India & Pakistan: ಪಾಕಿಸ್ತಾನಕ್ಕೆ ಭಾರತದ ಸ್ನೇಹ ಬೇಕಂತೆ: ಯಾಕಂತೆ?
ಭಾರತದ ಸ್ನೇಹ ಬೇಡ ಎನ್ನುವ ದೇಶವೇ ಇಲ್ಲ. ಯಾಕಂದ್ರೆ ಭಾರತದ ನೆರವು ಒಂದಲ್ಲಾ ಒಂದು ರೀತಿಯಲ್ಲಿ ಜಗತ್ತಿನ ಪ್ರತಿ ದೇಶಕ್ಕೂ ಬೇಕು. ಅದು ಅಭಿವೃದ್ಧಿ ಹೊಂದಿದ ದೇಶವೇ ಆಗಿರಲಿ, ಅಭಿವೃದ್ಧಿ ಹೊಂದುತ್ತಿರುವ ದೇಶವೇ ಆಗಿರಲಿ. ಇಲ್ಲ ಬಡ ರಾಷ್ಟ್ರವೇ ಆದರೂ ಭಾರತದ ಸ್ನೇಹ ಬೇಕೆ ಬೇಕು. ಈ ಮಾತು ನೆರೆ ದೇಶ ಪಾಕಿಸ್ತಾನಕ್ಕೆ ತಡವಾಗಿ ಅರ್ಥವಾದ ರೀತಿ ಕಾಣ್ತಿದೆ. ಹೀಗಾಗಿ ಭಾರತದ ಜೊತೆ ಸಂಬಂಧ ವೃದ್ಧಿಗೆ ಮುಂದಾಗಿದೆ ಪಾಕ್.
ಅಂದಹಾಗೆ ಪಾಕಿಸ್ತಾನದಲ್ಲಿ ಜನರು ಆರಿಸಿದ ಸರ್ಕಾರ ಬಿದ್ದು ಹೋಗಿದೆ, ಅಂದ್ರೆ ಅಲ್ಲಿನ ಸರ್ಕಾರವನ್ನ ವಿಸರ್ಜನೆ ಮಾಡಲಾಗಿದೆ. ಇದೀಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹಂಗಾಮಿ ಪ್ರಧಾನಿ ಮತ್ತು ಸಚಿವರ ಆಯ್ಕೆ ಕೂಡ ನಡೆದಿದೆ. ಈಗ ಹಂಗಾಮಿ ಸರ್ಕಾರದ ಭಾಗವಾದ ವಿದೇಶಾಂಗ ಸಚಿವರು ಭಾರತದ ಜೊತೆಗೆ ಸಂಬಂಧ ವೃದ್ಧಿಗೆ ಆಸೆ ವ್ಯಕ್ತಪಡಿಸಿ, ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪಾಕ್ನ ಹಂಗಾಮಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಪಾಕಿಸ್ತಾನಕ್ಕೆ ಅರ್ಥವಾಯ್ತಾ ಭಾರತದ ಶಕ್ತಿ?
ಭಯೋತ್ಪಾದನೆ ಮತ್ತು ಆರ್ಥಿಕ ದಿವಾಳಿತನ ಪಾಕಿಸ್ತಾನದ ನಿದ್ದೆಗೆಡಿಸಿದೆ. ಈ ಸಂದರ್ಭಕ್ಕೆ ಸರ್ಕಾರ ಕೂಡ ವಿಸರ್ಜನೆಯಾಗಿ ಹಂಗಾಮಿ ಸರ್ಕಾರ ಆಡಳಿತಕ್ಕೆ ಬಂದಿದೆ. ಹೀಗೆ ಪಾಕ್ನ ಹಂಗಾಮಿ ಸರ್ಕಾರದ ವಿದೇಶಾಂಗ ಸಚಿವರು ಹೇಳಿಕೆಯೊಂದನ್ನು ನೀಡಿದ್ದು, ಅಮೆರಿಕ & ಚೀನಾ ಸೇರಿದಂತೆ ಪ್ರಮುಖ ದೇಶಗಳ ಜೊತೆ ನಿಕಟ ಸಂಬಂಧ ಮುಂದುವರಿಸುತ್ತೇವೆ. ಹಾಗೇ ಭಾರತದ ಜೊತೆ ಕೂಡ ಉತ್ತಮ ಬಾಂಧವ್ಯ ಬಯಸುತ್ತೇವೆ ಎಂದು, ಪಾಕಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೆ ಪಾಕ್ ಹಂಗಾಮಿ ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಲೀಲ್ ಅಬ್ಬಾಸ್ ಜಿಲಾನಿ, ರಾಷ್ಟ್ರೀಯ ಒಮ್ಮತದ ಮೂಲಕ ವಿದೇಶಾಂಗ ನೀತಿ ಮುಂದುವರಿಸುವುದು ನಮ್ಮ ಆದ್ಯತೆ. ಗಲ್ಫ್ ರಾಷ್ಟ್ರಗಳ ಜೊತೆ ಸಂಬಂಧ ನಿರ್ಣಾಯಕವಾಗಿದೆ. ಆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಯತ್ನ ಮುಂದುವರಿಸುತ್ತೇವೆ ಎಂದು ಜಲೀಲ್ ಅಬ್ಬಾಸ್ ಜಿಲಾನಿ ಮಾಹಿತಿ ನೀಡಿದ್ದಾರೆ. ಜಿಲಾನಿ ವಿದೇಶಾಂಗ ಕಾರ್ಯದರ್ಶಿಯಾಗಿ ಹಾಗೂ ಅಮೆರಿಕದಲ್ಲೂ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಪಾಕ್ ಹಂಗಾಮಿ ಸರ್ಕಾರದಲ್ಲಿ ಒಳ್ಳೆಯ ಖಾತೆಯನ್ನೇ ನೀಡಲಾಗಿದೆ.

ಪಾಕಿಸ್ತಾನದ ಮುಂದಿನ ಕಥೆ ಏನು?
ಭಾರತದ ನೆರೆ ದೇಶದಲ್ಲಿ ರಾಜಕೀಯ ಅಸ್ತಿರತೆ ನಡುವೆ ಕಳೆದ ವಾರ ಮಹತ್ವದ ಬೆಳವಣಿಗೆಯು ನಡೆದಿತ್ತು. ಆಗಸ್ಟ್ 12ಕ್ಕೆ ಪಾಕ್ ಸಂಸತ್ ಅವಧಿ ಮುಗಿಯಲಿದ್ದ ಹಿನ್ನೆಲೆ ಆಗಸ್ಟ್ 9ರಂದೇ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಇದೀಗ ಚುನಾವಣೆಗೆ ಪಾಕ್ ಸಿದ್ಧವಾಗುತ್ತಿದೆ. ಆದರೆ ಮುಂದಿನ ಆರು ತಿಂಗಳ ಕಾಲ ಚುನಾವಣೆ ನಡೆಯುವ ನಿರೀಕ್ಷೆ ಇಲ್ಲ. ಪಾಕ್ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿಯೇ ಪಾಕಿಸ್ತಾನದಲ್ಲೂ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಇದೀಗ ಮಧ್ಯಂತರ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದ್ದು, ಚುನಾವಣೆ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಒಟ್ನಲ್ಲಿ ಅಂತೂ ಇಂತೂ ಪಾಕಿಸ್ತಾನಕ್ಕೆ ಬುದ್ಧಿ ಬಂದಂತೆ ಕಾಣುತ್ತಿದೆ. ಭಾರತ ಜೊತೆಗೂ ಉತ್ತಮ ಸ್ನೇಹ ಅತ್ಯಗತ್ಯ ಅಂತಿದೆ. ಆದರೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಿಜವಾದ ಕ್ಯಾತೆ ಶುರುವಾದರೆ ಏನು ಮಾಡೋದು? ಇಂತಹ ಪ್ರಶ್ನೆ ಕೂಡ ಕಾಡುತ್ತಿದೆ. ಈ ರೀತಿ ಡಬಲ್ ಗೇಮ್ ಆಡೋದು ಪಾಕಿಸ್ತಾನ ರಾಜಕೀಯಕ್ಕೆ ಮತ್ತು ಅಲ್ಲಿನ ರಾಜಕಾರಣಿಗಳಿಗೆ ರೂಢಿ ಆಗೋಗಿದೆ. ಪದೇ ಪದೆ ಭಾರತದ ಜೊತೆಗೆ ಕಿರಿಕಿರಿ ಮಾಡುತ್ತಾ, ಉಗ್ರರನ್ನು ಬೆಳೆಸುತ್ತಿರುವ ಆರೋಪ ಹೊತ್ತಿರುವ ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಅದು ಯಾವಾಗ ಬದಲಾಗುತ್ತೋ ಗೊತ್ತಿಲ್ಲ.












Click it and Unblock the Notifications