ಹಿಂಸಾಚಾರ, ಹರ್ಯಾಣ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈ ಕೋರ್ಟ್
ಚಂಡೀಗಢ, ಆಗಸ್ಟ್ 26 : ರಾಮ್ ರಹೀಂ ಬಂಧನ ಬಳಿಕ ಪಂಜಾಬ್ ಮತ್ತು ಹರಿಯಾಣದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ.
ಘಟನೆ ಸಂಬಂಧ ಇಂದು ಪಂಜಾಬ್ ಹರ್ಯಾಣ ಹೈಕೋರ್ಟ್ ನಲ್ಲಿ ಭದ್ರತಾ ಮೇಲ್ವಿಚಾರಣೆಯಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅವರ ಕಾರ್ಯವೈಖರಿಯನ್ನು ರಾಜಕೀಯ ಶರಣಾಗತಿ ಎಂದು ಹೇಳಿ ಛೀಮಾರಿ ಹಾಕಿದೆ.
ನಿಮ್ಮ ರಾಜಕೀಯ ಲಾಭಕ್ಕಾಗಿ ಹಿಂಸಾಚಾರ ನಡೆಯಲು ಬಿಟ್ಟಿದ್ದೀರಾ? ಕೋರ್ಟ್ ಆವರಣಕ್ಕೆ ಬಾಬಾನ 200 ವಾಹನಗಳನ್ನು ಬಿಟ್ಟಿದ್ದೇಕೆ? ಎಂದು ಹರ್ಯಾಣ ಸರ್ಕಾರವನ್ನು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉಂಟಾಗಲು ಸಿಎಂ ಖಟ್ಟರ್ ನೇರ ಹೊಣೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹಿಂಸಾಚಾರಕ್ಕೆ 32 ಬಲಿ
ಕೋರ್ಟ್ ಆವರಣದಲ್ಲಿದ್ದ ಪತ್ರಕರ್ತರ ವಾಹನಗಳೂ ಸೇರಿದಂತೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 32 ಮಂದಿ ಸಾವನ್ನಪ್ಪಿ, 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ರಾಮ್ ರಹೀಂ ಆಶ್ರಮಕ್ಕೆ ಬೀಗ
ಹಿಂಸಾಚಾರ ಭುಗಿಲೆದ್ದ ಬಳಿಕ ಹರ್ಯಾಣ ಹೈಕೋರ್ಟ್ ಬಾಬಾ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ಆಶ್ರಮವನ್ನು ಸೇನೆ ಸುತ್ತುವರೆದಿತ್ತಾದರೂ, ಆಶ್ರಮದಲ್ಲಿದ್ದ ಭಕ್ತರನ್ನು ನಿಯಂತ್ರಿಸಿಕೊಂಡು ಇಂದು ಬೆಳಗ್ಗೆ ಆಶ್ರಮಕ್ಕೆ ಲಗ್ಗೆ ಇಟ್ಟಿದೆ ಎಂದು ತಿಳಿದುಬಂದಿದೆ.

ಸಹಜ ಸ್ಥಿತಿಗೆ ಮರಳಿದ ಪಂಜಾಬ್
ಸ್ವಯಂಘೋಷಿತ ದೇವ ಮಾನವ ರಾಮ್ ರಹೀಮ್ ಸಿಂಗ್ ಅವರು ದೋಷಿ ಎಂದು ತೀರ್ಪು ಪ್ರಕಟಗೊಂಡ ಬಳಿಕ ಹಿಂಸಾಚಾರಕ್ಕೊಳಗಾಗಿದ್ದ ಪಂಜಾಬ್ ರಾಜ್ಯದಲ್ಲಿ ಇದೀಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ತಲುಪಿದ್ದು, ಈ ಹಿನ್ನಲೆಯಲ್ಲಿ ಶನಿವಾರ ಕರ್ಫ್ಯೂವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.

ಸೆಕ್ಯೂರಿಟಿ ವಾಪಸ್
ಸ್ವಯಂಘೋಷಿತ ದೇವ ಮಾನವ ರಾಮ್ ರಹೀಮ್ ಸಿಂಗ್ ಅವರು ದೋಷಿ ಎಂದು ತೀರ್ಪು ಪ್ರಕಟಗೊಂಡ ಬಳಿಕ ರಾಮ್ ರಹೀಮ್ ಗೆ ನೀಡಲಾಗಿದ್ದ ಭದ್ರತೆಯನ್ನು ಸರ್ಕಾರ ವಾಸಪ್ ಪಡೆದಿದೆ ಎಂದು ಹರ್ಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.












Click it and Unblock the Notifications