ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?
ಪುಲ್ವಾಮಾ ಜಿಲ್ಲೆಯ ಅವಂತಿಪೋರ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಂದು ಮುಂಜಾನೆ ಭಾರತ ವಾಯುದಾಳಿ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ ಉಗ್ರರ ನೆಲೆ ಮೇಲೆ ಭಾರಿ ಪ್ರಮಾಣದ ಬಾಂಬ್ ಹಾಕಿರುವ ಸುದ್ದಿ ಬಂದಿದೆ. ಈ ಸಂದರ್ಭದಲ್ಲಿ ಉಗ್ರರು ನೆಲೆಸಿದ್ದ ಆ ತಾಣ ಬಾಲಕೋಟ್ ಸದ್ಯ ಟ್ರೆಂಡಿಂಗ್ ನಲ್ಲಿದೆ.
ಭಾರತೀಯ ವಾಯುಸೇನೆಯು ಭಯೋತ್ಪಾದಕ ನೆಲೆಯ ಮೇಲೆ 1000 ಕೆಜಿ ಬಾಂಬ್ ಅನ್ನು ಎಸೆದಿರುವುದಾಗಿ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 12 ಮೀರಜ್ 2000 ಜೆಟ್ ವಿಮಾನವು ಬೆಳಿಗ್ಗೆ 3:30 ರ ಸುಮಾರಿಗೆ ಉಗ್ರ ನೆಲೆಯ ಏಲೆ ಬಾಂಬಿನ ಸುರಿಮಳೆಗರೆದಿದೆ ಎಂದು ಈ ವರದಿ ತಿಳಿಸಿದೆ.
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರದೇಶ
ಬಾಲಾಕೋಟ್- ಪಾಕಿಸ್ತಾನದ ಅಬ್ಬೋಟಾಬಾ ನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಅಬೊಟಾಬಾದ್ ನಲ್ಲೇ ಜಾಗತಿಕ ಉಗ್ರ ಒಸಾಮಾ ಬಿಲ್ ಲಾಡೆನ್ ತನ್ನ ಅಡಗುತಾಣವನ್ನು ಹೊಂದಿದ್ದ. ಖೈಬರ್ ಪಖ್ತುಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಗೆ ಈ ತಾಣ ಸೇರುತ್ತದೆ. 2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬಾಲಕೋಟ್ ಪಟ್ಟಣ ಸಂಪೂರ್ಣ ನಾಶವಾಗಿಬಿಟ್ಟಿತ್ತು. ಪಾಕಿಸ್ತಾನ ಹಾಗೂ ಸೌದಿ ಸಾರ್ವಜನಿಕ ಭೂಕಂಪ ಸಂತ್ರಸ್ತರ ನೆರವು ಪಡೆಯಿಂದ ಈ ಪಟ್ಟಣವನ್ನು ಪುನರ್ ನಿರ್ಮಿಸಲಾಗಿದೆ.

ಖೈಬರ್ ನ ನೈನ್ ಸುಖ್ ಕಣಿವೆ ಪ್ರದೇಶ
ಕುನ್ಹಾರ್ ನದಿ ಇಲ್ಲಿನ ಪ್ರಮುಖ ನೀರಿನ ಆಸರೆಯಾಗಿದ್ದು, ಕಘನ್ ಕಣಿವೆ ಮೂಲಕ ಹಾದು ಝೇಲಂ ನದಿಯನ್ನು ಸೇರುತ್ತದೆ. ಚಳಿಗಾಲದಲ್ಲಿ ಸಂಪೂರ್ಣ ಮಂಜು ಮುಸುಕಿದ ವಾತಾವರಣ ಎದುರಿಸುವ ಈ ಪಟ್ಟಣ ನಿದ್ರಾವಸ್ಥೆಗೆ ಜಾರುತ್ತದೆ. ಇಲ್ಲಿನ ಗುಡ್ಡ ಗಾದು ಪ್ರದೇಶಗಳಲ್ಲಿ ಹೆಚ್ಚಿನ ಅಡಗು ತಾಣಗಳನ್ನು ಕಾಣಬಹುದು. ಮೈನಸ್ 3 ರಿಂದ ಪ್ಲಸ್ 40 ಡಿಗ್ರಿ ಸೆಲ್ಸಿಯಸ್ ತನಕ ವಾತವರಣದಲ್ಲಿ ಒಗ್ಗಿಕೊಳ್ಳಲು ಉಗ್ರರಿಗೆ ಕಠಿಣ ತರಬೇತಿ ನೀಡಲಾಗುತ್ತದೆ.

ರಾಯ್ ಬರೇಲಿಗೂ ಬಾಲಕೋಟ್ ಗೂ ನಂಟು
ಬಾಲಕೋಟ್ ಮೇಲೆ ದಾಳಿ ನಡೆಸಿದ ವಾಯುಸೇನೆ ಪೈಲಟ್ ಗಳು ಆಗ್ರಾ ಹಾಗೂ ಬರೇಲಿಯಿಂದ ಟೇಕಾಫ್ ಆಗಿದ್ದು ಎಂದು ತಿಳಿದು ಬಂದಿದೆ. ಹಾಗೆ ನೋಡಿದರೆ, ರಾಯ್ ಬರೇಲಿಗೂ ಬಾಲಕೋಟ್ ಗೂ ನಂಟಿದೆ. ಸ್ವಾಬಿ ಹಾಗೂ ಅಂಬ್ ರಾಜ್ಯದಿಂದ ಹೊರ ಹಾಕಿದ ಮೇಲೆ ರಾಯ್ ಬರೇಲಿ ಮೂಲದ ತೆಹ್ರಿಕ್ ಉಲ್ ಮುಜಾಹಿದ್ದೀನ್ ನ ಸೈಯದ್ ಅಹದ್ ಬರೆಲ್ವಿ ಹಾಗೂ ಶಾ ಇಸ್ಮಾಯಿಲ್ ಅವರು ಬಾಲಕೋಟ್ ನಲ್ಲಿ ನೆಲೆ ಕಂಡು ಕೊಂಡಿದ್ದರು.ಇಲ್ಲಿ ಅಳಿದುಳಿದವರ ಮೇಲೆ ಲಾಹೋರ್ ದರ್ಬಾರ್ ಹೆಸರಿನ ಸಿಖ್ ಪಡೆ ದಾಳಿ ನಡೆಸಿ ಎಲ್ಲರನ್ನು ಕೊಂದು ಹಾಕಿತ್ತು. ಹೀಗಾಗಿ ಈ ಪ್ರದೇಶವನ್ನು ಹುತಾತ್ಮಾರ ನಾಡು -ಶಾಹುದಾ ಕಿ ಸರ್ಜಮೀನ್ ಎಂದು ಕರೆಯಲಾಗುತ್ತದೆ.
|
ಬಾಲಕೋಟ್ ಬಗ್ಗೆ ವಿವರಣೆ ಇಲ್ಲಿದೆ
ಬ್ರಿಟಿಷರ ಕಾಲದಲ್ಲಿ ಜೇಮ್ಸ್ ಅಬಾಟ್ ಎಂಬಾತ, ಇಲ್ಲಿನ ಸಿಖ್ ದಂಗೆಯನ್ನು ಶಮನಗೊಳಿಸಿ, ಸೈಯದ್ ಅಹ್ಮದ್ ನಂಬಿಕಸ್ಥರನ್ನು ಒಟ್ಟುಗೂಡಿಸಿದ. ಹಜಾರ, ಹರಿಪುರ್ , ಕೊಹಿಸ್ತಾನ್ ತನಕ ಪ್ರಾಬಲ್ಯ ಸಿಕ್ಕಿತು. ಸದ್ಯ ಇಲ್ಲಿ ಗುಜ್ಜಾರ್, ಅವಾನ್, ಸ್ವಾತಿ, ಸೈಯದ್, ತುರ್ಕ್, ಮುಘಲ್ ಹಾಗೂ ಹಾಂಕಿ ಬುಡಕಟ್ಟು ಜನಾಂಗದವರಿದ್ದಾರೆ.












Click it and Unblock the Notifications