ಕೋವಿಡ್-19 ನಿಯಮಗಳ ಉಲ್ಲಂಘನೆ: ಕೆಲಸದಿಂದ ವಜಾಗೊಂಡ ಸೇನೆಯ ಮುಖ್ಯಸ್ಥ
ವಿಶ್ವದಾದ್ಯಂತ ಇಲ್ಲಿಯವರೆಗೂ 7,199,306 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೂ 35,36,274 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 408,734 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ.
ಜಗತ್ತಿನಾದ್ಯಂತ ಸದ್ಯ 32,54,298 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 53,797 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇನ್ನು, ಏಷ್ಯಾದಲ್ಲಿರುವ ಆರ್ಮೇನಿಯ ಎಂಬ ರಾಷ್ಟ್ರದ ಪರಿಸ್ಥಿತಿ ನೋಡಿದ್ರೆ.. ಅಲ್ಲಿ ಈವರೆಗೂ 13,325 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ 4,099 ಮಂದಿ ಗುಣಮುಖರಾಗಿದ್ದರೆ, 211 ಮಂದಿ ಮೃತಪಟ್ಟಿದ್ದಾರೆ.
ಹೀಗಿರುವಾಗಲೇ, ಕೋವಿಡ್-19 ತಡೆಗಟ್ಟಲು ರೂಪಿಸಲಾಗಿರುವ ನಿಯಮಗಳನ್ನು ಗಾಳಿಗೆ ತೂರಿದರು ಎಂಬ ಕಾರಣಕ್ಕೆ ಆರ್ಮೇನಿಯದ ಆರ್ಮಿ ಮುಖ್ಯಸ್ಥ, ಪೊಲೀಸ್ ಮತ್ತು ಸೆಕ್ಯೂರಿಟಿ ಚೀಫ್ ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಕೆಲಸದಿಂದ ವಜಾಗೊಳಿಸಿದ ಪ್ರಧಾನಿ
ಆರ್ಮಿ, ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಸೇವೆಯ ಮುಖ್ಯಸ್ಥರನ್ನು ಆರ್ಮೇನಿಯದ ಪ್ರಧಾನ ಮಂತ್ರಿ ನಿಕೋಲ್ ಪಶಿನಿಯನ್ ಕೆಲಸದಿಂದ ವಜಾಗೊಳಿಸಿದ್ದಾರೆ.

ಪಾರ್ಟಿ ಆಯೋಜನೆ
ಆರ್ಮಿ, ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಸೇವೆಯ ಮುಖ್ಯಸ್ಥರನ್ನು ಕೆಲಸದಿಂದ ವಜಾಗೊಳಿಸಿದ್ದಕ್ಕೆ ಆರ್ಮೇನಿಯದ ಪ್ರಧಾನಿ ಕಾರಣ ನೀಡಿಲ್ಲ. ಆದರೆ, ಪತ್ರಿಕೆಯೊಂದರ ಪ್ರಕಾರ, ಸೇನೆಯ ಮುಖ್ಯಸ್ಥ ಅರ್ತಕ್ ದಾವ್ತ್ಯನ್ ಕಳೆದ ಭಾನುವಾರ ಮಗನ ಮದುವೆಗಾಗಿ ಪಾರ್ಟಿ ಆಯೋಜಿಸಿದ್ದರು. ಆ ಸಮಯದಲ್ಲಿ ನೂರಾರು ಜನ ಸೇರಿದ್ದರು.
ಆರ್ಮೇನಿಯದಲ್ಲಿ ಕೋವಿಡ್-19 ತಡೆಗಟ್ಟಲು ರೂಪಿಸಿರುವ ನಿಯಮಗಳ ಅನ್ವಯ, ಒಂದೇ ಕಡೆ ಹೆಚ್ಚು ಜನ ಸೇರುವಂತಿಲ್ಲ.

ಜನರಿಗೆ ಉದಾಹರಣೆಯಾಗಬೇಕಿತ್ತು.!
''ಉನ್ನತ ದರ್ಜೆಯ ಅಧಿಕಾರಿಗಳು ಜನರಿಗೆ ಉದಾಹರಣೆಯಾಗಿರಬೇಕು. ಸಾಂಕ್ರಾಮಿಕ ರೋಗ ವಿರೋಧಿ ನಿಯಮಗಳನ್ನು ಅನುಸರಿಸುವ ಪ್ರಾಮುಖ್ಯತೆ ತೋರಿಸಬೇಕು. ಆದ್ರೆ, ಇದಕ್ಕೆ ವಿರುದ್ಧದ ಘಟನೆ ನಡೆದಿದೆ'' ಎಂದು ಆರ್ಮೇನಿಯದ ಪ್ರಧಾನಿ ನಿಕೋಲ್ ಪಶಿನಿಯನ್ ತಿಳಿಸಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದ ಸೇನೆಯ ಮುಖ್ಯಸ್ಥ
''ನನ್ನ ಮಗನ ಮದುವೆಯ ಸಂಬಂಧ ಈವೆಂಟ್ ನಡೆಯುತ್ತಿತ್ತು. ಆದ್ರೆ, ನಾನು ಯಾವುದೇ ನಿಯಮಗಳು ಉಲ್ಲಂಘಿಸಿಲ್ಲ'' ಎಂದು ಸೇನೆಯ ಮುಖ್ಯಸ್ಥ ಅರ್ತಕ್ ದಾವ್ತ್ಯನ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಮೇನಿಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆಯಾದಂತೆ ಮೇ 14 ರಂದು ತುರ್ತು ಪರಿಸ್ಥಿತಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿತ್ತು.
ಅಸಲಿಗೆ, ನಿಕೋಲ್ ಪಶಿನಿಯನ್ ಮತ್ತು ಕುಟುಂಬಕ್ಕೂ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇದೀಗ ಅವರೆಲ್ಲರೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.












Click it and Unblock the Notifications