ಶ್ರೀಲಂಕಾ ಸರಣಿ ಸ್ಫೋಟ; ಬಾಂಬರ್ ಗಳ ಹಣ, ಆಸ್ತಿ ವಶಕ್ಕೆ
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸರಣಿ ಸ್ಫೋಟದ ಬಾಂಬರ್ ಗಳಿಗೆ ಸೇರಿದ ನಗದು, ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಹದಿನಾಲ್ಕು ಕೋಟಿ ಶ್ರೀಲಂಕನ್ ರುಪಾಯಿ ನಗದು ಹಾಗೂ ಏಳುನೂರು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಅಪರಾಧ ತನಿಖಾ ದಳ (ಸಿಐಡಿ)ದಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪೊಲೀಸ್ ವಕ್ತಾರರಾದ ರುವಾನ್ ಗುಣಶೇಖರ ಮಾತನಾಡಿ, ಸಿಐಡಿಯಿಂದ ನಗದಿನ ಕೆಲ ಭಾಗ ವಶಕ್ಕೆ ಪಡೆಯಲಾಗಿದೆ. ಇನ್ನು ಬಾಕಿ ಶಂಕಿತರ ಬ್ಯಾಂಕ್ ಖಾತೆಗಳಲ್ಲಿ ಇದೆ. ಇತ್ತೀಚೆಗೆ ನಡೆದ ಸರಣಿ ಸ್ಫೋಟದಲ್ಲಿ ಇನ್ನೂರೈವತ್ತು ಮಂದಿ ಮೃತಪಟ್ಟಿದ್ದರು. ಅದರ ಭಾಗವಾಗಿ ನಡೆಯುತ್ತಿರುವ ತನಿಖೆಯ ಬೆಳವಣಿಗೆ ಇದಾಗಿದೆ.
ದಾಳಿ ನಡೆದು ಹದಿನೈದು ದಿನದ ತನಕ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಲೇ ಇದೆ. ಯಾವುದೇ ಆತಂಕ ಎದುರಾಗದಂತೆ ದಾಳಿಗಳನ್ನು ನಡೆಸಲಾಗುತ್ತಿದೆ. ಸರಣಿ ಸ್ಫೋಟದ ವರದಿ ಆದ ಮೇಲೆ ಮೊದಲ ಬಾರಿಗೆ ಭಾನುವಾರದಂದು ನೆಗೊಂಬೋದಲ್ಲಿ ಮುಸ್ಲಿಮರಿಗೆ ಸೇರಿದ ಮನೆಗಳು ಹಾಗೂ ವಾಹನಗಳ ಮೇಲೆ ದಾಳಿ ನಡೆದಿದೆ.

ಭಾನುವಾರ ರಾತ್ರಿ ದಾಳಿ ವರದಿಯಾದ ನಂತರ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದಾರೆ. ಸರಕಾರದಿಂದ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಮಧ್ಯೆ ಶ್ರೀಲಂಕಾ ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥ ಮಾಲ್ಕಂ ರಂಜಿತ್ ಅವರು, ಶಾಂತಿ ಕಾಪಾಡುವಂತೆ ಕ್ರಿಶ್ಚಿಯನ್, ಬೌದ್ಧರು ಹಾಗೂ ಮುಸ್ಲಿಮರನ್ನು ಮನವಿ ಮಾಡಿದ್ದಾರೆ.
ಸರಣಿ ಸ್ಫೋಟದ ನಂತರ ಸೋಮವಾರದಂದು ಚರ್ಚ್ ಗಳು ಪುನರಾರಂಭ ಆಗಿದ್ದು, ಬಹುತೇಕ ಖಾಲಿಖಾಲಿಯಾಗಿದ್ದವು. ಇನ್ನು ಶಾಲೆಗಳಲ್ಲಿಯೂ ಅದೇ ಸ್ಥಿತಿಯಿತ್ತು. ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿರಲಿಲ್ಲ. ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ. ರಮ್ಜಾನ್ ಮಾಸವು ಆರಂಭಗೊಂಡಿರುವುದರಿಂದ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.












Click it and Unblock the Notifications