ಒಮ್ಮೆ ಬಂದ ಕೊರೊನಾ ಮತ್ತೆ ದಾಳಿ ಮಾಡಲು ಸಾಧ್ಯವೇ?
ಚೀನಾದಿಂದ ವಿಶ್ವದೆಲ್ಲೆಡೆ ಹರಡಿರುವ ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದರ ಜೊತೆಗೆ ಕೊವಿಡ್19 ರೋಗಿಗಳಿಗೆ ಐಸೋಲೇಷನ್ ವಾರ್ಡಿನಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಅನೇಕ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಒಬ್ಬ ವ್ಯಕ್ತಿ ಮೇಲೆ ಕೊರೊನಾವೈರಸ್ ಎರಡು ಬಾರಿ ದಾಳಿ ನಡೆಸುವ ಸಾಧ್ಯತೆಯಿದೆಯೇ? ಹಾಗಾದರೇ ಅಂಥ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದು ಇನ್ನೂ ಪ್ರಶ್ನೆಯಾಗೇ ಉಳಿದಿದೆ.
ಸಾರ್ವಜನಿಕರು ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಸಾಮಾನ್ಯ ಶೀತ, ಕೆಮ್ಮು, ಜ್ವರದಿಂದ ಮುಕ್ತಿ ಹೊಂದಬಹುದು. ಆದರೆ ಕೊರೊನಾದಿಂದ ಮುಕ್ತಿ ಹೊಂದಲು ಸಾಧ್ಯವೇ? ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದೆ.
ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ. ಹಾಗಾಗಿ, ಒಮ್ಮೆ ದೇಹದ ಒಳಹೊಕ್ಕ ವೈರಸ್ ಮತ್ತೊಮ್ಮೆ ದಾಳಿ ಮಾಡುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು. ಇದಕ್ಕೆ ಪುಷ್ಟಿ ನೀಡುವಂಥ ಘಟನೆಯೊಂದು ನಡೆಯಿತು. ಆದರೆ, ಮಹತ್ವದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ
ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ. ವಿಪರೀತ ಜ್ವರ ಬಾಧಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಏರುಪೇರಾಗಿ, ಜೀವರಕ್ಷಕ ಸೆಲ್ ಗಳೇ ಆತ್ಮಹತ್ಯೆ ಮಾಡಿಕೊಂಡೋ ಅಥವಾ ಆರೋಗ್ಯಕರ ಸೆಲ್ ಗಳನ್ನು ನಾಶಪಡಿಸುವ ಸೈಟೋಕೈನ್ಸ್ ಗಳಾಗಿ ಪರಿವರ್ತನೆಗೊಳ್ಳಬಹುದು. ಆದರೆ ಸೋಂಕು ಹೆಚ್ಚು ಹರಡದಂತೆ ನಿಗಾ ವಹಿಸಿ, ಜ್ವರದ ತಾಪ ತಗ್ಗಿಸಿ, ವಿವಿಧ ಚಿಕಿತ್ಸಾ ವಿಧಾನದಿಂದ ರೋಗಿಯನ್ನು ಗುಣಮುಖ ಮಾಡಲಾಗುತ್ತಿದೆ.

ಜಪಾನ್ ಮಹಿಳೆಗೆ ಎರಡು ಬಾರಿ ಪಾಸಿಟಿವ್?
ವೈರಸ್ ಸೋಂಕಿತ ಜಪಾನ್ ಮಹಿಳೆಯೊಬ್ಬರನ್ನು ವೈರಸ್ ಫ್ರೀ ಎಂದು ಘೋಷಿಸಿದ ಬಳಿಕ ಮತ್ತೆ ಕೊರೊನಾ ಪಾಸಿಟಿವ್ ಎಂದು ಫಲಿತಾಂಶ ಬಂದಿತ್ತು. ಇದರಿಂದ ವಿಜ್ಞಾನಿಗಳು ಗೊಂದಲಕ್ಕೀಡಾಗಿದ್ದರು. ಆದರೆ, ಲೀಡ್ಸ್ ವಿವಿಯ ಪ್ರೊಫೆಸರ್ ಮಾರ್ಕ್ ಹ್ಯಾರೀಸ್ ಈ ಬಗ್ಗೆ ಸ್ಪಷ್ಟಣೆ ನೀಡಿ, ಎರಡು ಬಾರಿ ಸೋಂಕು ತಗುಲುವ ಸಾಧ್ಯತೆ ಕಡಿಮೆ. ಬಾವಲಿಗಳ ಮೂಲಕ ಹರಡುವ ಸೋಂಕಿನ ವಿಷಯದಲ್ಲಿ ಮಾತ್ರ ಸಾಧ್ಯ ಎಂದು ದಾಖಲೆಗಳಿವೆ ಎಂದಿದ್ದಾರೆ.

ಬೇರೆ ವೈರಸ್ ನಂತೆ ಇದು ವರ್ತಿಸುವ ಸಾಧ್ಯತೆ
ಸದ್ಯಕ್ಕಂತೂ ಕೊವಿಡ್19 ರೋಗಿಗಳ ಇತಿಹಾಸದ ಆಧಾರದ ಮೇಲೆ ಸಂಶೋಧನೆ ನಡೆಸಲಾಗಿದ್ದು, ಒಮ್ಮೆ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಗೆ ಮತ್ತೊಮ್ಮೆ ಸೋಂಕು ತಗುಲುವುದು ಸಾಧ್ಯವಿಲ್ಲ, ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಸೋಂಕಿನ ಬಗ್ಗೆ antibody ಪರೀಕ್ಷೆ ನಡೆದಿಲ್ಲ, ಲಸಿಕೆ ಸಿಕ್ಕ ಬಳಿಕ ಸ್ಪಷ್ಟವಾಗಿ ಹೇಳಬಹುದು ಎಂದು ಪ್ರೊ ಜಾನ್ ಕೊಹೆನ್ ಹೇಳಿದ್ದಾರೆ.

ರೋಗ ತಡೆಗಟ್ಟುವುದೇ ಪರಿಹಾರ
ಕೊರೊನಾ ವೈರಸ್ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು. ಒಂದೊಮ್ಮೆ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ.

ಕೊರೊನಾ ಸಹಾಯವಾಣಿ
ಸಹಾಯವಾಣಿ: ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್ ಚಾಟ್ಬಾಟ್ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075












Click it and Unblock the Notifications