3000 ಸಾವಿರ ಸೈನಿಕರನ್ನು ಕಳೆದುಕೊಂಡ ಅಜೆರ್ಬೈಜಾನ್ ಆರ್ಮಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದಲ್ಲಿ ಅಜೆರ್ಬೈಜಾನ್ ಸೇನೆಯ ಸುಮಾರು 3000 ಸಾವಿರ ಸೈನಿಕರು ಮೃತಪಟ್ಟಿದ್ದಾರೆ. ಈ ಕುರಿತು ಅಜೆರ್ಬೈಜಾನ್ ಅಧಿಕೃತವಾಗಿ ಮಾಹಿತಿ ನೀಡಿದೆ. 2800 ಸೈನಿಕರ ದೇಹಗಳು ಈವರೆಗೂ ಸಿಕ್ಕಿದ್ದರೆ, 100ಕ್ಕೂ ಹೆಚ್ಚು ಅಜೆರ್ಬೈಜಾನ್ ಸೈನಿಕರು ನಾಪತ್ತೆಯಾಗಿ ತಿಂಗಳುಗಳೇ ಕಳೆದಿವೆ. ಈ ಪೈಕಿ ಬಹುಪಾಲು ಜನರು ಯುದ್ಧದಲ್ಲಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಇದು ಕೇವಲ ಅಜೆರ್ಬೈಜಾನ್ ಕಳೆದುಕೊಂಡಿರುವ ಸೈನಿಕರ ಲೆಕ್ಕ.
ಆದರೆ ಅರ್ಮೇನಿಯ ಕಥೆ ಕೂಡ ಇದಕ್ಕಿಂತ ಘೋರ ಹಾಗೂ ಭೀಕರವಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ಕೋಳಿ ಜಗಳದಂತೆ ಆರಂಭವಾದ ಯುದ್ಧ, ಬರೋಬ್ಬರಿ 2 ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಸೈನಿಕರು ಸೇರಿದಂತೆ ಹತ್ತಾರು ಸಾವಿರ ಜನರು ಜೀವವನ್ನೇ ಬಿಡಬೇಕಾಯಿತು.
ಇಬ್ಬರ ನಡುವೆ ಯುದ್ಧ ನಿಲ್ಲಿಸಲು ಜಗತ್ತಿನ ಘಟಾನುಘಟಿ ರಾಷ್ಟ್ರಗಳೇ ಪ್ರಯತ್ನಿಸಿದ್ದರೂ ಪ್ರಯೋಜನಕ್ಕೆ ಬರಲಿಲ್ಲ. ಕಡೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಾರ್ಯತಂತ್ರ ವರ್ಕೌಟ್ ಆಗಿದ್ದು, ಯುದ್ಧ ನಿಂತಿದೆ. ಆದರೆ ಯುದ್ಧ ಮುಗಿದ ನಂತರ ಒಂದೊಂದೇ ಭಯಾನಕ ಸಂಗತಿಗಳು ಹೊರಬರುತ್ತಿವೆ.

ನಗೊರ್ನೊ-ಕರಬಾಖ್ ಅಜೆರ್ಬೈಜಾನ್ ವಶಕ್ಕೆ
ರಷ್ಯಾ ಜೊತೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಗೊರ್ನೊ-ಕರಬಾಖ್ ಪ್ರದೇಶವನ್ನು ಅರ್ಮೇನಿಯ ಪಡೆಗಳು ಅಜೆರ್ಬೈಜಾನ್ ವಶಕ್ಕೆ ನೀಡಿವೆ. ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಶತಮಾನಗಳಿಂದ ವಾಸವಿದ್ದ ಅರ್ಮೇನಿಯನ್ನರು ಈಗಾಗಲೇ ಜಾಗ ಖಾಲಿ ಮಾಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಅಜೆರ್ಬೈಜಾನ್ ಪಡೆಗಳು ಸಂಪೂರ್ಣ ಹಿಡಿತ ಸಾಧಿಸಿದ್ದು, ರಷ್ಯಾ ಸೇನೆ ಕೂಡ ಇದಕ್ಕಾಗಿ ಸಾಥ್ ನೀಡಿತ್ತು.
ನಗೊರ್ನೊ-ಕರಬಾಖ್ ಪ್ರದೇಶದಿಂದ ಮನೆ ತೊರೆಯುವ ಮುನ್ನ ಅರ್ಮೇನಿಯನ್ನರು, ಬೆಂಕಿ ಹಚ್ಚಿದ್ದರು. ನಾವು ವಾಸವಿದ್ದ ಮನೆ ಬೇರೆಯವರ ಪಾಲಾಗುವುದು ಬೇಡ ಎಂಬ ಕಾರಣಕ್ಕೆ ಈ ರೀತಿ ಅವರು ತಮ್ಮ ಕನಸಿನ ಮನೆಗಳಿಗೆ ಬೆಂಕಿ ಹಚ್ಚಿ ಊರುಬಿಟ್ಟಿದ್ದರು. ಇಂತಹ ಕರುಣಾಜನಕ ದೃಶ್ಯಗಳ ಬೆನ್ನಲ್ಲೇ ಇಡೀ ನಗೊರ್ನೊ-ಕರಬಾಖ್ ಪ್ರದೇಶ ಅಜೆರ್ಬೈಜಾನ್ ಪಡೆಗಳ ವಶವಾಗಿದೆ.

ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿದ್ದವು. ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. 2020ರಲ್ಲಿ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿತ್ತು. ಎರಡೂ ದೇಶಗಳ ನಾಯಕರ ದುರಾಸೆಗೆ ಹತ್ತಾರು ಸಾವಿರ ಜೀವಗಳು ಬಲಿಯಾಗಿವೆ.

1994ರಲ್ಲಿ 30 ಸಾವಿರ ಜನರ ಸಾವು
ಸದ್ಯದಮಟ್ಟಿಗೆ ಹೇಳುವುದಾದರೆ ಈಗಿನ ಸಾವು-ನೋವುಗಳು 1990ರ ದಶಕಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ಏಕೆಂದರೆ 1994ರ ಆಸುಪಾಸಿನಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಹೀಗೆ ಮೆಲ್ಲಗೆ ಯುದ್ಧ ಆರಂಭವಾಗಿ ಸುಮಾರು 30 ಸಾವಿರ ಜನರನ್ನು ಬಲಿಪಡೆದಿತ್ತು. 2020ರಲ್ಲೂ ಆ ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಆತಂಕಕ್ಕೆ ರಷ್ಯಾ ಬ್ರೇಕ್ ಹಾಕಿದೆ. ಅದೆಷ್ಟು ಹೇಳಿದರೂ ಮಾತು ಕೇಳದ ಎರಡೂ ದೇಶಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಠಿಣ ಸಂದೇಶ ರವಾನಿಸಿದ್ದರು. ಪುಟಿನ್ ಆದೇಶಕ್ಕೆ ಬೆಚ್ಚಿಬಿದ್ದು ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಒಪ್ಪಿದ್ದವು.

ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು. ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು.
ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.

ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು.
ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
Recommended Video

ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications