ಕೊರೊನಾ ಯುದ್ಧಕ್ಕಾಗಿ ಸಾರ್ಕ್ ರಾಷ್ಟ್ರಗಳಿಗೆ ನರೇಂದ್ರ ಮೋದಿ ಮಾರ್ಗದರ್ಶನ
ನವದೆಹಲಿ, ಮಾರ್ಚ್.15: ವಿಶ್ವದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ವಿರುದ್ಧ ಯುದ್ಧ ಸಾರಲು ಭಾರತ ದೇಶವು ಅಣಿಯಾಗಿದೆ. ಭಾರತದ ನೆರವಿನ ನಿರೀಕ್ಷೆಯಲ್ಲಿ ಇರುವ ನೆರೆಹೊರೆ ರಾಷ್ಟ್ರಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಗದರ್ಶನ ಮಾಡಿದ್ದಾರೆ.
ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಸೇರಿದಂತೆ ಸಾರ್ಕ್ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನದ ಮುಖ್ಯಸ್ಥರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?
ಸಾರ್ಕ್ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾ ವೈರಸ್ ಬಗ್ಗೆ ಆತಂಕ ಪಡುವ ಬದಲು ಜಾಗೃತಿ ವಹಿಸಬೇಕಿದೆ ಎಂಬ ಸಂದೇಶವನ್ನು ರವಾನಿಸಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಸೋಂಕು ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈಗಲೇ ನಾವುಗಳು ಜಾಗರುಕರಾಗಿಬೇಕು ಎಂದು ಮೋದಿ ತಿಳಿಸಿದ್ದಾರೆ.
ಭಾರತದಲ್ಲಿ ಜನವರಿಯಿಂದಲೇ ಸ್ಕ್ರೀನಿಂಗ್
ಕೊರೊನಾ ವೈರಸ್ ಹಾವಳಿ ಹೆಚ್ಚಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಭಾರತವು ಎಚ್ಚೆತ್ತುಕೊಂಡಿತು. ಜನವರಿ ಮಧ್ಯಭಾಗದಿಂದಲೇ ವಿದೇಶಗಳಿಂದ ಭಾರತಕ್ಕೆ ಆಗಮಿಸುವ ವಿದೇಶಿಗರು ಮತ್ತು ಪ್ರವಾಸಿಗರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಯಿತು. ಜನರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹಂತ-ಹಂತವಾಗಿ ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿತು. ಇದುವರೆಗೂ ಭಾರತೀಯ ವಿಮಾನ ನಿಲ್ದಾಣಗಳಲ್ಲಿ 12,29,363 ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.
ವಿದೇಶಗಳಲ್ಲಿದ್ದ 1,400 ಭಾರತೀಯರು ತಾಯ್ನಾಡಿಗೆ ವಾಪಸ್
ಕೊರೊನಾ ವೈರಸ್ ಹಾವಳಿಗೆ ಸಿಕ್ಕು ನಲುಗಿದ್ದ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆ ತರಲು ಕೇಂದ್ರ ಸರ್ಕಾರದ ವತಿಯಿಂದ ವಿಶೇಷ ವಿಮಾನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದುವರೆಗೂ ವಿದೇಶಗಳಲ್ಲಿ ಸಿಲುಕಿರುವ 1,400ಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆ ತರಲಾಯಿತು ಎಂದು ಮೋದಿ ತಿಳಿಸಿದ್ದಾರೆ.
ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಕೊರೊನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗುವ ಬದಲು ಸಮರ್ಥವಾಗಿ ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ಕ್ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲಬೇಕು. ನಮ್ಮ ದೇಶಗಳಲ್ಲಿ ಜನರ ನಡುವೆ ನೇರ ಸಂಪರ್ಕ ವ್ಯವಸ್ಥೆಯಿದ್ದು, ನಾವೆಲ್ಲ ಒಗ್ಗಟ್ಟಾಗಿ ಈ ಸವಾಲನ್ನು ಎದುರಿಸಬೇಕು, ಒಗ್ಗಟ್ಟಾಗಿ ಸಾಗಬೇಕು ಮತ್ತು ಒಗ್ಗಟ್ಟಾಗಿಯೇ ಜಯಿಸಬೇಕು. ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಕೈ ಜೋಡಿಸಬೇಕು ಎಂದು ಮೋದಿ ಕರೆ ಕೊಟ್ಟರು.
ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರ ಸಭೆ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರು ಹಾಜರಿದ್ದರು. ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್, ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರೀಮಿಯರ್ ಲೋತಾಯ್ ಶೇರಿಂಗ್, ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಕ್ ಹಸೀನಾ, ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಪಾಕಿಸ್ತಾನ ಪ್ರಧಾನಮಂತ್ರಿ ವಿಶೇಷ ಸಹಾಯಕ ಜಾಫರ್ ಮಿರ್ಜಾ ಸಭೆಯಲ್ಲಿ ಭಾಗಿಯಾಗಿದ್ದರು.