ಅಯೋಧ್ಯಾದಲ್ಲಿ ಶ್ರೀರಾಮ ಪುತ್ಥಳಿ ನಿರ್ಮಾಣಕ್ಕೆ ಉಪ್ರ ಸರಕಾರ ಸಿದ್ಧತೆ
ಅಯೋಧ್ಯಾ (ಉತ್ತರಪ್ರದೇಶ), ಅಕ್ಟೋಬರ್ 10: ಅಯೋಧ್ಯಾದ ಸರಯೂ ನದಿಯ ದಡದಲ್ಲಿ ಬೃಹತ್ ಆದ ರಾಮನ ಪ್ರತಿಮೆ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಸರಕಾರ ಪ್ರಸ್ತಾವ ಮುಂದಿಟ್ಟಿದೆ.
ಪ್ರತಿಮೆ ನಿರ್ಮಾಣದ ಸ್ಥಳವು ವಿವಾದಿತ ರಾಮ್ ಜನ್ಮಭೂಮಿ- ಬಾಬ್ರಿ ಮಸೀದಿಯಿಂದ ತುಂಬ ದೂರವೇನಿಲ್ಲ. ಎಷ್ಟು ಎತ್ತರದ ಪ್ರತಿಮೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ ವರದಿಗಳ ಪ್ರಕಾರ ನೂರು ಮೀಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.

ಉತ್ತರಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ ಕೂಡ ಈ ಯೋಜನೆಯ ಹಿಂದಿದೆ. "ಅಯೋಧ್ಯಾದಲ್ಲಿ ರಾಮ ಪ್ರತಿಮೆ ನಿರ್ಮಾಣದ ಪ್ರಸ್ತಾವ ಇದ್ದು, ಸದ್ಯಕ್ಕೆ ಯೋಜನೆಯ ಹಂತದಲ್ಲೇ ಇದೆ. ಈ ರೀತಿ ಹಲವು ಪ್ರಸ್ತಾವ ಮುಂದಿದೆ. ಉತ್ತರಪ್ರದೇಶದ ಹಲವೆಡೆ ಅಭಿವೃದ್ಧಿ ಪಡಿಸುತ್ತೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಈ ರೀತಿಯ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಉತ್ತರಪ್ರದೇಶದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ ಎಂದು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ವಹಿಸಿರುವ ಅವಿನಾಶ್ ಅವಸ್ಥಿ ತಿಳಿಸಿದ್ದಾರೆ.
ಮುಂದಿನ ವಾರ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆಗೆ ದೀಪಾವಳಿ ಆಚರಣೆಗಾಗಿ ಅಯೋಧ್ಯೆಗೆ ತೆರಳಲಿದ್ದಾರೆ. ರಾಜ್ಯಪಾಲರಾದ ರಾಮ್ ನಾಯಕ್ ಕೂಡ ಭಾಗವಹಿಸಲಿದ್ದು, ಕೇಂದ್ರ ಸಚಿವರಾದ ಅಲ್ಫೋನ್ಸೋ, ಮನೀಶ್ ಶರ್ಮಾ ಹಾಜರಿರಲಿದ್ದಾರೆ.
ದೀಪಾವಳಿಯ ಹಿಂದಿನ ದಿನ ಸರಯೂ ನದಿ ದಡದಲ್ಲಿ ಆರತಿ ಆಯೋಜಿಸಲು ಸಿದ್ಧತೆ ನಡೆದಿದೆ. ಗೋರಖ್ ಪುರ್ ನ ಮುಖ್ಯ ಅರ್ಚಕರೂ ಆಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಮೆರವಣಿಗೆಯ ನೇತೃತ್ವವನ್ನು ವಹಿಸಲಿದ್ದಾರೆ.












Click it and Unblock the Notifications