World Cup 2023: ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ವಿಶೇಷ ವಂದೇ ಭಾರತ್ ರೈಲುಗಳು- ಯಾವ ರಾಜ್ಯಗಳಿಂದ ತಿಳಿಯಿರಿ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್-2023ರ ಮೊದಲ ಪಂದ್ಯ ಗುರುವಾರ ನಡೆಯಿತು. ಇದೇ ಸ್ಟೇಡಿಯಂನಲ್ಲಿ ಅಕ್ಟೋಬರ್ 14 ರಂದು ನಿಗದಿಪಡಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪಂದ್ಯವನ್ನು ವೀಕ್ಷಿಸಲು ಆಗಮಿಸುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ಸಹಾಯಹಸ್ತ ಚಾಚಿದೆ.
ಅಕ್ಟೋಬರ್ 14 ರಂದು ಅಹಮದಾಬಾದ್ಗೆ ವಿಶೇಷ ವಂದೇ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೇ ಮುಂದಾಗಿದೆ.
ವಿವಿಧ ರಾಜ್ಯಗಳಿಂದ ಆಗಮಿಸುವ ಅಭಿಮಾನಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್ನ ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಬರುವವರ ಪ್ರಯಾಣವನ್ನು ವಿಶೇಷ ವಂದೇ ಭಾರತ್ ರೈಲುಗಳು ಸುಲಭಗೊಳಿಸುತ್ತವೆ ಎಂದು ಇಲಾಖೆ ಹೇಳಿದೆ.
ಈ ಕುರಿತು ಮಾತನಾಡಿರುವ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, 'ಪಂದ್ಯ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ರೈಲು ಅಹಮದಾಬಾದ್ಗೆ ಆಗಮಿಸಲಿದೆ. ಇದಕ್ಕೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಪಂದ್ಯ ಮುಗಿದ ನಂತರ ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ಮರಳಲು ವಿಶೇಷ ವಂದೇ ಭಾರತ್ ರೈಲುಗಳನ್ನು ನಿಯೋಜಿಸಲಾಗಿದೆ' ಎಂದು ತಿಳಿಸಿದ್ದಾರೆ.
ಈ ಕ್ರಮದಿಂದ ಹೆಚ್ಚಿನ ವಿಮಾನ ದರಗಳು ಹಾಗೂ ಹೋಟೆಲ್ ದರಗಳ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಪಂದ್ಯ ಮುಗಿದ ನಂತರ ಜನರು ಮನೆಗೆ ಮರಳಲು ವಿಶೇಷ ರೈಲುಗಳು ಅನುವು ಮಾಡಿಕೊಡಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ನಿರ್ಧಿಷ್ಟ ಸ್ಥಳಗಳಿಂದ ಹೊರಡುವ ರೈಲುಗಳು ಸಬರಮತಿ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ನಿಲ್ಲುತ್ತವೆ. ಇವೆರಡೂ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಇರುವ ನಿಲ್ದಾಣಗಳಾಗಿವೆ. ಇದರಿಂದ ಪ್ರಯಾಣಿಕರಿಗೆ ಅನೂಕುಲವಾಗಲಿದೆ' ಎಂದು ರೈಲ್ವೇ ಇಲಾಖೆ ಹೇಳಿದೆ.
ಈ ವಿಶೇಷ ರೈಲುಗಳಲ್ಲಿ ದೇಶಭಕ್ತಿ ಗೀತೆಗಳು ಹಾಗೂ ಭಾರತ-ಪಾಕ್ ನಡುವಿನ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಪ್ರಸಾರ ಮಾಡಲು ಭಾರತೀಯ ರೈಲ್ವೇ ನಿರ್ಧರಿಸಿದೆ.

ಈ ರೈಲುಗಳಲ್ಲಿ ವಿಶೇಷ ಆಹಾರ, ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಟಿಕೆಟ್ಗಳು ಅತೀ ವೇಗವಾಗಿ ಮಾರಾಟವಾಗಿವೆ. ಆಗಸ್ಟ್ 29 ಮತ್ತು ಸೆಪ್ಟೆಂಬರ್ 3ರಂದು ಎರಡು ಹಂತಗಳಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ. ಈ ದಿನಗಳಲ್ಲಿ ಕೇವಲ ಒಂದು ಗಂಟೆಯಲ್ಲಿ ಎಲ್ಲಾ ಟಿಕೆಟ್ ಮಾರಾಟವಾಗಿದೆ. ಎರಡನೇ ಹಂತದಲ್ಲಿ ಟಿಕೆಟ್ಗಳಿಗೆ ಅತೀ ಬೇಡಿಕೆ ಇದ್ದದ್ದರಿಂದ ಬೆಲೆಯನ್ನು ಏರಿಸಲಾಗಿತ್ತು.
ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯವನ್ನು ಗೆಲ್ಲುವುದು ವಿಶ್ವಕಪ್ ಕಪ್ ಗೆಲ್ಲುವುದಕ್ಕಿಂತ ಮಹತ್ವದ್ದಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸಂಪ್ರದಾಯಿಕ ಎದುರಾಳಿಗಳಾದ ಎರಡೂ ದೇಶಗಳ ಜನರು ತಮ್ಮ ತಂಡಗಳು ಪಂದ್ಯ ಸೋಲುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ್ ರೈಲುಗಳು ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಈ ಹೈ ಸ್ಪೀಡ್ ರೈಲುಗಳು ಮೇಕ್ ಇಂಡಿಯಾದ ಭಾಗವಾಗಿ ಭಾರತದಲ್ಲಿಯೇ ತಯಾರಿಸ್ಪಟ್ಟಿವೆ.












Click it and Unblock the Notifications