ಮಹಾರಾಷ್ಟ್ರ ಚುನಾವಣೆ 2024: ಡಿಸಿಎಂ ಅಜಿತ್ ಪವಾರ್ ಹೇಳಿಕೆ ಹುಟ್ಟುಹಾಕಿತು ಕುತೂಹಲ
ಮುಂಬೈ, ಸೆಪ್ಟೆಂಬರ್ 12: ವಿವಿಧ ಕಾರಣಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024 ಕುತೂಹಲ ಮೂಡಿಸಿದೆ. ಉಪ ಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್ ಬರಮತಿ ಕ್ಷೇತ್ರವನ್ನು ಬಿಟ್ಟುಕೊಡುವ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪತ್ನಿ ಸೋತ ಅಘಾತದಲ್ಲಿರುವ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೇ?, ಹಾಗಾದರೆ ಈ ಬಾರಿಯ ಚುನಾವಣೆಗೆ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆಯಾಗಿದೆ. ಈ ನಡುವೆ ಸಚಿವರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಭಾನುವಾರ ಉಪ ಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್, "ಬರಮತಿ ಕ್ಷೇತ್ರಕ್ಕೆ ನನಗಿಂತ ಹೊಸ ಶಾಸಕರು ಬೇಕು" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಅಜಿತ್ ಪವಾರ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ. ಅವರು ಶಸ್ತ್ರತ್ಯಾಗ ಮಾಡಿಲ್ಲ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬರಮತಿ ಕ್ಷೇತ್ರದಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಸೋಲು ಕಂಡಿದ್ದರು. ಆದ್ದರಿಂದ ಅಜಿತ್ ಪವಾರ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬರಮತಿ ಕ್ಷೇತ್ರ ಬಿಟ್ಟುಕೊಡು ಮಾತನಾಡಿದ್ದರು. ಆದರೆ ರಾಜ್ಯದ ಪ್ರಭಾವಿ ಒಬಿಸಿ ನಾಯಕ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ ಸಚಿವ ಛಗನ್ ಭುಜಬಲ್ ಪವಾರ್ ಹೇಳಿಕೆ ಟ್ವಿಸ್ಟ್ ನೀಡಿದ್ದಾರೆ.
ಛಗನ್ ಭುಜಬಲ್ ಹೇಳುವುದೇನು?; ಮಾಧ್ಯಮಗಳ ಜೊತೆ ಮಾತನಾಡಿದ ಛಗನ್ ಭುಜಬಲ್, "ಅಜಿತ್ ದಾದಾ ನಮ್ಮ ಕ್ಯಾಪ್ಟನ್. ಅವರು ತಮ್ಮ ನೋವು ಹೊರಹಾಕಿದ್ದಾರೆ. ಅವರು ವಿಧಾನಸಭೆ ಚುನಾವಣೆಗೆ ಬರಮತಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ. ಅವರು ಶಸ್ತ್ರ ತ್ಯಾಗ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಅಜಿತ್ ಪವಾರ್ ಮಾತನಾಡಿ, "ನನಗೆ ಈಗ 65 ವರ್ಷ ವಯಸ್ಸು, ನನಗೆ ತಪ್ತಿ ಆಗಿದೆ, ಬರಮತಿ ಕ್ಷೇತ್ರ ಹೊಸ ಶಾಸಕರನ್ನು ಪಡೆಯಬೇಕು. ಬಳಿಕ ನೀವು 1991-2024ರ ತನಕ ಕ್ಷೇತ್ರಕ್ಕೆ ನನ್ನ ಕೊಡುಗೆಯನ್ನು ಪರಿಶೀಲಿಸಿ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಅನುದಾನ ತಂದಿದ್ದೇನೆ" ಎಂದು ಹೇಳಿದ್ದರು.
ಎನ್ಸಿಪಿ ನಾಯಕ ಅಜಿತ್ ಪವಾರ್ 2023ರಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯ ಎದ್ದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸೇರಿದರು. 5 ಬಾರಿಯ ಶಾಸಕರಾದ ಅವರನ್ನು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ)ದ 'ಮಹಾಯುತಿ' ಮೈತ್ರಿಕೂಟ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಮಾಡಲಾಯಿತು.
ಶಾಸಕರ ಬೆಂಬಲ ಹೆಚ್ಚಿದ್ದ ಕಾರಣಕ್ಕೆ ಚುನಾವಣಾ ಆಯೋಗ ಎನ್ಸಿಪಿ ಪಕ್ಷದ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ನೀಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ಬರಮತಿ ಕ್ಷೇತ್ರದಲ್ಲಿ ಪತ್ನಿ ಸುನೇತ್ರಾ ಪವಾರ್ ಅವರನ್ನು ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಕಣಕ್ಕಿಳಿಸಿದರು. ಕ್ಷೇತ್ರದ ಹಾಲಿ ಸಂಸದೆ ಸುಪ್ರಿಯಾ ಸುಳೆ 4ನೇ ಬಾರಿಗೆ ಗೆದ್ದು ದಾಖಲೆಯನ್ನು ಬರೆದರು. ಪತ್ನಿ ಸುನೇತ್ರಾ ಪವಾರ್ ಸೋಲು ಅಜಿತ್ ಪವಾರ್ಗೆ ತೀವ್ರ ಹಿನ್ನಡೆ ತಂದಿದೆ.
ಲೋಕಸಭೆ ಚುನಾವಣೆಯಲ್ಲಿ ಬರಮತಿ ಕ್ಷೇತ್ರದಲ್ಲಿ ಸುನೇತ್ರಾ ಪವಾರ್ ಸೋತರೂ ಸಹ ಬಿಜೆಪಿ ಮತ್ತು ಏಕನಾಥ ಶಿಂಧೆ ಬಣದ ಶಿವಸೇನೆ ನೆರವಿನಿಂದ ಅವರು ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಜಿತ್ ಪವಾರ್ ಬರಮತಿ ಕ್ಷೇತ್ರದಿಂದ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 7 ಬಾರಿ ಅವರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications