ಮಂಗಳಗ್ರಹದಲ್ಲೇ ವಾಸಿಸ್ತಾಳಂತೆ ಈ 19ರ ಬಾಲೆ!
ನವದೆಹಲಿ, ಫೆ. 18: ಮಂಗಳ ಗ್ರಹಕ್ಕೆ ಏಕಮುಖ ಪ್ರಯಾಣ ಎಷ್ಟು ಯಶಸ್ಸು ಗಳಿಸುವುದೋ ಗೊತ್ತಿಲ್ಲ. ಆದರೆ, ಈ ಪ್ರಯಾಣಕ್ಕೆ ಹದಿಹರೆಯದವರಿಂದ ಹಿಡಿದು ಮಧ್ಯವಸ್ಕರವರೆಗೆ ಹಲವರು ತಯಾರಾಗಿದ್ದಾರೆ. ಭಾರತದಿಂದ ಅರ್ಜಿ ಸಲ್ಲಿಸಿದ್ದ 100 ಜನರಲ್ಲಿ ಮೂವರು ಅಂತಿಮ ಆಯ್ಕೆ ಹಂತದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರಲ್ಲೊಬ್ಬರಾದ ಕೇರಳದ ಪಾಲಕ್ಕಾಡ್ ನಿವಾಸಿಯಾಗಿರುವ 19 ವರ್ಷ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರದ್ಧಾ ಪ್ರಸಾದ್ ಮಂಗಳ ಗ್ರಹದಲ್ಲಿಯೇ ವಾಸಿಸುವ ಕನಸು ಕಾಣುತ್ತಿದ್ದಾರೆ.
ಈ ಪ್ರಯಾಣಕ್ಕೆ ಸುಮಾರು 2.5 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ನಾನು ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ನನ್ನ ಪಾಲಕರು ಮೊದಲು ಆತಂಕಗೊಂಡಿದ್ದರು. ಆದರೆ, ಆಯ್ಕೆ ಪ್ರಕ್ರಿಯೆ ಗಮನಿಸಿದ ಮೇಲೆ ಅವರೂ ಸಂತಸದಿಂದಿದ್ದಾರೆ. [ಮಂಗಳನ ಅಂಗಳಕ್ಕೆ ಮೂವರು ಭಾರತೀಯರು]
ಅಮೃತಾ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಶ್ರದ್ಧಾ ತನ್ನ ನಿರ್ಧಾರಕ್ಕೆ ಸ್ನೇಹಿತರೂ ಬೆಂಬಲ ಸೂಚಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಆಯ್ಕೆಯ ನಾಲ್ಕನೇ ಹಂತದಲ್ಲಿಯೂ ಯಶಸ್ಸು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಮಂಗಳನಲ್ಲಿ ಮೋಡವಿದೆಯಂತೆ]
ನೆದರ್ಲ್ಯಾಂಡ್ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಮಂಗಳ ಗ್ರಹಕ್ಕೆ ಏಕಮುಖ ಯಾನ ಹಮ್ಮಿಕೊಂಡಿದೆ. ಮಂಗಳ ಗ್ರಹದಲ್ಲಿ ಮಾನವರ ಕಾಲೋನಿ ನಿರ್ಮಿಸುವುದು ಈ ಯೋಜನೆಯ ಉದ್ದೇಶ ಎಂದು ಸಂಸ್ಥೆ ತಿಳಿಸಿದೆ. ಮಂಗಳ ಗ್ರಹಕ್ಕೆ ಏಕಮುಖ ಯಾನಕ್ಕೆ ಆಸಕ್ತರಿಂದ ಆಹ್ವಾನಿಸಿದ್ದ ಸಂಸ್ಥೆ ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾದವರ ಪಟ್ಟಿಯನ್ನು ಮಂಗಳವಾರವಷ್ಟೇ ಬಿಡುಗಡೆ ಮಾಡಿತ್ತು. [ಮಂಗಳ ಗ್ರಹದ ವಿಡಿಯೋ ನೋಡಿ]
ಭಾರತದಿಂದ ಮೂವರು ನಾಲ್ಕನೇ ಹಾಗೂ ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ (19), ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ತನ್ಜೀತ್ಸಿಂಗ್ ಭಾಟಿಯಾ (29) ಹಾಗೂ ದುಬೈನಲ್ಲಿ ವಾಸಿಸುತ್ತಿರುವ ರಿತಿಕಾ ಸಿಂಗ್ (29) ಭಾರತದಿಂದ ಆಯ್ಕೆಯಾದವರು.
ಅರ್ಜಿ ಸಲ್ಲಿಸಿದವರು ಈಗಾಗಲೇ ಆನ್ಲೈನ್ ಸಂದರ್ಶನ, ವ್ಯಕ್ತಿತ್ವ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಿದ್ದಾರೆ. ನಾಲ್ಕನೇ ಹಾಗೂ ಅಂತಿಮ ಸುತ್ತಿನ ಅರ್ಹತಾ ಪರೀಕ್ಷೆಯನ್ನು ಇನ್ನು ಮೇಲಷ್ಟೇ ನಡೆಸಬೇಕಾಗಿದೆ. [ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ]
2024ರಲ್ಲಿ ನಡೆಯಲಿರುವ ಈ ಪ್ರಯಾಣ ನಡೆಸುವ ಯೋಜನೆ ಇದೆ. ಮಂಗಳಗ್ರಹಕ್ಕೆ 50 ಪುರುಷರು ಹಾಗೂ 50 ಮಹಿಳೆಯರು ಪಯಣ ಬೆಳೆಸಲಿದ್ದಾರೆ. ಅಮೆರಿಕದಿಂದ 39, ಯುರೋಪ್ನಿಂದ 31, ಏಷ್ಯಾದಿಂದ 16, ಆಫ್ರಿಕಾದಿಂದ 7 ಹಾಗೂ ಒಷೇನಿಯಾದಿಂದ 7 ಜನ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.