2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು
ಅದು ಜುಲೈ 1 ರ ಹಗಲು. ಬೆಚ್ಚಗೆ ಮಲಗಿದ್ದ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದು ಅದೊಂದು ಘಟನೆ. ಇಲ್ಲಿನ ಬುರಾರಿ ಎಂಬಲ್ಲಿ ಒಂದೇ ಕುಟುಂಬದ 11 ಜನರ ಮೃತದೇಹದಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಓರ್ವ ವೃದ್ಧೆಯ ಶವ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಚರ್ಚೆ 2018 ರ ಅತೀ ಹೆಚ್ಚು ಚರ್ಚೆಯ ವಿಷಯಳಲ್ಲಿ ಒಂದಾಯಿತು. ಈ ಘಟನೆ ಆಮೇಲೆ ಏನಾಯ್ತು?!
****
ಅದು ಸೆ.14. ತೆಲಂಗಾಣದ ಮಿರ್ಯಾಲಗುಡ್ ಜ್ಯೋತಿ ಆಸ್ಪತ್ರೆ ಬಳಿ ಪ್ರಣಯ್ ಎಂಬ ಸ್ಪುರದ್ರೂಪಿ ಯುವಕನನ್ನು ಹಾಡು ಹಗಲಲ್ಲೇ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗಿತ್ತು. ಮರ್ಯಾದಾ ಹತ್ಯೆ ಎನ್ನಲಾದ ಈ ಘಟನೆಯಲ್ಲಿ ಯಾರ ಕೈವಾಡವಿತ್ತು? ಕೊಲೆ ನಡೆದಿದ್ದು ಹೇಗೆ..?
... ಇವರಡೇ ಘಟನೆಗಳಲ್ಲ, 2018 ರಲ್ಲಿ ಸಾಕಷ್ಟು ನಿಗೂಢತೆಯನ್ನು ಸೃಷ್ಟಿಸಿದ ಇಂಥ ಹಲವು ಘಟನೆಗಳು ನಡೆದವು. ಅವುಗಳಲ್ಲಿ ಕೆಲವು ಇನ್ನೂ ಬಗೆಹರಿದಿಲ್ಲ. ಅಂಡಮಾನಿನಲ್ಲಿ ಅಮೆರಿಕನ್ನನ ಸಾವು, ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ದಂಪತಿಯ ಸಾವು ಮುಂತಾದ ಘಟನೆಗಳು ಇನ್ನೂ ಹಸಿರಾಗಿರುವಾಗಲೇ ಹೊಸ ವರ್ಷ ಬರುತ್ತಿದೆ. 2018 ರ ಇಂಥ ಕಹಿ ಘಟನೆಗಳು 2019 ರಲ್ಲಿ ಮರುಕಳಿಸದಿರಲಿ ಎಂಬ ಪ್ರಾರ್ಥನೆಯೊಂದಿಗೆ 2018 ಅನ್ನು ಬೆಚ್ಚಿ ಬೀಳಿಸಿದ ಕೆಲವು ಘಟನೆಗಳ ಸುತ್ತೊಂದು ಮೆಲುಕು...

ಬುರಾರಿ ಆತ್ಮಹತ್ಯೆ ಪ್ರಕರಣ
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಮನೆಯಲ್ಲಿ ಸಿಕ್ಕ 11 ಡೈರಿಗಳು ಚಿತ್ರ-ವಿಚಿತ್ರ ಸಂಕೇತಗಳನ್ನು ಹೊಂದಿರುವುದು ತಿಳಿದುಬಂದಿತ್ತು. ಪ್ರಳಯದ ಭಯ ಮತ್ತು ಅತಿಯಾದ ಮೂಢ ನಂಬಿಕೆಯೇ ಈ ಕುಟುಂಬದ ಜನರನ್ನು ಆತ್ಮಹತ್ಯೆಗೆ ಪ್ರೇರಿಪಿಸಿತ್ತು ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಈ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಚಿತ್ರ ವಿಚಿತ್ರ ಸಂಜ್ಞೆಗಳು ಅಚ್ಚರಿ ಮೂಡಿಸಿದ್ದವು, ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದ್ದವು.

ನಿಗೂಢತೆ ಸೃಷ್ಟಿಸಿದ್ದ ವಿಡಿಯೋ
ಬುರಾರಿಯಲ್ಲಿ ಸಾಮೂಹಿಕ ಆತ್ಮಹತ್ಯೆ ನಡೆಯುವ ಕೆಲವೇ ಕ್ಷಣ ಮೊದಲು ಈ ಮನೆಯ ಸದಸ್ಯರು ಆತ್ಮಹತ್ಯೆಗೆಂದು ಇಲೆಕ್ಟ್ರಿಕಲ್ ವೈಯರ್ ಮತ್ತು ಸ್ಟೂಲ್ ಗಳನ್ನು ಒಯ್ಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮನೆಯಲ್ಲಿದ್ದ ಚಿಕ್ಕ ಮಕ್ಕಳಿಗೆ ಆತ್ಮಹತ್ಯೆಯ ಇಷ್ಟವಿಲ್ಲದಿದ್ದರೂ ಒತ್ತಾಯವಾಗಿ ಅವರ ಕೊರಳಿಗೂ ನೇಣು ಬಿಗಿಯಲಾಗಿತ್ತು ಎಂಬುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿತ್ತು. "ಇವರ್ಯಾರೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಲ್ಲ. ಇದು ಕೊಲೆಯೇ. ತನಿಖೆಯಾಗಬೇಕು" ಎಂದು ಅವರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದು ಕೊಲೆ ಎಂಬುದನ್ನು ಪೊಲೀಸರಿಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಪ್ರಕರಣ ನಿಗೂಢವಾಗಿಯೇ ಉಳಿದಿದೆ.

ಪ್ರಣಯ್-ಅಮೃತಾ ಪ್ರಕರಣ
ಸೆ.14 ರಂದು ಶುಕ್ರವಾರ ತೆಲಂಗಾಣದ ಮಿರ್ಯಾಲಗುಡ್ ಜ್ಯೋತಿ ಆಸ್ಪತ್ರೆ ಬಳಿ ಪ್ರಣಯ್ ಎಂಬ ಯುವಕನನ್ನು ಹಾಡುಹಗಲಲ್ಲೇ ಕೆಲ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕುಟುಂಬದ ವಿರೋಧದ ನಡುವೆಯೂ ಪ್ರಣಯ್ ಮತ್ತು ಅಮೃತಾ ಮದುವೆಯಾಗಿದ್ದರು. ಇವರದ್ದು ಅಂತರ್ಜಾತೀಯ ವಿವಾಹ. ಮದುವೆಯಾಗಿದ್ದ ದಂಪತಿ ಮೇಲೆ ಅಮೃತಾ ಕುಟುಂಬದ ಕಡೆಯಿಂದ ಸಾಕಷ್ಟು ಒತ್ತಡವಿತ್ತು, ಆಗಾಗ ಬೆದರಿಕೆಯನ್ನೂ ಹಾಕಲಾಗುತ್ತಿತ್ತು. ಆದ್ದರಿಂದ ಪ್ರಣಯ್ ಅನ್ನು ತನ್ನ ತಂದೆಯೇ ಕೊಂದಿದ್ದು ಎಂದು ಅಮೃತಾ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಮೃತಾ ಅವರ ತಂದೆ ಮಾರುತಿ ರಾವ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದರು.

ಪ್ರಣಯ್ ಹತ್ಯೆಗೆ ನಾಲ್ಕು ಬಾರಿ ಸಂಚು!
ಪ್ರಣಯ್ ಹತ್ಯೆಗೆ ಪತ್ನಿ ಅಮೃತಾ ಅವರ ತಂದೆಯೇ ನಾಲ್ಕು ಭಾರಿ ಪ್ರಯತ್ನಿಸಿದ್ದರು. ಆದರೆ ನಾಲ್ಕು ಬಾರಿಯೂ ಅವರು ವಿಫಲರಾಗಿದ್ದರು ಎಂಬುದು ನಂತರ ತನಿಖೆ ವೇಳೆ ತಿಳಿದುಬಂದಿತ್ತು. ತನ್ನಪ್ಪನಲ್ಲದೇ, ನನ್ನ ಪತಿಯನ್ನು ಕೊಲ್ಲಲು ಬೇರೆ ಯಾರಿಗು ಸಾಧ್ಯವಿಲ್ಲ ಎಂದು ಅಮೃತಾ ಹೇಳಿದ್ದರು. ಅಮೃತಾ ಅವರ ಗರ್ಭದಲ್ಲಿ ಬೆಳೆಯುತ್ತಿದ್ದ ಪ್ರಣಯ್ ಮಗುವನ್ನು ಗರ್ಭಪಾತ ಮಾಡಿಸಿ ತೆಗೆಸುವಂತೆಯೂ ಅಪ್ಪ, ಒತ್ತಾಯಿಸಿದ್ದರು ಎಂದು ಅಮೃತಾ ಪೊಲಿಸರಿಗೆ ತಿಳಿಸಿದ್ದರು. ಮದುವೆಯ ನಂತರ ಮನೆಯಿಂದ ಬೇರೆಯೇ ಇದ್ದ ಅಮೃತಾ, ತಮ್ಮ ತಾಯಿಗೆ ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದರು. ಮಗಳ ಬಗ್ಗೆ ತಾಯಿ ನೀಡುತ್ತಿದ್ದ ಮಾಹಿತಿಯನ್ನೇ ಆಧರಿಸಿ, ತಂದೆ ಮಾರುತಿ ರಾವ್ ಅಳಿಯನ ಕೊಲೆಗೆ ಸಂಚು ರೂಪಿಸಿದ್ದರು!

ವಿಷಾದ ಮೂಡಿಸಿದ ಮೀನಾಕ್ಷಿ- ವಿಷ್ಣು ಸಾವು!
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಎತ್ತರದಿಂದ ಬಿದ್ದು ತಮಿಳುನಾಡು ಮೂಲದ ದಂಪತಿ ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಕೊನೆಯುಸಿರೆಳೆದರು. ಬದುಕಿನ ಪ್ರತಿಕ್ಷಣವನ್ನೂ ಸಂಭ್ರಮಿಸುತ್ತಿದ್ದ ಈ ದಂಪತಿಯ ಸಾವಿನಿಂದಾಗಿ ಅವರ ತಂದೆ-ತಾಯಿ, ಓದಿದ ಕಾಲೇಜ್, ಸ್ನೇಹಿತರು, ಬಂಧುಗಳ ಮನಸ್ಸಲ್ಲಿ ನಿರ್ವಾತ ಸೃಷ್ಟಿಯಾಗಿತ್ತು. ಸದಾ ಸಾಹಸದ ಪ್ರವಾಸವನ್ನೇ ಇಷ್ಟಪಡುತ್ತಿದ್ದ ಈ ಲವ್ಲಿ ದಂಪತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಸಾವಿಗೀಡಾಗಿದ್ದರು ಎಂಬುದು ನಂತರ ತಿಳಿದುಬಂದಿತ್ತು.

ಬದುಕಿನ ಪ್ರವಾಸ ಮುಗಿಸಿದ ದಂಪತಿ!
ಪ್ರವಾಸವನ್ನೇ ಬದುಕು ಎಂದುಕೊಂಡಿದ್ದ ದಂಪತಿಯ ಬದುಕಿನ ಪ್ರವಾಸವೇ ಈ ಮೂಲಕ ಮುಗಿದಿತ್ತು. ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಗೆ ಪ್ರವಾಸಕ್ಕೆಂದು ತೆರಳಿದ್ದ ದಂಪತಿ 800 ಅಡಿ ಎತ್ತರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅದೇ ತಮ್ಮ ಕೊಟ್ಟ ಕೊನೆಯ ಪ್ರವಾಸ ಎಂಬುದು ಇಬ್ಬರಿಗೂ ಊಹೆಗೂ ಸಿಕ್ಕಿರಲಿಲ್ಲ. ಸಾಯುವ ಒಂದು ತಿಂಗಳ ಹಿಂದಷ್ಟೇ, 'ನಾವೆಲ್ಲರೂ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದೇವೆ. ಆದರೆ ಆಯಕಟ್ಟಿನ, ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರ ದುರಂತದ ಬಗ್ಗೆ ನಮಗೆ ಅರಿವಿಲ್ಲ. ಗಾಳಿಯ ಪ್ರಚಂಡ ಶಕ್ತಿಯ ಬಗ್ಗೆ ಗೊತ್ತೆ? ನಮ್ಮ ಜೀವಕ್ಕಿಂತ ಒಂದು ಫೋಟೋ ಹೆಚ್ಚೇ?' ಎಂದು ಮೀನಾಕ್ಷಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು. ದುರಂತ ಎಂದರೆ ಅದೇ ಒಂದು ಫೋಟೋ ಆಸೆಗಾಗಿ ತಾವೂ ಪ್ರಾಣ ಕಳೆದುಕೊಂಡರು!

ಅಂಡಮಾನಿನಲ್ಲಿ ಅಮೆರಿಕನ್ನನ ಹತ್ಯೆ
ನವೆಂಬರ್ 16 ರಂದು ಅಂಡಮಾನಿನ ಸೆಂಟಿನಿಲೀಸ್ ಬುಡಕಟ್ಟು ಜನಾಂಗದವರಿಂದ ಅಮೆರಿಕದ ಜಾನ್ ಅಲೆನ್ ಚೌ ಎಂಬ 27 ವರ್ಷ ವಯಸ್ಸಿನ ಯುವಕನ ಹತ್ಯೆಯಾಗಿತ್ತು. ತಮ್ಮ ದ್ವೀಪಕ್ಕೆ ಹೊರಗಿನ ಪ್ರಪಂಚದ ಯಾರನ್ನೂ ಸೇರಿಸಿಕೊಳ್ಳದ ಸೆಂಟಿನಿಲೀಸ್ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಮಹದಾಸೆ ಹೊತ್ತು ಹೋಗಿದ್ದ ಚೌ ಕೊಲೆಯಾಗಿದ್ದರು. ಆದರೆ ಅವರ ಶವವನ್ನು ಸೆಂತಿನಿಲೀಸ್ ಜನರೇ ಹೂತು ಹಾಕಿದ್ದು, ಅದಿನ್ನೂ ಪತ್ತೆಯಾಗಿಲ್ಲ.

ಡೈರಿಯಲ್ಲಿ ಸಾವಿನ ಸೂಚನೆ
ನಿಷೇಧಿತ ಸ್ಥಳವಾಗಿದ್ದ ಸೆಂಟಿನಿಲ್ ದ್ವೀಪಕ್ಕೆ ತೆರಳುತ್ತಿದ್ದ ಚೌ, ತಮ್ಮ ಡೈರಿಯಲ್ಲಿ "ಈ ಸಾಹಸದ ಪ್ರವಾಸವನ್ನು ನೋಡಿ ನನಗೆಲ್ಲೋ ಹುಚ್ಚು ಎಂದು ನಿಮಗನ್ನಿಸಬಹುದು, ಆದರೆ ನನಗೆ ಇದು ಸಾಕಷ್ಟು ಬೆಲೆಬಾಳುವಂಥದ್ದು ಎನ್ನಿಸುತ್ತದೆ. ಅಕಸ್ಮಾತ್ ನನನ್ನು ಯಾರಾದರೂ ಸಾಯಿಸಿದರೆ ದಯವಿಟ್ಟು ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ..." ಎಂದು ಬರೆದಿದ್ದರು. ಇದು ಅವರು ಬರೆದ ಕೊನೆಯ ಸಾಲು! ತಮ್ಮ ಸಾವಿನ ಬಗ್ಗೆ ಚೌ ಗೆ ಮೊದಲೇ ಸೂಚನೆ ಸಿಕ್ಕಿತ್ತೇ ಎಂಬ ಅನುಮಾನವನ್ನು ಈ ಸಾಲುಗಳು ಎಬ್ಬಿಸಿದ್ದವು!
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications