ಬೃಹತ್ ಕೈಗಾರಿಕೆಗಳಿಗೆ ಶೇ. 10 ಸೂಪರ್ ಟ್ಯಾಕ್ಸ್ ವಿಧಿಸಿದ ಪಾಕಿಸ್ತಾನ ಪಿಎಂ ಷರೀಫ್
ಇಸ್ಲಮಾಬಾದ್, ಜೂ. 24: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಬೃಹತ್ ಕೈಗಾರಿಕೆಗಳಾದ ಸಿಮೆಂಟ್, ಉಕ್ಕು ಮತ್ತು ಆಟೋ ಮೊಬೈಲ್ನಂತಹ ದೊಡ್ಡ ಪ್ರಮಾಣದ ಕೈಗಾರಿಕೆಗಳ ಮೇಲೆ ಶೇಕಡಾ 10ರಷ್ಟು ಸೂಪರ್ ಟ್ಯಾಕ್ಸ್ ವಿಧಿಸಿದ್ದಾರೆ.
ಷರೀಫ್ ಅವರ ಈ ಕ್ರಮವು ಏರುತ್ತಿರವ ಹಣದುಬ್ಬರವನ್ನು ನಿಭಾಯಿಸುವ ಮತ್ತು ನಗದು ಕೊರತೆಯಿಂದ ದೇಶವನ್ನು ದಿವಾಳಿಯಾಗದಂತೆ ಉಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು ಬಡತನ ನಿರ್ಮೂಲನೆ ತೆರಿಗೆಗೆ ಒಳಪಟ್ಟಿರುತ್ತಾರೆ. 2022-23 ರ ಮುಂದಿನ ಹಣಕಾಸು ವರ್ಷದ ಬಜೆಟ್ನಲ್ಲಿ ತಮ್ಮ ಆರ್ಥಿಕ ತಂಡದ ಸಭೆಯ ಅಧ್ಯಕ್ಷತೆಯ ನಂತರ ಷರೀಫ್ ಘೋಷಣೆ ಹೊರಡಿಸಿದರು.
ಜನಸಾಮಾನ್ಯರಿಗೆ ಪರಿಹಾರ ಒದಗಿಸುವುದು ಮತ್ತು ಜನರ ಮೇಲಿನ ಹಣದುಬ್ಬರದ ಹೊರೆ ತಗ್ಗಿಸಿ ಅವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಷರೀಫ್ ಹೇಳಿದ್ದಾರೆ. ಎರಡನೇಯದಾಗಿ ದೇಶವನ್ನು ದಿವಾಳಿಯಾಗದಂತೆ ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಹಿಂದಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದಾಗಿ ದೇಶವು ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಈ ಸೂಪರ್ ಟ್ಯಾಕ್ಸ್ ಸಿಮೆಂಟ್, ಉಕ್ಕು, ಸಕ್ಕರೆ, ತೈಲ ಮತ್ತು ಅನಿಲ, ರಸಗೊಬ್ಬರಗಳು, ಎಲ್ಎನ್ಜಿ ಟರ್ಮಿನಲ್ಗಳು, ಜವಳಿ, ಬ್ಯಾಂಕಿಂಗ್, ಆಟೋಮೊಬೈಲ್, ಸಿಗರೇಟ್, ಪಾನೀಯಗಳು ಮತ್ತು ರಾಸಾಯನಿಕಗಳಂತ ಬೃಹತ್ ಕೈಗಾರಿಕೆಗಳು ಸೇರಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಇವು ಕೇವಲ ಪದಗಳಲ್ಲ, ಇದು ನನ್ನ ಹೃದಯದ ಧ್ವನಿ ಮತ್ತು ಇನ್ಶಾ ಅಲ್ಲಾಹ್ ನಾವು ಈ ಎಲ್ಲಾ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಷರೀಫ್ ಹೇಳಿದ್ದಾರೆ.
ಕಷ್ಟಕಾಲದಲ್ಲಿ ದೀನದಲಿತರು ಸದಾ ತ್ಯಾಗ ಮಾಡುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇಂದು, ಶ್ರೀಮಂತ ನಾಗರಿಕರು ತಮ್ಮ ಪಾತ್ರವನ್ನು ನಿರ್ವಹಿಸುವ ಸಮಯವಾಗಿದೆ. ಇದು ನಿಸ್ವಾರ್ಥತೆಯನ್ನು ತೋರಿಸಲು ಅವರ ಸರದಿಯಾಗಿದೆ. ಹಾಗೂ ಅವರು ತಮ್ಮ ಪಾತ್ರವನ್ನು ನಿರ್ವಹಿಸಲು ಸಂಪೂರ್ಣವಾಗಿ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಷರೀಫ್ ಹೇಳಿದರು.

150 ಮಿಲಿಯನ್ಗಿಂತ ಹೆಚ್ಚಿರುವ ಮೇಲೆ ಶೇ. 1ರಷ್ಟು ತೆರಿಗೆ
ತೆರಿಗೆ ವಸೂಲಿ ಮಾಡುವುದೇ ಕೆಲಸವಾಗಿರುವ ಸಂಸ್ಥೆಗಳು ಶ್ರೀಮಂತರಿಂದ ಪಡೆದು ಬಡವರಿಗೆ ನೀಡಬೇಕು. ವಾರ್ಷಿಕ ಆದಾಯ ರೂ 150 ಮಿಲಿಯನ್ಗಿಂತ ಹೆಚ್ಚಿರುವವರು ಶೇ. 1ರಷ್ಟು ತೆರಿಗೆಗೆ ಒಳಪಟ್ಟಿರುತ್ತಾರೆ. 200 ಮಿಲಿಯನ್ಗೆ 2 ಶೇ., ರೂ 250 ಮಿಲಿಯನ್ 3 ಶೇಕಡಾ, ಮತ್ತು ರೂ 300 ಮಿಲಿಯನ್ ಅವರ ಆದಾಯದ ಶೇಕಡಾ 4 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಷರೀಫ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ಹೇಳಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಸಂಕಷ್ಟ
ಏತನ್ಮಧ್ಯೆ, ಷರೀಫ್ ಅವರ ಘೋಷಣೆಯ ನಂತರ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ನ ಬೆಂಚ್ಮಾರ್ಕ್ ಕೆಎಸ್ಇ- 100 ಸೂಚ್ಯಂಕವು 4.81 ಶೇಕಡಾ ಕುಸಿತವನ್ನು ಕಂಡಿದೆ ಎಂದು ಅದು ಹೇಳಿದೆ. ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೆಣಗಾಡುತ್ತಿರುವಾಗ ದೇಶವು ಹೆಚ್ಚು ಕಷ್ಟದ ಸಮಯಗಳಿಗೆ ಸಾಕ್ಷಿಯಾಗಬಹುದು ಎಂದು ಪ್ರಧಾನ ಮಂತ್ರಿ ಗುರುವಾರ ಎಚ್ಚರಿಸಿದ್ದಾರೆ.

ನೆರವಿನ ಕಾರ್ಯಕ್ರಮ ಪುನರುಜ್ಜೀವನ
ಹಿಂದಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಜಾಗತಿಕ ಸಾಲದಾತರೊಂದಿಗೆ ಭರವಸೆ ಕಡಿದುಕೊಂಡ ಪರಿಣಾಮಗಳಿಂದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಿಂದ ಸ್ಥಗಿತಗೊಂಡ ನೆರವಿನ ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ತಮ್ಮ ಸರ್ಕಾರ ಎದುರಿಸುತ್ತಿದೆ ಎಂದು ಷರೀಫ್ ಹೇಳಿದರು.

ಐಎಂಎಫ್ನ ಕಾರ್ಯಕ್ರಮ ಪುನರುಜ್ಜೀವನ
ಅವಿಶ್ವಾಸ ಮತದ ಮೂಲಕ ಖಾನ್ ಅವರ ಸರ್ಕಾರವನ್ನು ಉರುಳಿಸಿದ ನಂತರ ಏಪ್ರಿಲ್ನಲ್ಲಿ ಅಧಿಕಾರಕ್ಕೆ ಬಂದ ಷರೀಫ್, ವಿವಿಧ ಮೂಲಗಳಿಂದ ಸಾಲಗಳನ್ನು ಪಡೆಯಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದ್ದು, ಐಎಂಎಫ್ನ ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸಲು ಆದ್ಯತೆ ನೀಡಿದರು. ಅನೇಕ ಸಭೆಗಳು ಮತ್ತು ಬಿಕ್ಕಟ್ಟುಗಳ ನಂತರ ಮಂಗಳವಾರ ರಾತ್ರಿ ಎರಡು ಕಡೆಯವರು ಪ್ಯಾಕೇಜ್ ಅನ್ನು ಪುನಃಸ್ಥಾಪಿಸಲು ಮುಂದಾದರು. ಇದು ಪಾಕಿಸ್ತಾನದ ಆರ್ಥಿಕತೆಗೆ ಹೆಚ್ಚು ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ ಎನ್ನಲಾಗಿದೆ.
ಐಎಂಎಫ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಆರ್ಥಿಕ ಪರಿಸ್ಥಿತಿ ರಾತ್ರೋರಾತ್ರಿ ಸುಧಾರಿಸುವುದಿಲ್ಲ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಾತ್ರೋರಾತ್ರಿ ಸಮೃದ್ಧಿ ಬರುತ್ತದೆಯೇ? ಇಲ್ಲ, ಹಾಗಾಗಿ ನಾವು ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.












Click it and Unblock the Notifications