ಈಗ ಭಾರತೀಯರಿಗೆ ಸಿಂಗಾಪುರದಿಂದಲೂ ವೀಸಾ ಪ್ರಮಾಣ ಕಡಿತ
ಸಿಂಗಾಪುರದಲ್ಲಿ ನೆಲೆ ನಿಂತಿರುವ ಐಟಿ ಕಂಪನಿಗಳಾದ ಎಚ್ ಸಿಎಲ್, ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಕಾಗ್ನಿಝೆಂಟ್ ಹಾಗೂ ಎಲ್ ಆ್ಯಂಡ್ ಟಿಗೆ ಸಿಂಗಾಪುರ ಸರ್ಕಾರ ನೋಟಿಸ್ ಜಾರಿಗೊಳಿಸಿ, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯಿಸಿದೆ.
ಸಿಂಗಾಪುರ, ಏಪ್ರಿಲ್ 3: ಅಮೆರಿಕ ಸರ್ಕಾರದ ನಂತರ, ಇದೀಗ ಸಿಂಗಾಪುರ ಸರ್ಕಾರವೂ ತನ್ನಲ್ಲಿ ಕೆಲಸಕ್ಕಾಗಿ ಆಗಮಿಸುವ ಭಾರತೀಯ ಟೆಕ್ಕಿಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಟೆಕ್ಕಿಗಳಿಗೆ ನೀಡುವ ವಾರ್ಷಿಕ ವೀಸಾ ಸಂಖ್ಯೆಯಲ್ಲಿ ಕಡಿತ ಮಾಡುವ ನಿರ್ಧಾರ ಕೈಗೊಂಡಿದೆ.
ಕಳೆದ ವರ್ಷ ಜನವರಿಯಲ್ಲೇ ಸಿಂಗಾಪುರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿತ್ತು. ಇತ್ತೀಚೆಗೆ, ಈ ಪ್ರಕ್ರಿಯೆಯನ್ನು ಸರ್ಕಾರ ಚುರುಕುಗೊಳಿಸಿದೆ.
ಸಿಂಗಾಪುರದಲ್ಲಿ ನೆಲೆ ನಿಂತಿರುವ ಐಟಿ ಕಂಪನಿಗಳಾದ ಎಚ್ ಸಿಎಲ್, ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಕಾಗ್ನಿಝೆಂಟ್ ಹಾಗೂ ಎಲ್ ಆ್ಯಂಡ್ ಟಿಗೆ ನೋಟಿಸ್ ಜಾರಿಗೊಳಿಸಿರುವ ಸಿಂಗಾಪುರ ಸರ್ಕಾರ, ಸಿಂಗಾಪುರದಲ್ಲಿ ನೆಲೆನಿಂತಿರುವ ಐಟಿ ಕಂಪನಿಗಳು ನೇಮಕಾತಿಗಳಲ್ಲಿ ಸ್ಥಳೀಯರಿಗೇ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸ್ಕಾಮ್ (NASCOM-National Association of Software and Services Companies) ಅಧ್ಯಕ್ಷ ಆರ್. ಚಂದ್ರಶೇಖರ್, ''ಸಿಂಗಾಪುರ ಸರ್ಕಾರ ಸೂಚನೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇವೆ'' ಎಂದು ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.