ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಹುಟ್ಟಿಕೊಂಡ ಹೊಸ 'ನೇರ ಶತ್ರು'
ದಲೈಲಾಮಾರನ್ನು ಭಾರತದೊಳಕ್ಕೆ ಬಿಟ್ಟುಕೊಂಡ ಭಾರತಕ್ಕೆ ತಕ್ಕ ಪಾಠ ಕಲಿಸಬೇಕೆಂದು 'ಚೀನಾ ಡೈಲಿ' ಹಾಗೂ 'ಗ್ಲೋಬಲ್ ಟೈಮ್ಸ್' ತಮ್ಮ ಸಂಪಾದಕೀಯ ಬರಹಗಳಲ್ಲಿ ಚೀನಾ ಸರ್ಕಾರವನ್ನು ಆಗ್ರಹಿಸಿವೆ.
ಬೀಜಿಂಗ್, ಏಪ್ರಿಲ್ 6: ಚೀನಾ ಸರ್ಕಾರದ ಆಕ್ಷೇಪದ ಹೊರತಾಗಿಯೂ ಟಿಬಿಟ್ ಧರ್ಮಗುರು ದಲೈಲಾಮಾ ಅವರನ್ನು ಭಾರತದೊಳಕ್ಕೆ ಬಿಟ್ಟುಕೊಂಡಿರುವ ಭಾರತಕ್ಕೆ ಬುದ್ಧಿ ಕಲಿಸಬೇಕಿದ್ದು, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಕೈ ಜೋಡಿಸಿ ಭಾರತಕ್ಕೆ ಆಘಾತಗಳನ್ನು ನೀಡಬೇಕೆಂದು ಚೀನಾದ ಎರಡು ಆಂಗ್ಲರ ಪತ್ರಿಕೆಗಳು ಆಗ್ರಹಿಸಿವೆ.
ಇದು ಮುಂಬರುವ ದಿನಗಳಲ್ಲಿ ಚೀನಾ ಸರ್ಕಾರ, ಕಾಶ್ಮೀರ ವಿಚಾರದಲ್ಲಿ ಪರೋಕ್ಷವಾಗಿ ರಾಜಕೀಯ ಆಟವಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಕಾಶ್ಮೀರ ವಿಚಾರದಲ್ಲಿ ಈಗಲೂ ಅದು ಪಾಕಿಸ್ತಾನವನ್ನೇ ಬೆಂಬಲಿಸುತ್ತಾ ಬಂದಿದ್ದರೂ ಅದನ್ನು ಇನ್ನು ಮುಂದೆ ರಾಜಾರೋಷವಾಗಿ ಮುಂದುವರಿಸುವ ನಿರ್ಧಾರ ಕೈಗೊಳ್ಳಬಹುದು ಎಂದೂ ಹೇಳಲಾಗುತ್ತಿದೆ. ಹಾಗಾಗದಲ್ಲಿ, ಕಾಶ್ಮೀರದ ವಿಚಾರದಲ್ಲಿ ಭಾರತಕ್ಕೆ ಇಬ್ಬರು ಶತ್ರುಗಳು ಸೃಷ್ಟಿಯಾದಂತಾಗುತ್ತದೆ.
ಚೀನಾ ಸರ್ಕಾರಿ ಕೃಪಾ ಪೋಷಿತ ಪತ್ರಿಕೆಗಳಾದ 'ಚೀನಾ ಡೈಲಿ' ಹಾಗೂ 'ಗ್ಲೋಬಲ್ ಟೈಮ್ಸ್' ಗುರುವಾರದ ತಮ್ಮ ಸಂಪಾದಕೀಯ ಬರಹದಲ್ಲಿ, ಚೀನಾ ಸರ್ಕಾರದ ಸತತ ಎಚ್ಚರಿಕೆಯ ನಡುವೆಯೂ ಅರುಣಾಚಲ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಲೈಲಾಮಾ ಅವರಿಗೆ ಅವಕಾಶ ನೀಡುವ ಮೂಲಕ ದ್ವಿಪಕ್ಷೀಯ ಒಪ್ಪಂದಗಳನ್ನು ಭಾರತ ಮರೆತಿದೆ ಎಂದು ಟೀಕಿಸಿವೆ. [ದಲೈ ಲಾಮಾ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಚೀನಾ ವಾರ್ನಿಂಗ್]
ಚೀನಾ ಸರ್ಕಾರ ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಭಾರತ ಸರ್ಕಾರವು ದಲೈಲಾಮಾ ಅವರಿಗೆ ತನ್ನ ನೆಲದೊಳಕ್ಕೆ ಪ್ರವಾಸ ಮಾಡಲು ಅನುವು ಮಾಡಿಕೊಡುವ ಮೂಲಕ ದ್ವಿಪಕ್ಷೀಯ ಸಂಬಂಧಗಳಿಗೆ ಅಪಮಾನ ಮಾಡಿದೆ. ಹಾಗಾಗಿ, ಭಾರತಕ್ಕೆ ಪೆಟ್ಟಿನ ಮೇಲೆ ಪೆಟ್ಟು ನೀಡುವಂಥ ರೀತಿಯಲ್ಲಿ ಸೂಕ್ತವಾಗಿ ಉತ್ತರ ನೀಡಲು ಚೀನಾ ಸರ್ಕಾರ ಸಿದ್ಧವಾಗಬೇಕು. ಇದಕ್ಕೆ ಯಾವುದೇ ಮುಲಾಜಿ ಹಿಡಿಯಬಾರದು ಎಂದು ಚೀನಾದ ಎರಡು ಆಂಗ್ಲ ಪತ್ರಿಕೆಗಳು ತಾಕೀತು ಮಾಡಿವೆ.
ಭಾರತದ ಈ ನಡೆ, ಉಗ್ರ ಅಜರ್ ಮಸೂದ್ ನ ಬಹಿಷ್ಕಾರ ವಿಚಾರದಲ್ಲಿ ವಿಶ್ವ ಸಂಸ್ಥೆ ಮೇಲೆ ಒತ್ತಡ ಹೇರಲು ಚೀನಾ ಸಹಕಾರ ನೀಡದಿದ್ದಕ್ಕೆ ಹಾಗೂ ಪರಮಾಣು ಪೂರೈಕೆ ಗುಂಪಿನಲ್ಲಿ (ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್) ಭಾರತಕ್ಕೆ ಸದಸ್ಯತ್ವ ಸಿಗಲು ಸಹಾಯ ಮಾಡದ್ದಕ್ಕೆ ಭಾರತವು ಈಗ ದಲೈಲಾಮಾ ವಿಚಾರದಲ್ಲಿ ಸೇಡು ತೀರಿಸಿಕೊಳ್ಳುವ ರೀತಿ ನಡೆದುಕೊಳ್ಳುತ್ತಿದೆ ಎಂದು ಪತ್ರಿಕೆಗಳು ಆರೋಪಿಸಿವೆ.
ಅಲ್ಲದೆ, ದಲೈಲಾಮಾ ಅವರನ್ನು ಭಾರತವು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದೂ ಹೇಳಿವೆ.
ಅರುಣಾಚಲ ಪ್ರದೇಶದ ಮೇಲೆ ಕಣ್ಣು: ಭಾರತದ ವಿದೇಶಾಂಗ ರಾಜ್ಯ ಸಚಿವರಾದ ಕಿರಣ್ ರಿಜಿಜು ವಿರುದ್ಧವೂ ಪತ್ರಿಕೆಗೆ ಕಿಡಿ ಕಾರಿವೆ. ಇತ್ತೀಚೆಗೆ, ಕಿರಣ್ ಅವರು, ''ಚೀನಾ ವಿರುದ್ಧ ನೀಡಿದ್ದ ಹೇಳಿಕೆಯನ್ನೂ ಪತ್ರಿಕೆಗಳು ಖಂಡಿಸಿವೆ. ''ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳುತ್ತಿದೆ. ಆದರೆ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ'' ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ಡೈಲಿ ಹಾಗೂ ಗ್ಲೋಬಲ್ ಟೈಮ್ಸ್, ''ಐತಿಹಾಸಿಕವಾಗಿ ಚೀನಾಕ್ಕೆ ಸೇರಿದ್ದ ಟಿಬೆಟ್ ನ ದಕ್ಷಿಣ ಭಾಗವನ್ನು ವಶದಲ್ಲಿಟ್ಟುಕೊಂಡಿರುವ ಭಾರತ, ಅದಕ್ಕೆ ಅರುಣಾಚಾಲ ಪ್ರದೇಶ ಎಂದು ಹೆಸರಿಟ್ಟು ಅದನ್ನು ತನ್ನ ಅವಿಭಾಜ್ಯ ಅಂಗ ಎಂದು ಘೋಷಿಸಿಕೊಳ್ಳುತ್ತಿದೆ'' ಎಂದು ಹೇಳಿವೆ.
ಕಿರಣ್ ವಿರುದ್ಧ ಕಿಡಿ: ಕಿರಣ್ ರೆಜಿಜು ಅವರು ಅರುಣಾಚಲದ ಪರವಾಗಿ ತಮ್ಮ ಹೇಳಿಕೆಗಳನ್ನು ಹೇಳುವ ಮೂಲಕ ತಮ್ಮನ್ನು ತಾವು ಮಹಾ ಬುದ್ಧಿವಂತರೆಂದು ತಿಳಿದುಕೊಳ್ಳಬೇಕಿಲ್ಲ. ಏಕೆಂದರೆ, ಅವರಿಗೆ ಕೆಲವಾರು ಸಂಗತಿಗಳ ಮಹತ್ವವೇನೆಂಬುದರ ಅರಿವಿಲ್ಲ. ತೈವಾನ್ ನಂತೆ ಟಿಬೆಟ್ ಕೂಡ ಚೀನಾಕ್ಕೆ ಸೇರಿದ್ದು. ಭಾರತ ಸರ್ಕಾರ ಇದನ್ನು ಒಪ್ಪಲಿ, ಬಿಡಲಿ, ನಾವು (ಚೀನಾ) ಅರುಣಾಚಲದ ಮೇಲಿನ ನಮ್ಮ ಹಕ್ಕನ್ನು ಪಡೆದೇ ಪಡೆಯುತ್ತೇವೆ'' ಎಂದು ಪತ್ರಿಕೆಗಳು ಹೇಳಿವೆ.