ಪ್ರೇಯಸಿಯನ್ನು ಕೊಂದು ಹೂತಿದ್ದವ ತನ್ನ ಹೆತ್ತವರನ್ನೂ ಕೊಂದಿದ್ದ!
ಪ್ರೇಯಸಿಯನ್ನು ಕೊಂದು ತನ್ನ ಬೆಡ್ ರೂಮಿನಲ್ಲಿ ಗೋರಿ ಮಾಡಿ ಹೂತಿದ್ದ ಛತ್ತೀಸ್ ಗಢದ ಕ್ರಿಮಿನಲ್. ಆರು ವರ್ಷಗಳ ಹಿಂದೆ ಹೆತ್ತವರನ್ನೂ ಕೊಂದಿದ್ದಾಗಿ ಒಪ್ಪಿಕೊಂಡಿರುವ ಯುವಕ.
ಭೋಪಾಲ್, ಫೆಬ್ರವರಿ 6: ಬೇರೊಂದು ಸಂಬಂಧವಿಟ್ಟುಕೊಂಡಿದ್ದಾಳೆಂದು ಅನುಮಾನಿಸಿ ತನ್ನ ಪ್ರೇಯಸಿಯನ್ನೇ ಕೊಂದಿರುವ ಕಾರಣಕ್ಕಾಗಿ ಪೊಲೀಸರ ಅತಿಥಿಯಾಗಿರುವ ಪಾತಕಿಯೊಬ್ಬ ಆರು ವರ್ಷಗಳ ಹಿಂದೆ ತನ್ನ ಹೆತ್ತವರನ್ನೂ ಕೊಂದು ತೋಟವೊಂದರಲ್ಲಿ ಹೂತು ಹಾಕಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಬಂಧಿತನಾಗಿರುವ ಉದಯನ್ ದಾಸ್, ಛತ್ತೀಸ್ ಗಢದವನು. ಕಳೆದ ವರ್ಷ ಜೂನ್ ನಲ್ಲಿ ಆತನಿಗೆ ಪಶ್ಚಿಮ ಬಂಗಾಳದ ಬಂಕುರಾ ಮೂಲದ ಆಕಾಂಕ್ಷಾ ಎಂಬ ಯುವತಿ ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು.
ಪರಿಚಯವು ಆನಂತರ ಗಾಢವಾದ ಸ್ನೇಹವಾಗಿ ಮಾರ್ಪಟ್ಟಿತ್ತು. ಈತ ತನ್ನನ್ನು ತಾನು ಐಐಟಿ ಇಂಜಿನಿಯರ್ ಎಂದು, ಇತ್ತೀಚೆಗಷ್ಟೇ ಅಮೆರಿಕದಲ್ಲಿ ಸೇವೆ ಸಲ್ಲಿಸಿ ಭಾರತಕ್ಕೆ ಮರಳಿರುವುದಾಗಿ ಬಿಂಬಿಸಿಕೊಂಡಿದ್ದ.
ಇವನೊಂದಿಗೆ ಬೆಳೆದ ಸಲುಗೆಯಿಂದಾಗಿ, ಆಕೆ ಕಳೆದ ವರ್ಷವೇ ಉದಯನ್ ದಾಸ್ ಜತೆಗೆ ಲಿವಿಂಗ್ ಟುಗೆದರ್ ಮಾದರಿಯ ಸಂಬಂಧಕ್ಕೊಪ್ಪಿ ಜತೆಗೆ ಬಂದು ನೆಲೆಸಿದ್ದಳು. ಆದರೆ, ಆಕೆಯ ನಡವಳಿಕೆ ಮೇಲೆ ಅನುಮಾನಗೊಂಡ ಆತ ಆಗಾಗ ಆಕೆಯೊಂದಿಗೆ ಜಗಳ ಕಾಯುತ್ತಿದ್ದ.
ಹೀಗೇ, ಕಳೆದ ಡಿಸೆಂಬರ್ ನಲ್ಲಿ ದೊಡ್ಡ ಜಗಳವಾಗಿ ಆಕಾಂಕ್ಷಾಳನ್ನು ಆತ ಕತ್ತು ಹಿಸುಕಿ ಕೊಂದಿದ್ದಲ್ಲದೆ, ಆಕೆಯನ್ನು ಅವರು ಮಲಗುತ್ತಿದ್ದ ಬೆಡ್ ರೂಮಿನಲ್ಲೇ ಸಿಮೆಂಟ್ ಕಾಂಕ್ರೀಟ್ ಬಳಸಿ ನಿರ್ಮಿಸಿ ಆಕೆಯ ಗೋರಿ ನಿರ್ಮಿಸಿದ್ದ.
ಇತ್ತೀಚೆಗೆ ಆ ಪ್ರಕರಣ ಪತ್ತೆಯಾಗಿ ಪೊಲೀಸರು ಆತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಕೆಲವಾರು ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತನ್ನ ತಂದೆ ತಾಯಿಯನ್ನೂ 2010ರಲ್ಲಿ ಕೊಂದಿದ್ದಾಗಿ ಆತ ಹೇಳಿದ್ದಾನೆ. ಆತ ನೀಡಿದ ವಿಳಾಸದ ಮೇರೆಗೆ ಛತ್ತೀಸ್ ಗಢದಲ್ಲಿರುವ ಆತನ ಮನೆ ಪರಿಶೀಲನೆ ನಡೆಸಿರುವ ಪೊಲೀಸರಿಗೆ, ಮನೆಯ ಪಕ್ಕದಲ್ಲಿರುವ ತೋಟದಲ್ಲಿ ಎರಡು ತಲೆಬುರುಡೆಗಳು ಸಿಕ್ಕಿವೆ. ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.