ಜಲ ಪ್ರಳಯದ ಮುನ್ಸೂಚನೆ, ಡ್ಯಾಂ ನಿರ್ಮಿಸಲು ಚೀನಾ ಹಿಂದೇಟು..?
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೃಹತ್ ಡ್ಯಾಂ ನಿರ್ಮಿಸುತ್ತಿರುವ ಚೀನಾಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಈಗ ಪ್ರಕೃತಿಯೇ ಚೀನಾ ಯೋಜನೆಗೆ ಅಡ್ಡಗಾಲು ಹಾಕಿದೆ. ಹೌದು ಹಿಮಾಲಯದ ತಪ್ಪಲಿನಲ್ಲಿ ತಾಪಮಾನ ಏರಿಕೆ ಪರಿಣಾಮ ಕರಗಿ, ಕರಗಿ ಬೀಳುತ್ತಿರುವ ಹಿಮಗಡ್ಡೆಗಳು ಚೀನಾ ಅಧಿಕಾರಿಗಳಲ್ಲಿ ನಡುಕ ಸೃಷ್ಟಿಸಿವೆ. ಜಗತ್ತೇ ಇತ್ತ ತಿರುಗಿ ನೋಡುವಂತೆ ಡ್ಯಾಂ ನಿರ್ಮಿಸುತ್ತಿರುವ ಚೀನಾಗೆ ಪ್ರಕೃತಿ ಮಾತೆಯೇ ದೊಡ್ಡ ಎದುರಾಳಿಯಾಗಿದ್ದು, ಈ ಸಂದರ್ಭದಲ್ಲಿ ಚೀನಾ ಅನಿವಾರ್ಯವಾಗಿ ಯೋಜನೆ ಕೈಬಿಡುವ ಸಂದರ್ಭ ಎದುರಾಗಿದೆ.
ಹಿಮಾಲಯ ಈಗ ಮೊದಲಿನಂತಿಲ್ಲ, ನಿರಂತರವಾಗಿ ಎದುರಾಗುತ್ತಿರುವ ಭೂಕಂಪನ. ಆಗಾಗ ಉಂಟಾಗುತ್ತಿರುವ ಹಿಮಪಾತ ಅಲ್ಲಿ ಜಲಪ್ರಳಯದ ಪರಿಸ್ಥಿತಿ ನಿರ್ಮಿಸಿದೆ. ಈಗಾಗಲೇ ಭಾರತದ ಉತ್ತರಾಖಂಡ ರಾಜ್ಯ ಇದೇ ಕಾರಣಕ್ಕೆ ಸಾಕಷ್ಟು ತೊಂದರೆಗೆ ಸಿಲುಕಿದೆ.
ಉತ್ತರಾಖಂಡ ರಾಜ್ಯದ ರೀತಿಯಲ್ಲೇ ಚೀನಾದ ಜಲಾಶಯಕ್ಕೂ ದೊಡ್ಡ ಅಪಾಯಗಳು ಎದುರಾಗಿದ್ದು, ಸ್ವಲ್ಪ ಎಡವಟ್ಟಾದರೂ ಯೋಜನೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ. ಹೀಗಾಗಿ ಚೀನಾ ಅಧಿಕಾರಿಗಳು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೃಹತ್ ಡ್ಯಾಂ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ.

ಭಾರತಕ್ಕೆ ಭಾರಿ ಕಂಟಕ..!
ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದೆ ಎನ್ನಲಾಗಿರುವ ಯೋಜನೆಯಿಂದ ಭಾರತಕ್ಕೆ ಕಂಟಕ ಕಾದಿತ್ತು. ಚೀನಾದಲ್ಲಿ ಯರ್ಲುಂಗ್ ತ್ಸಾಂಗ್ಬೊ ಎಂದು ಕರೆಯುವ ಬ್ರಹ್ಮಪುತ್ರ ನದಿ ಟಿಬೆಟ್ ಮೂಲಕ ಅರುಣಾಚಲಕ್ಕೆ ಮತ್ತು ಅಸ್ಸಾಂ ಮೂಲಕವಾಗಿ ಬಾಂಗ್ಲಾದೇಶದ ಕಡೆಗೆ ಹರಿಯುತ್ತದೆ. ಚೀನಾದ ಈ ಅಣೆಕಟ್ಟು ಯೋಜನೆಯಿಂದ ದಿಢೀರ್ ಪ್ರವಾಹ ಅಥವಾ ನೀರಿನ ಕೃತಕ ಅಭಾವ ಸೃಷ್ಟಿಯಾಗುವ ಆರೋಪಗಳು ಇದ್ದವು. ಆದರೆ ಪ್ರಾಕೃತಿಕ ವಿಕೋಪದಿಂದಾಗಿ ಡ್ಯಾಂ ನಿರ್ಮಿಸಲು ಚೀನಾ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

‘ವಾಟರ್ ವಾರ್’ಗೆ ರಣಕಹಳೆ..?
ಈಗಾಗಲೇ ಭಾರತದ ಗಡಿ ಆಕ್ರಮಿಸಿಕೊಳ್ಳಲು ಚೀನಾ ಕಾಯುತ್ತಿದೆ ಎಂಬ ಆರೋಪವಿದೆ. ಗಡಿಯಲ್ಲಿ ಚೀನಾ ಸೇನೆ ವಿರುದ್ಧ ಭಾರತ ಹೋರಾಡುತ್ತಿರುವಾಗ ಚೀನಾ ನದಿ ನೀರಿನ ಮೇಲೂ ಕಣ್ಣಿಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಜಲಯುದ್ಧ ನಡೆದರೂ ಆಶ್ಚರ್ಯ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ಈ ಮೂಲಕ ಪ್ರಕೃತಿಯೇ ಸಿದ್ಧವಾದಂತೆ ಕಾಣುತ್ತಿದೆ. ಸದ್ಯದ ಸ್ಥಿತಿ ನೋಡಿದರೆ ಚೀನಾ ಅಧಿಕಾರಿಗಳೇ ಪ್ರಾಜೆಕ್ಟ್ ನಿಲ್ಲಿಸಲು ಚೀನಾ ಸರ್ಕಾರಕ್ಕೆ ಸೂಚನೆ ನೀಡಬಹುದು ಎನ್ನಲಾಗುತ್ತಿದೆ.

ಚೀನಾಗೆ ಅಕ್ಕಪಕ್ಕದಲ್ಲೇ ವಿರೋಧಿಗಳು
'ಡ್ರ್ಯಾಗನ್' ತನ್ನ ಸುತ್ತಲೂ ಸಮಾನ ವಿರೋಧಿಗಳನ್ನು ಇಟ್ಟುಕೊಂಡಿದೆ. ಅದರಲ್ಲೂ ಅಮೆರಿಕ, ಯುರೋಪ್ ರಾಷ್ಟ್ರಗಳು ಚೀನಾ ವಿರುದ್ಧ ಹಲ್ಲು ಮಸೆಯುತ್ತಿವೆ. ಇದೇ ಕಾರಣಕ್ಕೆ ಬ್ರಹ್ಮಪುತ್ರ ಡ್ಯಾಂ ವಿರೋಧಿಸಿ ಹಲವಾರು ರಾಷ್ಟ್ರಗಳು ಭಾರತಕ್ಕೆ ಬೆಂಬಲ ಸೂಚಿಸಿದ್ದವು. ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಬೆಂಬಲವನ್ನ ಭಾರತದ ಪರ ಸೂಚಿಸಿದ್ದವು. ಇಷ್ಟೆಲ್ಲಾ ಕಾವು ಪಡೆಯುತ್ತಿರುವಾಗಲೇ ಪ್ರಾಕೃತಿಕ ವಿಕೋಪದಿಂದ ಯೋಜನೆ ನಿಲ್ಲಿಸಬೇಕಾದ ಸ್ಥಿತಿ ಎದುರಾಗಿದೆ. ಆದರೆ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಅನುಮೋದನೆ
ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಗೆ ಚೀನಾ ಪಾರ್ಲಿಮೆಂಟ್ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಅನುಮೋದನೆ ನೀಡಿದೆ. ಈ ಯೋಜನೆಗೆ ಈಗಾಗಲೇ ಭಾರತ ಹಾಗೂ ಬಾಂಗ್ಲಾದೇಶ ಆಕ್ಷೇಪ ವ್ಯಕ್ತಪಡಿಸಿದೆ, ಇದರಿಂದ ಭಾರತದ ಹಾಗೂ ಬಾಂಗ್ಲಾದೇಶದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಹಾಗೂ ಬ್ರಹ್ಮಪುತ್ರ ನದ ಬತ್ತಲಿದೆ ಎನ್ನುವುದು ಉಭಯ ದೇಶಗಳ ವಾದವಾಗಿದೆ. ಆದರೆ, ಚೀನಾ ಉದ್ದೇಶಿತ ಯೋಜನೆಯಿಂದ ಹಿಂದೆ ಸರಿದಿರಲಿಲ್ಲ.












Click it and Unblock the Notifications