ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಏಕೆ ಬಹುನಿರೀಕ್ಷಿತ?
ನವದೆಹಲಿ, ಸೆಪ್ಟೆಂಬರ್ 25: ಯುಎಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಕ್ವಾಡ್ ನಾಯಕರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣದ ಮೇಲೆ ಇಡೀ ಜಗತ್ತಿನ ಲಕ್ಷ್ಯ ನೆಟ್ಟಿರುವುದರ ಹಿಂದೆ ಸಾಕಷ್ಟು ಕಾರಣಗಳಿವೆ.
ಭಾರತೀಯ ಕಾಲಮಾನದ ಪ್ರಕಾರ, ಶನಿವಾರ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾವೈರಸ್ ನಿಂದ ಚೇತರಿಸಿಕೊಳ್ಳುವುದು, ಸಮರ್ಥ ಪುನರ್ನಿರ್ಮಾಣ, ಜಗತ್ತಿನ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಭರವಸೆ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷೆಯಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಜಾಗತಿಕ ನಾಯಕರನ್ನು ಒಂದು ಸೂರಿನಡಿ ಸೇರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಭಾಷಣವೇಕೆ ಬಹುನಿರೀಕ್ಷಿತ?:
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾಡಲಿರುವ ಭಾಷಣವು ವಿಶ್ವದ ಇತರೆ ನಾಯಕರಿಗಿಂತ ಬಹುನಿರೀಕ್ಷಿತವಾಗಿದೆ. ಏಕೆಂದರೆ ಈ ಹಿಂದೆ ಪ್ರಪಂಚ ಎದುರಿಸುತ್ತಿದ್ದ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವರ ನೀಡುವುದು, ಹಾಗೂ ಸ್ಥಳೀಯ ವಿಷಯಗಳ ಬಗ್ಗೆ ಕಾಳಜಿ ಹಾಗೂ ಸಾಧನೆಗಳ ಕುರಿತು ಹೆಚ್ಚಿನ ಪ್ರಾಮುಖ್ಯತೆಗಳೊಂದಿಗೆ ಪ್ರಸ್ತಾಪಿಸುವ ನಿರೀಕ್ಷೆಗಳಿವೆ," ಎಂದು ಟಿಎಸ್ ತಿರುಮೂರ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುವ ಪ್ರಮುಖ ಅಂಶಗಳು:
ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ರಾಷ್ಟ್ರವಾಗಿರುವ ಭಾರತವು ಭದ್ರತಾ ಮಂಡಳಿಯ ಸದಸ್ಯನಾಗಿ ತನ್ನ ವಿಷಯ ಪ್ರಸ್ತಾಪಿಸಲಿದೆ. ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿಗಳು, ಕೊವಿಡ್-19 ಲಸಿಕೆಗಳ ಲಭ್ಯತೆ ಮತ್ತು ಸಮಾಂತರ ಹಂಚಿಕೆ, ಬಡತನ ನಿರ್ಮೂಲನೆ ಮುಂತಾದ ಜಾಗತಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಇದರ ಜೊತೆಗೆ ಆರ್ಥಿಕ ಚೇತರಿಕೆ, ಮಹಿಳಾ ಸಬಲೀಕರಣ ಮತ್ತು ಸರ್ಕಾರಿ ರಚನೆಗಳಲ್ಲಿ ಅವರ ಭಾಗವಹಿಸುವಿಕೆ, ಭಯೋತ್ಪಾದನೆ, ಶಾಂತಿಪಾಲನೆ ಮತ್ತು ಶಾಂತಿ ನಿರ್ಮಾಣ, ಯುಎನ್ಎಸ್ ಸಿ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ.
2020ರಲ್ಲಿ ವರ್ಚುವಲ್ ಸಭೆ:
ಕಳೆದ 2020ರಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯನ್ನು ವರ್ಚುವಲ್ ಸಭೆ ನಡೆಸಲಾಗಿತ್ತು. ಅಂದು ನಮಗೆ ಬೇಕಾದ ಭವಿಷ್ಯ, ನಮಗೆ ಅಗತ್ಯವಿರುವ ವಿಶ್ವಸಂಸ್ಥೆ, ಬಹುಪಕ್ಷೀಯತೆಗೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸುತ್ತಿದೆ, ಪರಿಣಾಮಕಾರಿ ಬಹುಪಕ್ಷೀಯ ಕ್ರಿಯೆಯ ಮೂಲಕ ಕೊವಿಡ್ ಅನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು.












Click it and Unblock the Notifications