ತಾಜ್ ಮಹಲ್ ಮುಂದೆ ನಮಾಜಿಗೆ ಅವಕಾಶ ನೀಡಲು ಸುಪ್ರೀಂ ನಕಾರ
ನವದೆಹಲಿ, ಜುಲೈ 09: ವಿಶ್ವದ ಅದ್ಭುತ ಸ್ಮಾರಕ, ಐತಿಹಾಸಿಕ ಕಟ್ಟಡ ತಾಜ್ ಮಹಲ್ ಮುಂದೆ ನಮಾಜ್ ಗೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು(ಜುಲೈ 09) ನಿರಾಕರಿಸಿದೆ.
'ತಾಜಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಹಾಗಾಗಿ ಇಲ್ಲಿ ನಮಾಜ್ ಮಾಡಬೇಕೆನ್ನುವ ಯೋಚನೆಯನ್ನೇ ತಲೆಯಿಂದ ತೆಗೆದುಹಾಕಿ. ನಮಾಜ್ಗಾಗಿಯೇ ಇತರೆ ಸ್ಥಳಗಳು ಇವೆ. ಐತಿಹಾಸಿಕ ಸ್ಮಾರಕಗಳಲ್ಲಿ ಈ ರೀತಿಯ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದೇ ವೇಳೆ ತಾಜ್ ಮಹಲ್ ಸಂರಕ್ಷಣೆ, ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ಭಾರತೀಯ ಪುರಾತತ್ತ್ವ ಇಲಾಖೆಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಪಿಡಿಯಲ್ಲಿ ತಾಜ್ ಮಹಲ್ ನಾಪತ್ತೆಯಾದ ದಿನಗಳಿಂದ ಈ ಸ್ಮಾರಕದ ಬಗ್ಗೆ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲ್ಲೇ ಇತ್ತು.
ತಾಜ್ ಮಹಲ್ ನಲ್ಲಿ ಶುಕ್ರವಾರದಂದು ನಡೆಯುವ ನಮಾಜ್ ಮಾಡಲು ಅವಕಾಶ ಕೊಡಬೇಕು ಎಂದು ತಾಜ್ ಮಹಲ್ ಮಸೀದಿ ನಿರ್ವಹಣಾ ಸಮಿತಿಯ ಸೈಯದ್ ಇಬ್ರಾಹಿಂ ಹುಸೇನ್ ಜೈದಿ ಅವರು ಅರ್ಜಿ ಹಾಕಿದ್ದರು. ನಮಾಜಿಗೆ ಅವಕಾಶ ನೀಡಬಾರದು, ಒಂದು ವೇಳೆ, ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಲು ಸಾಧ್ಯವಿಲ್ಲವಾದರೆ ಅಲ್ಲಿ ಹಿಂದೂಗಳಿಗೆ ಶಿವನ ಪ್ರಾರ್ಥನೆ ಮಾಡಲೂ ಅನುವು ಮಾಡಿಕೊಡಬೇಕೆಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಪಾಂಡೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications