎಲಾನ್ ಮಸ್ಕ್ ಆರೋಪಿಸಿದ್ದಾರೆ.
ನಮ್ಮ ಕಂಪನಿಗೆ ದಿನವೊಂದಕ್ಕೆ 4 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ. ನೌಕರರ ವಜಾಗೊಳಿಸುವುದು ಬಿಟ್ಟು ತಮಗೆ ಬೇರೆ ಆಯ್ಕೆಗಳಿಲ್ಲ. ವಜಾಗೊಂಡ ಎಲ್ಲರಿಗೂ ಮೂರು ತಿಂಗಳ ಹೆಚ್ಚುವರಿ ವೇತನ ನೀಡಲಾಗಿದೆ. ಕಾನೂನಿನ ಪ್ರಕಾರ ಶೇ.50ರಷ್ಟು ಹೆಚ್ಚುವರಿ ವೇತನ ಕೊಡಲಾಗಿದೆ ಎಂದು ಎಲಾನ್ ಮಸ್ಕ್ ಮಾಹಿತಿ ನೀಡಿದ್ದರು.
ಟ್ವಿಟ್ಟರ್ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆತಂಕ
ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಸ್ವಾಧೀನ ಪಡಿಸಿಕೊಂಡ ನಂತರ ಜೋ ಬೈಡನ್ ಆತಂಕ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಸುಳ್ಳು ಹರಡುವ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಶ್ರೀಮಂತ ಉದ್ಯಮಿಯೊಬ್ಬ ಖರೀದಿಸಿದ್ದಾನೆ ಎಂದು ಬೈಡನ್ ವಾಗ್ದಾಳಿ ನಡೆಸಿದ್ದರು.
ಉದ್ಯೋಗಿಗಳ ವಜಾಗೊಳಿಸಿದ ಮಸ್ಕ್ ನಿರ್ಧಾರವನ್ನೂ ಬೈಡನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಳ್ಳು ಮಾಹಿತಿಗಳ ಹರಡುವಿಕೆ ತಡೆಗಟ್ಟಲು ಜವಾಬ್ದಾರಿಯುತ ನೌಕರರು ಕೆಲಸ ಮಾಡುತ್ತಿದ್ದರು. ಅವರನ್ನು ಕೆಲಸದಿಂದ ತೆಗೆದುಹಾಕಿದ್ದು ಸರಿ ಅಲ್ಲ. ನಕಲಿ ಸುದ್ದಿಗಳನ್ನು ಹರಡುವ ಸಾಮಾಜಿಕ ತಾಣಗಳು ಅಪಾಯಕಾರಿಯಾಗಿವೆ. ನಾವೀಗ ನಮ್ಮ ಮಕ್ಕಳ ಬಗ್ಗೆ, ಮುಂದಿನ ಪೀಳಿಗೆ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದು ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ನೌಕರರನ್ನು ವಜಾಗೊಳಿಸಿದ ಟ್ವಿಟ್ಟರ್
ಟ್ವಿಟ್ಟರ್ ಸ್ವಾಧೀನ ಪಡೆಸಿಕೊಂಡ ನಂತರ ಎಲಾನ್ ಮಸ್ಕ್ ಅವರು ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕಂಪನಿ ಶೇ 50ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ. ವಜಾಗೊಂಡ ನೌಕರರಲ್ಲಿ ಭಾರತೀಯರೂ ಸೇರಿದ್ದಾರೆ.
ಟ್ವಿಟ್ಟರ್ ಸಿಇಒ ಆಗಿದ್ದ ಭಾರತದ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿದ್ದರು. ಟ್ವಿಟ್ಟರ್ನ ಉನ್ನತ ಹುದ್ದೆಗಳಲ್ಲಿದ್ದ ಹಲವು ಭಾರತೀಯರು ಟ್ವಿಟ್ಟರ್ನಿಂದ ಹೊರ ಬಂದಿದ್ದರು. ಭಾರತದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. 200 ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ.