ಅರಬ್ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಭಾರತಕ್ಕೇನು ನಷ್ಟ?
ನವದೆಹಲಿ, ಜೂನ್ 5: ಅರಬ್ ದೇಶಗಳ ಮಧ್ಯೆ ಹುಟ್ಟಿಕೊಂಡ ಬಿಕ್ಕಟ್ಟಿನ ಬಿಸಿ ಭಾರತವನ್ನೂ ತಟ್ಟಲಿದೆ. ಹಾಗಂತ ಈ ಬಿಕ್ಕಟ್ಟು ಶಮನ ಮಾಡುವಂತ ಯಾವ ಅವಕಾಶಗಳೂ ಭಾರತದ ಮುಂದೆ ಇಲ್ಲ. ಜಾಸ್ತಿ ಎಂದರೆ ಈ ಬಿಕ್ಕಟ್ಟು ಶಮನವಾಗಲಿ ಎಂದು ಕಾಯಬಹುದು ಅಷ್ಟೆ.
ಬಹ್ರೇನ್ , ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಕತಾರ್ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವುದರಿಂದ ಭಾರತೀಯರಿಗೆ ಪ್ರಯಾಣದ್ದೇ ದೊಡ್ಡ ಸಮಸ್ಯೆಯಾಗಲಿದೆ.
ಕತಾರ್ ನಲ್ಲಿ ಸುಮಾರು 8 ಲಕ್ಷ ಭಾರತೀಯರಿದ್ದಾರೆ. ಜತೆಗೆ ಭಾರತದ ದೊಡ್ಡ ಇಂಧನ ಮೂಲವೂ ಇದೇ ಕತಾರ್. ಹೀಗಾಗಿ ಭಾರತದ ಮೇಲೆ ಈ ರಾಜತಾಂತ್ರಿಕ ಬಿಕ್ಕಟ್ಟಿನ ಪರಿಣಾಮಗಳು ಜೋರಾಗಿರಲಿವೆ. ಈಗಾಗಲೇ ಹಲವಾರು ವಿಮಾನಯಾನ ಸಂಸ್ಥೆಗಳು ಕತಾರ್ ಗೆ ತಮ್ಮ ವಿಮಾನಯಾನವನ್ನು ನಿಲ್ಲಿಸಿದ್ದು ಇದು ಮೊದಲ ಸಮಸ್ಯೆಯಾಗಲಿದೆ.
ಇನ್ನು ಕತಾರ್ ಭಾರತದ ವಸ್ತುಗಳಿಗೆ ದೊಡ್ಡ ಮಾರುಕಟ್ಟೆಯೂ ಹೌದು. ಭಾರತದಿಂದ ಪ್ರತೀ ವರ್ಷ ಅತೀ ಹೆಚ್ಚಿನ ಮೌಲ್ಯದ ವಸ್ತುಗಳು ಕತಾರ್ ಗೆ ರಫ್ತಾಗುತ್ತವೆ. ಇನ್ನು ಕತಾರಿನಿಂದ ಪ್ರತೀ ವರ್ಷ ದೊಡ್ಡ ಪ್ರಮಾಣದ ಗ್ಯಾಸನ್ನು (ಎಲ್ಎನ್'ಜಿ) ಭಾರತ ಆಮದು ಮಾಡಿಕೊಳ್ಳುತ್ತದೆ. ಭಾರತದ ಗ್ಯಾಸ್ ಆಮದಿನಲ್ಲಿ ಕತಾರ್ ಪಾಲೇ ಶೇಕಡಾ 65 ರಷ್ಟಿದ್ದರೆ, ಕತಾರಿನ ಪಾಲಿಗೆ ಭಾರತದ ಗ್ಯಾಸ್ ಮಾರುಕಟ್ಟೆ ಶೇಕಡಾ 15ನ್ನು ತಲುಪುತ್ತದೆ. ಪ್ರತೀ ವರ್ಷ 7.5 ಮಿಲಿಯನ್ ಮೆಟ್ರಿಕ್ ಟನ್ ಭಾರತ ಆಮದು ಮಾಡಿಕೊಳ್ಳುವ ಗ್ಯಾಸಿನ ಪ್ರಮಾಣವಾಗಿದೆ.
ಹೀಗೆ ಭಾರತ ಮತ್ತು ಕತಾರ್ ನಡುವೆ ಪ್ರತಿ ವರ್ಷ 17 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ವ್ಯವಹಾರಗಳು ನಡೆಯುತ್ತವೆ. ಭಾರತದಿಂದ ವಿವಿಧ ಯಂತ್ರಗಳು, ಸಲಕರಣೆಗಳು, ಕಬ್ಬಿಣ, ಪ್ಲಾಸ್ಟಿಕ್, ಕಟ್ಟಡ ಸಾಮಾಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ರಾಸಾಯನಿಕಗಳು, ರಬ್ಬರ್, ಸಾಂಬಾರ ಪದಾರ್ಥಗಳು ರಫ್ತಾಗುತ್ತವೆ.
ತೈಲ ಬೆಲೆ ಏರಿಕೆ ಬಿಸಿ
ಇದರ ಮಧ್ಯೆ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ. ತೈಲ ಬೆಲೆ ಏರಿಕೆ ಆದರೆ ಭಾರತಕ್ಕೆ ನಿಸ್ಸಂಶಯವಾಗಿ ಭಾರೀ ಹೊರೆಯಾಗಲಿದೆ.