ಒಂದು ಸೆಕೆಂಡ್ ಅಪ್ಪಿದ್ದೇನೆ ಅಷ್ಟೇ, ಅದು ರಫೇಲ್ ಡೀಲ್ ಅಲ್ಲ: ಸಿಧು
ಲಾಹೋರ್ (ಪಾಕಿಸ್ತಾನ), ನವೆಂಬರ್ 27: "ಒಂದು ಸೆಕೆಂಡ್ ಗಳ ಕಾಲ ಅಪ್ಪಿಕೊಂಡಿರಬಹುದು, ಅದೇನೂ ರಫೇಲ್ ವ್ಯವಹಾರವಲ್ಲ. ಪಂಜಾಬ್ ನಲ್ಲಿ ಇದು ಮಾಮೂಲು. ಇಬ್ಬರು ಪಂಜಾಬಿಗಳು ಭೇಟಿಯಾದಾಗ, ಒಬ್ಬರು ಮತ್ತೊಬ್ಬರಿಗೆ ಕೃತಜ್ಞತೆ ಹೇಳಲು ಇಚ್ಛೆಪಟ್ಟರೆ, ಪರಸ್ಪರರು ಭಾವನಾತ್ಮಕವಾಗಿ ತಬ್ಬಿಕೊಳ್ಳುತ್ತಾರೆ. ಅದು ಬೆಚ್ಚನೆಯ ಭಾವ ಹಾಗೂ ಪ್ರೀತಿಯನ್ನು ತೋರುತ್ತದೆ" ಎಂದು ಪಂಜಾಬ್ ನ ಸಚಿವ ನವ್ ಜೋತ್ ಸಿಂಗ್ ಸಿಧು ಮಂಗಳವಾರ ಇಲ್ಲಿ ಹೇಳಿದ್ದಾರೆ.
ಕರ್ತರ್ ಪುರ್ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಸಿಧು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಅವರ ಈ ನಡೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗೆ ಭಾರೀ ಮುಜುಗರ ಉಂಟು ಮಾಡಿದೆ. ಸಿಧು 'ಆಲೋಚನಾ ದಾರಿ' ಬಗ್ಗೆ ಮಾತನಾಡಿದ ಅಮರಿಂದರ್, ನಮ್ಮ ಸೈನಿಕರು ದಿನವೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸ್ವಂತ ರೆಜಿಮೆಂಟ್ ನ ಮೇಜರ್ ಹಾಗೂ ಇಬ್ಬರು ಜವಾನ್ ಕೆಲ ತಿಂಗಳ ಹಿಂ ಹುತಾತ್ಮರಾಗಿದ್ದಾರೆ. ಈ ಮನುಷ್ಯ (ಸಿಧು) ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಆದರೆ, ಸಿಧು ಮಾತನಾಡಿ, ಧರ್ಮಗಳು ಬೆಸೆಯುತ್ತವೆ ಮತ್ತು ಅದನ್ನು ರಾಜಕಾರಣದ ಕಣ್ಣುಗಳಿಂದ ನೋಡಬಾರದು. ಕೇಂದ್ರ ಸರಕಾರವೇ ನನ್ನ ಭೇಟಿಗೆ ಆಕ್ಷೇಪ ಮಾಡಿಲ್ಲ. ಯಾರೂ ಕೂಡ ಆದರೆ ಹಾಗೂ ಒಂದು ವೇಳೆ ಅಂತೆಲ್ಲ ಹೇಳಿಲ್ಲ. ನನಗೆ ತೆರಳಲು ಪ್ರೋತ್ಸಾಹ ನೀಡಿದರು. ನಾನು ಇಲ್ಲಿಗೆ ಬಂದಿರುವುದು ಶಾಂತಿ ರಾಯಭಾರಿಯಾಗಿ. ಇದು ಎರಡು ದೇಶಗಳ ಮಧ್ಯದ ದ್ವೇಷ ತೊಡೆದುಹಾಕುವ ಅವಕಾಶ ಎಂದು ಹೇಳಿದ್ದಾರೆ.

ನಾಲ್ಕು ಕಿ.ಮೀ. ದೂರ ವೀಸಾ ಇಲ್ಲದಂತೆ ತೆರಳಬಹುದು
ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರ ತಮ್ಮ ಇಬ್ಬರು ಸಹೋದ್ಯೋಗಿಗಳಾದ ಹರ್ ಸಿಮ್ರತ್ ಕೌರ್ ಬಾದಲ್ ಹಾಗೂ ಹರ್ ದೀಪ್ ಸಿಂಗ್ ಪುರಿ ಅವರನ್ನು ಕಳುಹಿಸುತ್ತಿದ್ದಾರೆ. ಕರ್ತರ್ ಪುರ್ ಕಾರಿಡಾರ್ ಯೋಜನೆಯಂಥದ್ದು ಸಾಧ್ಯವಾದಲ್ಲಿ ಎರಡು ದೇಶಗಳ ಮಧ್ಯೆ ಸಂಪರ್ಕ ವಿಸ್ತರಣೆಯಾಗಿ, ವ್ಯಾಪಾರ ಸಂಬಂಧ ವೃದ್ಧಿಯಾಗುತ್ತದೆ. ನಾಲ್ಕು ಕಿ.ಮೀ. ದೂರದ ಈ ಮಾರ್ಗವು ಭಾರತೀಯ ಸಿಖ್ ಯಾತ್ರಿಕರಿಗೆ ಗುರ್ ದ್ವಾರಕ್ಕೆ ವೀಸಾ ಇಲ್ಲದಂತೆ ತೆರಳಲು ಅನುಕೂಲ ಮಾಡಿಕೊಡುತ್ತದೆ ಎಂದಿದ್ದಾರೆ ಸಿಧು.

18 ವರ್ಷ ಗುರು ನಾನಕ್ ಕರ್ತರ್ ಪುರ್ ಸಾಹಿಬ್ ನಲ್ಲಿದ್ದರು
ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಸಿಧು ತೆರಳಿದ್ದಾರೆ. ಎಪ್ಪತ್ಮೂರು ವರ್ಷಗಳ ಕಾಯುವಿಕೆ ಈಗ ಮುಗಿದಿದೆ. ಮೂರು ತಿಂಗಳ ಹಿಂದೆ ಇಮ್ರಾನ್ ಖಾನ್ ಹಾಕಿದ್ದ ಬೀಜ ಈಗ ಗಿಡವಾಗಿದೆ. ಸಿಖ್ ಸಮುದಾಯಕ್ಕೆ ಇದು ಸಂತಸದ ಸಮಯ ಎಂದು ಸಿಧು ಹೇಳಿದ್ದಾರೆ. ಕರ್ತರ್ ಪುರ್ ಸಾಹಿಬ್ ನಲ್ಲಿ ಗುರು ನಾನಕ್ ತಮ್ಮ ಜೀವನದ ಹದಿನೆಂಟು ವರ್ಷಗಳ ಕಾಲ ಇದ್ದರು ಎಂದು ನಂಬಲಾಗಿದೆ.

ಎರಡೂ ದೇಶಗಳ ಸರಕಾರಕ್ಕೆ ಬಹು ಕಾಲದ ಬೇಡಿಕೆ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ಜಿಲ್ಲೆಯಲ್ಲಿ ಕರ್ತರ್ ಪುರ್ ಸಾಹಿಬ್ ಇದೆ. ಪಂಜಾಬ್ ನ ಗುರ್ ದಾಸ್ ಪುರ್ ಜಿಲ್ಲೆಯ ಡೇರಾ ಬಾಬಾ ನಾನಕ್ ನಿಂದ ಕರ್ತರ್ ಪುರ್ ಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ನಿರ್ಮಾಣಕ್ಕೆ ಎರಡೂ ದೇಶಗಳ ಸರಕಾರವನ್ನು ಒತ್ತಾಯಿಸಲಾಗುತ್ತಿತ್ತು. ಕಳೆದ ವಾರವಷ್ಟೇ ಕೇಂದ್ರ ಸರಕಾರವು ಈ ಕಾರಿಡಾರ್ ಯೋಜನೆಗೆ ಹಸಿರು ನಿಶಾನೆ ತೋರಿಸಿತ್ತು. ಪಾಕಿಸ್ತಾನದ ಭಾಗದಲ್ಲೂ ಕಾಮಗಾರಿ ಕೈಗೊಳ್ಳುವಂತೆ ಕೇಳಿಕೊಂಡಿತ್ತು.

ಗುರು ನಾನಕ್ 550ನೇ ವರ್ಷಾಚರಣೆ ಅಂಗವಾಗಿ ಶಂಕುಸ್ಥಾಪನೆ
ಭಾರತದ ಮನವಿಯನ್ನು ಒಪ್ಪಿಕೊಂಡಿದ್ದ ಪಾಕಿಸ್ತಾನದ ಸರಕಾರ ಗುರು ನಾನಕ್ ರ 550ನೇ ವರ್ಷಾಚರಣೆಯ ಸಂದರ್ಭದಲ್ಲಿ ಕರ್ತರ್ ಪುರ್ ಕಾರಿಡಾರ್ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದು, ನವೆಂಬರ್ 28ನೇ ತಾರೀಕು ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತದಿಂದ ಸಿಧು ತೆರಳಿದ್ದಾರೆ. ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಗುರ್ ದಾಸ್ ಪುರ್ ನಲ್ಲಿ ಸೋಮವಾರದಂದು ಕಾರಿಡಾರ್ ಶಂಕುಸ್ಥಾಪನೆ ಮಾಡಿದ್ದಾರೆ. ಈ ಹಿಂದೆ ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಸಿಧು ತೆರಳಿದ್ದರು. ಆ ವೇಳೆ ಪಾಕ್ ನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದರು. ಅದು ಭಾರೀ ವಿವಾದ, ಆಕ್ಷೇಪ, ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications