ಯಾವುದೇ ಪಕ್ಷ ಸೇರುವುದಿಲ್ಲ: ಹಿರಿಯ ಮುಖಂಡ ಯಶವಂತ್ ಸಿನ್ಹಾ ಘೋಷಣೆ
ನವದೆಹಲಿ, ಜುಲೈ 26: ರಾಷ್ಟ್ರಪತಿ ಚುನಾವಣೆಯಲ್ಲಿ ಪರಾಜಿತಗೊಂಡ ಬಳಿಕ ಹಿರಿಯ ಮುಖಂಡ ಯಶವಂತ್ ಸಿನ್ಹಾ ಮುಂದಿನ ನಡೆ ಏನು? ಎಂಬ ಕುತೂಹಲ ಮನೆ ಮಾಡಿತ್ತು. ಯುಪಿಎ ಬೆಂಬಲ ಪಡೆದಿದ್ದ ಸಿನ್ಹಾ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು ಎಂದೆನಿಸಲಾಗಿತ್ತು. ಆದರೆ, ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ, ಪಕ್ಷೇತರನಾಗಿ ಉಳಿಯುತ್ತೇನೆ ಎಂದು ಯಶವಂತ್ ಸಿನ್ಹಾ ಘೋಷಿಸಿದ್ದಾರೆ.
2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಸ್ಪರ್ಧಿಸಿದ್ದರು. ಯುಪಿಎ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಕಣದಲ್ಲಿದ್ದರು.
ಭಾರತದ ರಾಷ್ಟ್ರಪತಿಗಳ ಪಟ್ಟಿ:ಡಾ. ರಾಜೇಂದ್ರ ಪ್ರಸಾದ್ -ದ್ರೌಪದಿ ಮುರ್ಮು
ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರು. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮುಂದಿನ ರಾಷ್ಟ್ರಪತಿಯಾಗಿ ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ, 84 ವರ್ಷ ವಯಸ್ಸಿನ ಯಶವಂತ್ ಸಿನ್ಹಾ, "ನಾನು ಸ್ವತಂತ್ರವಾಗಿ ಉಳಿಯುತ್ತೇನೆ ಮತ್ತು ಬೇರೆ ಯಾವುದೇ ಪಕ್ಷವನ್ನು ಸೇರುವುದಿಲ್ಲ" ಎಂದು ಪಿಟಿಐಗೆ ತಿಳಿಸಿದ್ದಾರೆ. ಚುನಾವಣೆಗೂ ಮುಂಚಿತವಾಗಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
''ಚುನಾವಣೆ ಬಳಿಕ ಟಿಎಂಸಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದೀರಾ?" ಎಂಬ ಪ್ರಶ್ನೆಗೆ ಸಿನ್ಹಾ ನಕಾರಾತ್ಮಕವಾಗಿ ಉತ್ತರಿಸಿ. "ಯಾರೂ ನನ್ನೊಂದಿಗೆ ಮಾತನಾಡಿಲ್ಲ; ನಾನು ಯಾರೊಂದಿಗೂ ಮಾತನಾಡಿಲ್ಲ," ಎಂದು ಹೇಳಿದರು, "ವೈಯಕ್ತಿಕ ಆಧಾರದ ಮೇಲೆ" ಟಿಎಂಸಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ.
"ನಾನು (ಸಾರ್ವಜನಿಕ ಜೀವನದಲ್ಲಿ) ಯಾವ ಪಾತ್ರವನ್ನು ವಹಿಸುತ್ತೇನೆ, ನಾನು ಎಷ್ಟು ಸಕ್ರಿಯನಾಗಿರುತ್ತೇನೆ ಎಂಬುದನ್ನು ನಾನು ನೋಡಬೇಕು. ನನಗೆ ಈಗ 84 ವರ್ಷ, ಆದ್ದರಿಂದ ಇವು ಸಮಸ್ಯೆಗಳು; ನಾನು ಎಷ್ಟು ದಿನ ನಿರ್ವಹಿಸಬಲ್ಲೆ ಎಂದು ನೋಡಬೇಕು" ಎಂದು ಮಾಜಿ ಹಣಕಾಸು ಸಚಿವರು ಹೇಳಿದರು.
ವ್ಯಕ್ತಿಚಿತ್ರ: ಯಶವಂತ ಸಿನ್ಹಾ ಈಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿ
2018ರಲ್ಲಿ ಮಾತನಾಡಿದ್ದ ಯಶವಂತ್ ಸಿನ್ಹಾ, ''ನಾನು ಸಕ್ರೀಯ ರಾಜಕಾರಣದಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದೇನೆ. ಇಂದು ನಾನು ಬಿಜೆಪಿಯೊಂದಿಗೆ ಎಲ್ಲ ಸಂಬಂಧಗಳಿಂದ ಕಳಚಿಕೊಳ್ಳುತ್ತಿದ್ದೇನೆ,'' ಎಂದಿದ್ದರು.
ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಉಗ್ರ ಹೋರಾಟಕ್ಕಾಗಿ ರಾಷ್ಟ್ರಮಂಚ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿದ್ದರು. 2018ರಲ್ಲಿ ಬಿಜೆಪಿ ತೊರೆದು 2021ರಲ್ಲಿ ಟಿಎಂಸಿ ಸೇರಿಕೊಂಡರು. 2022ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ನಂತರ ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಸಿನ್ಹಾ, ಮೋದಿ ಸರ್ಕಾರದ ನಿಲುವುಗಳನ್ನು ಹಲವು ಬಾರಿ ಖಂಡಿಸಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ನೀತಿ, ಇತ್ತೀಚಿನ ನ್ಯಾಯಾಂಗ ವ್ಯವಸ್ಥೆಯ ಬಿಕ್ಕಟ್ಟನ್ನು ಕಟುವಾಗಿ ಸಿನ್ಹಾ ಟೀಕಿಸಿದ್ದಾರೆ. ಬಿಹಾರ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಯಶವಂತ್ ಸಿನ್ಹಾ ಅವರು ಮೂಲ ಜನತಾ ಪಾರ್ಟಿಯಿಂದ ರಾಜಕೀಯ ಬೆಳವಣಿಗೆ ಕಂಡವರು.
1984 ರಿಂದ 1991 ತನಕ ಹಾಗೂ ನಂತರ 2018ರಲ್ಲಿ ಪಕ್ಷ ತೊರೆಯುವ ತನಕ ಬಿಜೆಪಿ ಹಿರಿಯ ಮುಖಂಡರಾಗಿ ಗುರುತಿಸಿಕೊಂಡವರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಆರ್ಥಿಕ ನೀತಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಜೆ ವೇಳೆ ಕೇಂದ್ರ ಬಜೆಟ್ ಮಂಡನೆ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದರು. ಫ್ರೆಂಚ್ ಸರ್ಕಾರ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದಿದ್ದಾರೆ.
ಆರೋಪಗಳು: 2013ರಲ್ಲಿ ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾರಿಂದ ಮೂವರು ಸಂಸದರಿಗೆ ಹಣ ಸಂದಾಯವಾಗಿತ್ತು. ಎನ್ಡಿಎ ಸೇರ್ಪಡೆಗೆ ಆಮಿಷ ಇದಾಗಿತ್ತು ಎಂದು ಪಪ್ಪು ಯಾದವ್ ಆರೋಪಿಸಿದ್ದರು. ಯುಟಿಐ ಹಗರಣದಲ್ಲಿ ಯಶವಂತ ಸಿನ್ಹಾ ಹೆಸರು ಕೇಳಿ ಬಂದಿತ್ತು.
2017ರಲ್ಲಿ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.ಪುತ್ರ ಜಯಂತ್ ಸಿನ್ಹಾರಿಗೆ ಹಜಾರಿಬಾಗ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವ ಮೂಲಕ ಸ್ವಜನಪಕ್ಷಪಾತಿ ಎಂದು ಟೀಕೆಗೊಳಗಾಗಿದ್ದರು.
Recommended Video