ಎಲ್ಲವೂ ಕೇಂದ್ರದ ಆಜ್ಞೆಯಂತೆ ನಡೆದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಏಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ದೆಹಲಿ ಜನವರಿ 13: ಎಲ್ಲವೂ ಕೇಂದ್ರದ ಆಜ್ಞೆಯಂತೆ ಆಡಳಿತ ನಡೆಯುವುದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಏಕೆ ಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ. ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ-ದೆಹಲಿ ಸರ್ಕಾರದ ನಡುವಿನ ವಿವಾದದ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ಪ್ರಶ್ನೆ ಮಾಡಿದೆ.
ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವಿನ ವಾದವನ್ನು ಮೂರನೇ ದಿನವೂ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪೌರಕಾರ್ಮಿಕರ ವರ್ಗಾವಣೆ ಮತ್ತು ಪೋಸ್ಟಿಂಗ್ಗಳ ಮೇಲೆ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರದಿಂದ ವಾದ ಭುಗಿಲೆದ್ದಿದೆ. ಇದರ ವಿಚಾರಣೆ ವೇಳೆ ಕೋರ್ಟ್ ಕೇಂದ್ರ ಪರ ವಕೀಲರಿಗೆ ಪ್ರಶ್ನೆ ಮಾಡಿದೆ.
ದಿನವಿಡೀ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಕೇಂದ್ರದ ಆಜ್ಞೆಯಂತೆ ಆಡಳಿತ ನಡೆಸುವುದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಯಾಕೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಶ್ನೆ ಮಾಡಿದೆ. ಶಿಕ್ಷಣ, ಪರಿಸರ ಇತ್ಯಾದಿಗಳಿಗೆ ಸಂಬಂಧಿಸಿದ ಹುದ್ದೆಗಳಿಗೆ ನೇಮಕಾತಿ ಮಾಡಲು ದೆಹಲಿ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಕೇಂದ್ರದ ವಾದವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮೆಹ್ತಾ ಅವರಿಗೆ ಈ ಪ್ರಶ್ನೆಯನ್ನು ಕೇಳಿತು.
ಒಬ್ಬ ಅಧಿಕಾರಿ ತನ್ನ ಪಾತ್ರವನ್ನು ನಿರ್ವಹಿಸದಿದ್ದರೆ, ಅವನನ್ನು ವರ್ಗಾವಣೆ ಮಾಡಿ ಬೇರೆಯವರನ್ನು ಕರೆತರುವಲ್ಲಿ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲವೇ? ಕಾರ್ಯಾಂಗದ ನಿಯಂತ್ರಣವು ಕೇಂದ್ರದ ಬಳಿ ಇದ್ದರೆ, ದೆಹಲಿ ಸರ್ಕಾರವು ಶಾಸಕಾಂಗ ಅಧಿಕಾರವನ್ನು ಹೊಂದಿರುವುದರ ಅರ್ಥವೇನು ಎಂದು ಕೋರ್ಟ್ ಕೇಳಿದೆ. ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ದೆಹಲಿಯು ಸಂವಿಧಾನದ 308ನೇ ವಿಧಿಯ ಪ್ರಕಾರ ತನ್ನದೇ ಆದ ಅಧಿಕಾರಿಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಮೆಹ್ತಾ ಸೂಚಿಸಿದರು.
ಸುಪ್ರೀಂ ಕೋರ್ಟ್ ಈಗ ಜನವರಿ 17ರಂದು ಪ್ರಕರಣದ ವಾದವನ್ನು ಆಲಿಸಲಿದೆ. ಕೋರ್ಟ್ ಕಳೆದ ವರ್ಷ ಮೇ ತಿಂಗಳಲ್ಲಿ ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ವಿಷಯವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.
ದೆಹಲಿಯಲ್ಲಿನ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಶಾಸಕಾಂಗ ಮತ್ತು ಕಾರ್ಯನಿರ್ವಾಹಕ ಅಧಿಕಾರಗಳ ವ್ಯಾಪ್ತಿಗೆ ಸಂಬಂಧಿಸಿದ ಕಾನೂನು ಸಮಸ್ಯೆಯನ್ನು ಆಲಿಸಲು ಸಂವಿಧಾನ ಪೀಠವನ್ನು ಸ್ಥಾಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 22 ರಂದು ಹೇಳಿತ್ತು. ಮೇ 6 ರಂದು, ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ವಿಷಯವನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿತು.