ಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮ
ಧರ್ಮಶಾಲಾ, ಮಾರ್ಚ್ 19: ಭಾರತದಿಂದಲೇ ನನ್ನ ಉತ್ತರಾಧಿಕಾರಿ ಆಗಲಿದ್ದಾರೆ ಎಂದು ಬೌದ್ಧ ಧರ್ಮ ಗುರು ದಲೈಲಾಮಾ ಹೇಳಿದ್ದಾರೆ. ಈ ಮೂಲಕ ಟಿಬೆಟ್ನಲ್ಲಿ ಮೂಗು ತೂರಿಸುತ್ತಿರುವ ಚೀನಾಕ್ಕೆ ಟಾಂಗ್ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೌದ್ಧ ಧಾರ್ಮಿಕ ಗುರು ದಲೈಲಾಮ ಮುಂದಿನ ತಮ್ಮ ಉತ್ತರಾಧಿಕಾರಿ ಅಥವಾ ಮುಂದಿನ ಅವತಾರ ಭಾರತದಿಂದ ಬರಬಹುದು ಎಂದು ಹೇಳಿದ್ದಾರೆ.
ಅಂತೆಯೇ ಟಿಬೆಟ್ ಮೇಲಿನ ಹಿಡಿತಕ್ಕಾಗಿ ಚೀನಾ ದೇಶ ಕೂಡ ಮತ್ತೋರ್ವ ದಲೈಲಾಮನನ್ನು ಹುಟ್ಟುಹಾಕಬಹುದು. ಭವಿಷ್ಯದಲ್ಲಿ ಇಬ್ಬಿಬ್ಬರು ದಲೈಲಾಮಗಳು ಹುಟ್ಟಿಕೊಂಡರೂ ಅಚ್ಚರೇಯೇನಿಲ್ಲ ಎಂದು ದಲೈಲಾಮ ವ್ಯಂಗ್ಯ ಮಾಡಿದ್ದಾರೆ.
ಮುಂದಿನ ದಲೈಲಾಮ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ನನಗಿಂತಲೂ ಚೀನಾ ಸರ್ಕಾರಕ್ಕೇ ಹೆಚ್ಚು ಚಿಂತೆ ಕಾಡುತ್ತಿದೆ. ಈಗಾಗಲೇ ಚೀನಾ ಸರ್ಕಾರ ಮುಂದಿನ ದಲೈಲಾಮ ಆಯ್ಕೆ ವಿಚಾರದಲ್ಲಿ ತನಗೂ ಹಕ್ಕಿದೆ ಎಂದು ವಾದಿಸುತ್ತಿದೆ.
ಆದರೆ ಟಿಬಿಟಿಯನ್ನರು ಹಕ್ಕಿನ ಆಧಾರದ ಮೇಲೆ ದಲೈಲಾಮನನ್ನು ಆಯ್ಕೆ ಮಾಡುವುದಿಲ್ಲ, ಅದು ಸಂಪ್ರದಾಯದ ಮೇಲೆ ಆಧಾರಿತವಾಗಿರುತ್ತದೆ.

ಅಂತೆಯೇ ಚೀನಾ ನಿರ್ಮಿತ ದಲೈಲಾಮ ಹುಟ್ಟಿಕೊಂಡಿದ್ದೇ ಆದರೆ ಆತ ಕೇವಲ ರಾಜಕೀಯ ದುರುದ್ದೇಶದಿಂದ ಹುಟ್ಟಿದವನಾಗುತ್ತಾನೆ. ಆತನಿಗೆ ಯಾರೂ ಕೂಡ ಗೌರವ ನೀಡುವುದಿಲ್ಲ. ಆತನನ್ನು ಬೌದ್ಧ ಧರ್ಮದ ಗುರು ಎಂದು ಪರಿಗಣಿಸುವುದೂ ಇಲ್ಲ.












Click it and Unblock the Notifications