Pakistan: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: ಸಿಸಿಟಿವಿಯಿಂದ ದಾಳಿಕೋರರ ಗುರುತು ಪತ್ತೆ
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಪಾಕಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಶುಕ್ರವಾರ ಆತ್ಮಹುತಿ ಬಾಂಬರ್ ಬಾಂಬ್ ಸ್ಪೋಟಿಸಿದ್ದಾನೆ.
ಘಟನೆಯಲ್ಲಿ ಧರ್ಮಗುರು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಖೈಬರ್ ಪಖ್ತುನ್ಖ್ವಾ ಪೊಲೀಸರು ಸಿಸಿಟಿವಿ ಮೂಲಕ ದಾಳಿಯ ಆತ್ಮಹುತಿ ಬಾಂಬರ್ಗಳನ್ನು ಗುರುತಿಸಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ಜಿಲ್ಲಾ ಮುಖ್ಯಸ್ಥ ಮೌಲಾನಾ ಅಬ್ದುಲ್ಲಾ ನದೀಮ್ ಕೂಡ ಸೇರಿದ್ದಾರೆ. ಮಸೀದಿಯ ಪ್ರವಚನ ಪೀಠದಲ್ಲಿ (ಧರ್ಮೋಪದೇಶ ನೀಡುವ ಸ್ಥಳದಲ್ಲಿ) ಆತ್ಮಹುತಿ ಬಾಂಬರ್ ಬಾಂಬ್ ಸ್ಪೋಟಿಸಿದ್ದಾನೆ.
ಈ ಹಿಂದೆಯೂ ಮಸೀದಿ ಮೇಲೆ ಬಾಂಬ್ ದಾಳಿ
ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ಮತ್ತು ಪರಿಹಾರ ತಂಡಗಳು ಗಾಯಾಳುಗಳನ್ನು ವಾನಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಖೈಬರ್ ಪಖ್ತುಂಖ್ವಾದಲ್ಲಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ವಿಶೇಷವಾಗಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿಯೇ ಬಾಂಬ್ ಸ್ಪೋಟಿಸಲಾಗಿದೆ.
ಕಳೆದ ತಿಂಗಳು ದಾರುಲ್ ಉಲೂಮ್ ಹಕ್ಕಾನಿಯಾ ಮದರಸಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಜೆಯುಐ-ಎಸ್ ನಾಯಕ ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಸೇರಿದಂತೆ ಆರು ಜನರು ಸಾವನ್ನಪ್ಪಿದರು ಮತ್ತು 15 ಜನರು ಗಾಯಗೊಂಡಿದ್ದರು.
ಮದರಸಾ ಮತ್ತು ಬನ್ನು ಕಂಟೋನ್ಮೆಂಟ್ ಮೇಲೆ ದಾಳಿ
ದಾರುಲ್ ಉಲೂಮ್ ಹಕ್ಕಾನಿಯಾ ಮತ್ತು ಬನ್ನು ಕಂಟೋನ್ಮೆಂಟ್ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆತ್ಮಹತ್ಯಾ ಬಾಂಬರ್ಗಳ ದೇಹದ ಭಾಗಗಳಿಂದ ಪೊಲೀಸರು ಆತ್ಮಹತ್ಯಾ ಬಾಂಬರ್ಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಬನ್ನು ಕಂಟೋನ್ಮೆಂಟ್ನಲ್ಲಿ ನಡೆದ ದಾಳಿಯಲ್ಲಿ ಐವರು ಸೈನಿಕರು ಮತ್ತು 13 ನಾಗರಿಕರು ಸಾವನ್ನಪ್ಪಿದ್ದರೆ, 16 ಭಯೋತ್ಪಾದಕರು ಸಾವನ್ನಪ್ಪಿದ್ದರು. ಬನ್ನು ಕಂಟೋನ್ಮೆಂಟ್ ದಾಳಿಯಲ್ಲಿ ಬಳಸಲಾದ ವಾಹನಗಳನ್ನು ಟ್ರ್ಯಾಕ್ ಮಾಡಲಾಗಿತ್ತು. ಅದರಲ್ಲಿ ವಿದೇಶಿ ಶಸ್ತ್ರಾಸ್ತ್ರಗಳನ್ನು ಬಳಸಲಾಗಿರುವುದು ಗೊತ್ತಾಗಿದೆ. ಈ ಮಧ್ಯೆ ಬನ್ನು ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಕುರ್ರಂ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಶಂಕಿತರ ಬಂಧನ
ಅದೇ ಸಮಯದಲ್ಲಿ ಕುರ್ರಂ ಜಿಲ್ಲೆಯಲ್ಲಿ ಅಶಾಂತಿ ಹರಡಿದ ಆರೋಪದ ಮೇಲೆ 100 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಅಲ್ಲದೆ ಖೈಬರ್ ಪಖ್ತುಂಖ್ವಾದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಲು ಹೊಸ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲೇ ಸೇಫ್ ಸಿಟಿ ಯೋಜನೆಯನ್ನು ಪ್ರಾರಂಭಿಸಲಾಗುವುದು, ಇದು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಐಜಿಪಿ ಜುಲ್ಫಿಕರ್ ಹಮೀದ್ ಹೇಳಿದ್ದಾರೆ.












Click it and Unblock the Notifications