Maharashtra Assembly Election 2024: ಮನೋಜ್ ಜಾರಂಗೆ ಯು-ಟರ್ನ್, ಎಂವಿಎ ಬಲ ಹೆಚ್ಚಳ?
ಮುಂಬೈ, ನವೆಂಬರ್ 04: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಪಾಟೀಲ್ ಮಹತ್ವದ ಘೋಷಣೆ ಮಾಡಿದರು. ನವೆಂಬರ್ 20ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಈ ಘೋಷಣೆ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಹೆಚ್ಚಿನ ಬಲವನ್ನು ತಂದಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮನೋಜ್ ಜಾರಂಗೆ ಪಾಟೀಲ್ ಸೋಮವಾರ ಚುನಾವಣೆಗೆ ಸ್ಪರ್ಧಿಸುವಿದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಯು-ಟರ್ನ್ ತೆಗೆದುಕೊಂಡರು.

ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ತಮ್ಮ ಅಭ್ಯರ್ಥಿಗಳು ಕೂಡಲೇ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮನೋಜ್ ಜಾರಂಗೆ ಪಾಟೀಲ್ ಕರೆ ಕೊಟ್ಟಿದ್ದಾರೆ. 42 ವರ್ಷದ ನಾಯಕನ ಈ ಕರೆ ಮಹಾರಾಷ್ಟ್ರ ಚುನಾವಣೆಯ ಚಿತ್ರಣವನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ.
ಅಭ್ಯರ್ಥಿಗಳಿಗೆ ಬೆಂಬಲ: ನಾನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಮತ್ತು 10-15 ಕ್ಷೇತ್ರಗಳಲ್ಲಿ ನಾವು ಆಡಳಿತ ನಡೆಸುವ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತೇನೆ ಎಂದು ಮನೋಜ್ ಜಾರಂಗೆ ಪಾಟೀಲ್ ಹೇಳಿದ್ದರು. ಇದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟಕ್ಕೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಸೋಮವಾರ ಮನೋಜ್ ಜಾರಂಗೆ ಪಾಟೀಲ್ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮರಾಠಿಗರಿಗೆ ನ್ಯಾಯವನ್ನು ನೀಡದವರ ವಿರುದ್ಧ ನಾವು ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಮಹಾಯತಿ ಮೈತ್ರಿಕೂಟದ ವಿರುದ್ದ ಪರೋಕ್ಷವಾಗಿ ಅವರು ಅಸಮಾಧಾನ ಹೊರಹಾಕಿದರು.
"ಹಲವು ಸುತ್ತಿನ ಮಾತುಕತೆಗಳ ಬಳಿಕ ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ಮರಾಠಿಗರು ಯಾರನ್ನು ಗೆಲ್ಲಿಸಬೇಕು, ಯಾರನ್ನು ಬೆಂಬಲಿಸಬೇಕು ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ. ನಾನು ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ" ಎಂದು ಮನೋಜ್ ಜಾರಂಗೆ ಪಾಟೀಲ್ ಸ್ಪಷ್ಟಪಡಿಸಿದರು.
"ನನ್ನ ಮೇಲೆ ಯಾರಿಂದಲೂ ಒತ್ತಡವಿಲ್ಲ. ನನ್ನ ಪ್ರಕಾರ ಮರಾಠ ಸಮುದಾಯ ಯಾರನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸಬೇಕಿದೆ. ಯಾರು ಸಮಯದಾಯಕ್ಕೆ ತಪ್ಪು ಸಂದೇಶ ನೀಡಿದರೋ, ದೌರ್ಜನ್ಯವನ್ನು ನಡೆಸಿದರೋ ಅವರಿಗೆ ಚುನಾವಣೆಯಲ್ಲಿ ಜನರು ಪಾಠ ಕಲಿಸಬೇಕು" ಎಂದರು.
"ಒಂದು ಸಮಯದಾಯದ ಬೆಂಬಲದಿಂದ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ. ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರು ಚುನಾವಣೆಯಲ್ಲಿ ಸೋತರೆ ನಮಗೆ ಅವಮಾನ ಆದಂತೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳಿಗೂ ಸಹ ನಾಮಪತ್ರ ವಾಪಸ್ ಪಡೆಯಲು ಕರೆ ನೀಡಿದ್ದೇನೆ" ಎಂದು ಮನೋಜ್ ಜಾರಂಗೆ ಪಾಟೀಲ್ ಹೇಳಿದರು.
ಮರಾಠಿಗೆ ಮೀಸಲಾತಿ ವಿಚಾರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಮನೋಜ್ ಜಾರಂಗೆ ಪಾಟೀಲ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಮರಾಠವಾಡ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟ ಅಭ್ಯರ್ಥಿಗಳನ್ನು ನಾನು ಬೆಂಬಲಿಸುತ್ತೇನೆ ಎಂದು ಘೋಷಣೆ ಮಾಡಿದ್ದರು.
ಆದರೆ ಸೋಮವಾರದ ಮನೋಜ್ ಘೋಷಣೆ ಚುನಾವಣೆಯಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಸಹಾಯಕವಾಗುವ ನಿರೀಕ್ಷೆ ಇದೆ. ಬಿಜೆಪಿ ವಿರೋಧಿ ಮತಗಳು ಎಂವಿಎ ಮೈತ್ರಿಕೂಟಕ್ಕೆ ಲಭಿಸುವ ನಿರೀಕ್ಷೆ ಇದೆ.












Click it and Unblock the Notifications