ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?
ನವದೆಹಲಿ, ಫೆಬ್ರವರಿ 01: ಪಾಕಿಸ್ತಾನ ಸೇನೆಯ ವಶದಲ್ಲಿರುವ ಅಭಿನಂದನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡುತ್ತಿದೆ. ಸಂಜೆ ವೇಳೆಗೆ ಹಸ್ತಾಂತರ ಪ್ರಕ್ರಿಯೆ ಮುಗಿಯುತ್ತದೆ ಎನ್ನಲಾಗಿತ್ತು. ಆದರೆ ಇನ್ನೂ ಸಹ ಅಭಿನಂದನ್ ತಾಯ್ನಾಡು ಸೇರಿಲ್ಲ.
ಇಸ್ಲಾಮಾಬಾದ್ನಿಂದ ಮಧ್ಯಾಹ್ನವೇ ಹೊರಟ ಅಭನಿಂದನ್ ಸಂಜೆ 4:30 ಅಷ್ಟರಲ್ಲಾಗಲೇ ವಾಘಾ ತಲುಪಿದ್ದರು. ಅಷ್ಟು ಬೇಗ ವಾಘಾ ತಲುಪಿದ್ದರೂ ಸಹ ಅಭಿನಂದನ್ ಇಷ್ಟು ಸಮಯವಾದರೂ ಇನ್ನೂ ಹಸ್ತಾಂತರವಾಗಿಲ್ಲ.
ಅಭಿನಂದನ್ ಅವರ ಹಸ್ತಾಂತರ ವಿಳಂಬ ಆಗುವುದಕ್ಕೆ ಪಾಕಿಸ್ತಾನವೇ ಕಾರಣ ಎನ್ನಲಾಗುತ್ತಿದೆ. ಅಭಿನಂದನ್ ಅವರ ಬಿಡುಗಡೆಯನ್ನು ಶಾಂತಿ ಸೂಚಕ ಎಂದು ಪಾಕ್ ಕರೆದಿತ್ತು. ಹಾಗಾಗಿ ಭಾರತವೂ ಸಹ ಅದೇ ಭಾವದಲ್ಲಿ ಅಭಿನಂದನ್ ಅವರನ್ನು ಸ್ವೀಕರಿಸಬೇಕು ಎಂದು ಪಾಕಿಸ್ತಾನ ಒತ್ತಡ ಹೇರುತ್ತಿದೆ.

ಶಾಂತಿ ಸೂಚಕ ಸ್ವೀಕರಿಸಲೆನ್ನುವುದು ಪಾಕ್ ಒತ್ತಡ
ಅಭಿನಂದನ್ ಅವರನ್ನು ಸ್ವೀಕರಿಸಿದ ಬಳಿಕ ಭಾರತೀಯ ಸೇನೆಯು 'ತಾನು ಅಭಿನಂದನ್ ಅವರನ್ನು ಶಾಂತಿ ಸೂಚಕವಾಗಿ ವಾಪಸ್ ಪಡೆದಿದ್ದೇವೆ' ಎಂತಲೋ, ಅಥವಾ 'ಪಾಕಿಸ್ತಾನದ ಶಾಂತಿಯ ಸಂದೇಶವನ್ನು ಅನುಮೋದಿಸುತ್ತೇವೆ' ಎಂತಲೋ ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಬೇಕು ಎಂಬುದು ಪಾಕಿಸ್ತಾನದ ಆಗ್ರಹವಾಗಿದೆ.

ಶಾಂತಿ ಸೂಚಕ ಎಂದು ಪರಿಗಣಿಸುವುದಿಲ್ಲ: ಸೇನೆ
ಆದರೆ ನಿನ್ನೆಯೇ ಈ ಬಗ್ಗೆ ಮಾತನಾಡಿದ್ದ ಭಾರತೀಯ ಸೇನೆಯ ಮೂರು ವಿಭಾಗದ ಕಮಾಂಡರ್ಗಳು, ಅಭಿನಂದನ್ ಅವರ ಹಸ್ತಾಂತರವನ್ನು ಪಾಕಿಸ್ತಾನದ ಶಾಂತಿಯ ಸೂಚಕ ಎಂದು ಪರಿಗಣಿಸುವುದಿಲ್ಲ, ಜಿನೆವಾ ಒಪ್ಪಂದದ ಪಾಲನೆ ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

ನಿರ್ಣಯಕ್ಕೆ ಬದ್ಧವಾಗಿದೆ ಭಾರತೀಯ ಸೇನೆ
ಭಾರತೀಯ ಸೇನೆಯು ಈಗಲೂ ಸಹ ಇದೇ ನಿರ್ಣಯಕ್ಕೆ ಬದ್ಧವಾಗಿದ್ದು, ಶಾಂತಿಯ ಸೂಚಕವಾಗಿ ಅಭಿನಂದನ್ ಅವರನ್ನು ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ. ಭಯೋತ್ಪಾದನೆ ವಿರುದ್ಧ, ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಭಾರತ ಈಗ ಶಾಂತಿಯ ಸೂಚಕವನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ತನ್ನ ಹೋರಾಟಕ್ಕೆ ಹಿನ್ನಡೆ ಆಗುತ್ತದೆ ಎಂಬುದು ಭಾರತೀಯ ಸೇನೆಯ ಚಿಂತನೆ.

ಸೌದಿ ಅರೆಬಿಯಾ ಮೂಲಕ ಒತ್ತಡ
ಸೌದಿ ಅರೆಬಿಯಾ ಇಂದು ಪಾಕ್ ಪ್ರಧಾನಿ ಜೊತೆ ಮಾತನಾಡಿದ್ದು, ಅಭಿನಂದನ್ ಹಸ್ತಾಂತರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು. ಅದರಂತೆ ಸೌದಿ ಅರೆಬಿಯಾ ಮೂಲಕ ಭಾರತದ ಮೇಲೆ ಒತ್ತಡ ಹೇರಿಸಿ ಶಾಂತಿ ಸೂಚಕವನ್ನು ಸ್ವೀಕರಿಸುವಂತೆ ಮಾಡಲು ಪಾಕ್ ಯತ್ನಿಸುತ್ತಿದೆ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಅಭಿನಂದನ್ ಅವರ ಹಸ್ತಾಂತರ ತಡವಾಗುತ್ತಿದೆ.












Click it and Unblock the Notifications