ಆಸ್ಪತ್ರೆಯ ಮೇಲೆ ಬಿತ್ತು ಬಾಂಬ್, 100 ಜನರ ಸಾವು?
ಇಸ್ರೇಲ್ ಸೇನೆ ನಡೆಸಿದ ಭೀಕರ ವಾಯುದಾಳಿ ವೇಳೆ ಗಾಜಾಪಟ್ಟಿಯಲ್ಲಿ ಆಸ್ಪತ್ರೆಯೇ ಛಿದ್ರ ಛಿದ್ರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾವಿರಾರು ಗಾಯಾಳುಗಳು ಉತ್ತರ ಗಾಜಾದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಸ್ರೇಲ್ ಸೇನೆ ನಡೆಸಿದ ವಾಯು ದಾಳಿ ವೇಳೆ, ಇಡೀ ಆಸ್ಪತ್ರೆ ಛಿದ್ರವಾಗಿದ್ದು ಸುಮಾರು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಇಸ್ರೇಲ್ ಮರುದಾಳಿ ಆರಂಭಿಸಿ ಗಾಜಾಪಟ್ಟಿ ನಗರವನ್ನೇ ನಾಶ ಮಾಡುತ್ತಿದೆ. ಅದರಲ್ಲೂ ಅಮಾಯಕರ ಜೀವ ಹಾನಿ ಬಗ್ಗೆ ಇಡೀ ಜಗತ್ತು ಆಕ್ರೋಶ ವ್ಯಕ್ತಪಡಿಸುತ್ತಿದೆ. ಹೀಗೆ ನೋಡ ನೋಡುತ್ತಲೇ ಗಾಜಾದಲ್ಲಿ 3000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 12,500 ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದಾಗ ಗಾಜಾಪಟ್ಟಿಯ ಆಸ್ಪತ್ರೆ ಒಂದರಲ್ಲಿ, ಚಿಕಿತ್ಸೆ ಪಡೆಯುತ್ತಿದ್ದ 100ಕ್ಕೂ ಹೆಚ್ಚು ಜನ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಯುದ್ಧದ ಕಿಡಿ ಮತ್ತಷ್ಟು ಧಗಧಗಿಸಲು ಕಾರಣವಾಗಿದೆ.

ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುತ್ತಾ?
ಹಾಗೆ ಇನ್ನೊಂದು ಕಡೆ ಇಸ್ರೇಲ್ ಸೇನೆ ಗಾಜಾಪಟ್ಟಿ ಜನರ ಮೇಲೆ ಒತ್ತಡ ಹೇರಿದೆ ಅಂತಾ ವಿಶ್ವಸಂಸ್ಥೆ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಗಾಜಾ ಪಟ್ಟಿಯ ನಾಗರಿಕರನ್ನ ಒತ್ತಾಯದಿಂದ ಇನ್ನೊಂದು ಕಡೆ ಕಳುಹಿಸುವ ಕ್ರಮ ಸರಿಯಲ್ಲ ಎಂದು ವಿಶ್ವಸಂಸ್ಥೆ, ಇಸ್ರೇಲ್ಗೆ ಎಚ್ಚರಿಕೆಯ ಸಂದೇಶ ನೀಡಿದೆ. ಹೀಗೆ ಮಾಡಿದ್ರೆ ಅದು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಕೂಡ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಇಷ್ಟಾದರೂ ಇಸ್ರೇಲ್ ಸೇನೆ ತನ್ನ ಡೆಡ್ಲಿ ಅಟ್ಯಾಕ್ ಮುಂದುವರಿಸಿದೆ.
ಇಸ್ರೇಲ್ ವಿರುದ್ಧ ಇರಾನ್ ಗುಡುಗು!
ಗಾಜಾ ಮೇಲೆ ನಡೆಸುತ್ತಿರುವ ದೌರ್ಜನ್ಯ ಕೂಡಲೇ ನಿಲ್ಲಿಸದಿದ್ದರೆ ಇಸ್ರೇಲ್ ಮತ್ತೊಂದು ಆಘಾತ ಎದುರಿಸುತ್ತೆ ಎಂದು ಇರಾನ್ ಎಲೈಟ್ ರೆವಲೂಷನರಿ ಗಾರ್ಡ್ಸ್ ಡೆಪ್ಯುಟಿ ಕಮಾಂಡರ್ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವೇಳೆ ಇಸ್ರೇಲ್ ದೇಶವನ್ನ ಕ್ಯಾನ್ಸರ್ ಗಡ್ಡೆಗೆ ಹೋಲಿಸಿದ್ದಾರಂತೆ ಇರಾನ್ನ ಕಮಾಂಡರ್ ಜಗತ್ತಿನ ಭೂಪಟದಿಂದ ಝಿಯಾನಿಸ್ಟ್ ಆಡಳಿತ ಅಂದ್ರೆ ಇಸ್ರೇಲ್ ಎಂಬ ಕ್ಯಾನ್ಸರ್ ಗಡ್ಡೆ ನಿರ್ಮೂಲನೆ ಆಗುವವರೆಗೆ ಈ ಭೀಕರ ಕಾರ್ಯಾಚರಣೆ ಮುಂದುವರಿಯುತ್ತೆ, ಅಂತಲೂ ಡೆಪ್ಯುಟಿ ಕಮಾಂಡರ್ ಅಲಿ ಫದಾವಿ ಗುಡುಗಿದ್ದ. ಹೀಗೆ ಎಚ್ಚರಿಕೆ ನೀಡಿದ ಬಳಿಕವೂ ದಾಳಿ ಮುಂದುವರಿಸಿದೆ ಇಸ್ರೇಲ್ನ ಸೇನೆ.
1979ರಲ್ಲಿ ಸಂಭವಿಸಿದ ಘಟನೆ ನಂತರ ಪ್ಯಾಲೆಸ್ತೀನ್ ವಿಷಯದಲ್ಲಿ, ಇರಾನ್ ಸದಾ ಸಪೋರ್ಟ್ ಕೊಡುತ್ತಿದೆ. ಹಮಾಸ್ ಬೆಂಬಲಕ್ಕೆ ತೆಹರಾನ್ ನೇರವಾಗಿ ನಿಲ್ಲುತ್ತಿದೆ. ಗಾಜಾಪಟ್ಟಿಯ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್ಗೆ ಹಣಕಾಸು & ಶಸ್ತ್ರಾಸ್ತ್ರ ಪೂರೈಕೆನ ಇರಾನ್ ಮಾಡುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗೆ ಇಷ್ಟೆಲ್ಲಾ ಆರೋಪದ ನಡುವೆ ಈಗ ಇಸ್ರೇಲ್ & ಹಮಾಸ್ ಜಗಳ ನಡೆಯುವಾಗ ಇರಾನ್ ಕಮಾಂಡರ್ ಹೇಳಿಕೆ ಕುರಿತು ಚರ್ಚೆ ಶುರುವಾಗಿದೆ. ಹಾಗೇ ಅತ್ತ ತನ್ನ ವಿರುದ್ಧ ಇರಾನ್ ಗುಡುಗುತ್ತಿದ್ದರೆ ಇತ್ತ ಇಸ್ರೇಲ್ ತನ್ನ ಪಾಡಿಗೆ ತಾನು ವಾಯುದಾಳಿ ಮುಂದುವರಿಸಿದೆ.

ಯುದ್ಧಕ್ಕೆ ಮತ್ತೊಂದು ದೇಶದ ಎಂಟ್ರಿ?
ಇರಾನ್ ಮುಖ್ಯಸ್ಥ ಖಮೆನೀ ಕೂಡ ಇಸ್ರೇಲ್ ವಿರುದ್ಧ ಗುಡುಗಿದ್ದು ಪ್ಯಾಲೆಸ್ತೀನ್ ಜನ್ರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಬ್ಬಾಳಿಕೆ ಹೀಗೆಯೇ ಮುಂದುವರಿದರೆ ಮುಸ್ಲಿಮರನ್ನ ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೂ ಮೊದಲೇ ಗಾಜಾ ಮೇಲೆ ಮಾಡುತ್ತಿರುವ ಬಾಂಬ್ ದಾಳಿ ನಿಲ್ಲಿಸಬೇಕು ಎಂದು ಇಸ್ರೇಲ್ಗೆ ಖಮೆನೀ ವಾರ್ನಿಂಗ್ ಕೂಡ ಕೊಟ್ಟಾಗಿದೆ. ಹೀಗಾಗಿ, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಇದರ ನಡುವೆ ಆಸ್ಪತ್ರೆ ಮೇಲೆಯೇ ಇಸ್ರೇಲ್ನ ಸೇನೆ ದಾಳಿ ನಡೆಸಿ, 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿರುವ ಆರೋಪ ಇದೀಗ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications