'ಮೆಟ್ರೋ ಮ್ಯಾನ್' ಇ ಶ್ರೀಧರನ್ ವ್ಯಕ್ತಿ ಪರಿಚಯ
ಬೆಂಗಳೂರು, ಜೂನ್ 17: ಇ ಶ್ರೀಧರನ್ ಎಂಬ ಹೆಸರು ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಕೇಳಿಬರುತ್ತಿದೆ. ಯಾರಿದು ಶ್ರೀಧರನ್? ದೇಶದ ಪ್ರಥಮ ಪ್ರಜೆಯಾಗುವ ಮಟ್ಟಿಗಿನ ವ್ಯಕ್ತಿತ್ವ ಇವರದಾ ಅಂದುಕೊಳ್ಳುವವರಿಗಾಗಿ ಅವರ ಬಗೆಗಿನ ಪರಿಚಯವಿದು.
ಕೊಚ್ಚಿ ಮೆಟ್ರೋ ಉದ್ಘಾಟನೆಗೆ ತೆರಳಿದ ಮೋದಿಯವರ ಜತೆಗೆ ಇರುವವರ ಪಟ್ಟಿಯಲ್ಲಿ ಶ್ರೀಧರನ್ ಹೆಸರಿರಲಿಲ್ಲ. ಆ ಯೋಜನೆಯ ಮುಖ್ಯ ರೂವಾರಿ ಅವರು. ಈ ಬಗ್ಗೆ ಮಾಧ್ಯಮಗಳಿಗೆ ತುಂಬ ತಣ್ಣಗಿನ ಧ್ವನಿಯಲ್ಲಿ ಉತ್ತರ ನೀಡಿದ್ದರು. ಸುರಕ್ಷತೆ ದೃಷ್ಟಿ ಹಾಗೂ ಪ್ರಧಾನಿಯಂತಹವರು ಬರುವಾಗ ತೀರಾ ಪ್ರಮುಖರು ಅಲ್ಲಿರಬೇಕು.
ನನಗಿಂತ ತುಂಬ ಮುಖ್ಯವಾದವರು ಅಲ್ಲಿದ್ದಾರೆ ಎಂದಿದ್ದರು ಶ್ರೀಧರನ್. ಭಾರತದ ಮೆಟ್ರೋ ಮ್ಯಾನ್, ರೈಲ್ವೆ ಮ್ಯಾನ್ ಎಂಬೆಲ್ಲ ಕಿರೀಟ ತಲೆಯ ಮೇಲೆ ಇದ್ದರೂ ಕತ್ತಿನ ಮೇಲೆ ತಲೆ ಇರುವಂಥ ಅದ್ಭುತ ವ್ಯಕ್ತಿತ್ವ ಅವರದು. ಕೆಲಸ, ಕೆಲಸ ಹಾಗೂ ಕೆಲಸದ ಹೊರತಾಗಿ ಏನನ್ನೂ ಯೋಚಿಸದ ಈ ಶ್ರೀಧರನ್ ರ ಪರಿಚಯ ಇಲ್ಲಿದೆ.

ಭಾರತದ ಎಂಜಿನಿಯರಿಂಗ್ ಸರ್ವೀಸ್
ಹನ್ನೆರಡನೇ ಜೂನ್, 1932ರಲ್ಲಿ ಆಗಿನ ಬ್ರಿಟಿಷರ ಆಳ್ವಿಕೆಯಲ್ಲಿ ಮಲಬಾರ್ ಜಿಲ್ಲೆಯ ಕರುಕಪುತ್ತೂರಿನಲ್ಲಿ ಜನಿಸಿದ ಅವರಿಗೆ ಈಗ ಎಂಬತ್ತೈದು ವರ್ಷ ವಯಸ್ಸು. ಪಾಲಕ್ಕಾಡ್ ನ ವಿಕ್ಟೋರಿಯಾ ಕಾಲೇಜು ಹಾಗ್ ಆಂಧ್ರದ ಕಾಕಿನಾಡದಲ್ಲಿ ಎಂಜಿನಿಯರಿಂಗ್ ಮುಗಿಸಿದ ಅವರು, ಭಾರತೀಯ ಎಂಜಿನಿಯರಿಂಗ್ ಸೇವೆಗೆ ಆಯ್ಕೆಯಾದರು.

ದೆಹಲಿ ಮೆಟ್ರೋದ ಶ್ರೇಯ ಶ್ರೀಧರನ್ ಗೆ
ದೆಹಲಿ ಮೆಟ್ರೋ ಎಂಬ ಬೆರಗು ಸೃಷ್ಟಿಯಾಗಲು ಒಂದೂವರೆ ದಶಕ ಶ್ರಮಿಸಿದವರು ಇದೇ ಶ್ರೀಧರನ್. ಇಂದು ಜಗತ್ತಿನಲ್ಲೇ ಅತ್ಯುತ್ತಮ ಮೆಟ್ರೋಗಳ ಪೈಕಿ ದೆಹಲಿಗೆ ಸ್ಥಾನವಿದೆ. ಅದರ ಶ್ರೇಯ ಇವರಿಗೆ ತಲುಪಬೇಕು. ಅಂದುಕೊಂಡ ಮೊತ್ತ, ಸಮಯದಲ್ಲಿ ಯೋಜನೆ ಪೂರ್ಣವಾಗುವುದರಲ್ಲಿ ಶ್ರೀಧರನ್ ಶ್ರಮ ವಹಿಸಿದ್ದಾರೆ.

ಯಶಸ್ವಿ ನಿರ್ಮಾಣ
ಕೋಲ್ಕತ್ತ ಮೆಟ್ರೋದ ಡೆಪ್ಯೂಟಿ ಚೀಫ್ ಎಂಜಿನಿಯರ್ ಆಗಿ 1970ರಲ್ಲಿ ನೇಮಕವಾದರು. ಡಿಸೈನ್ ಹಾಗೂ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದ್ದ ಅವರು, ಆ ಯೋಜನೆ 1979ರಲ್ಲಿ ಪೂರ್ಣಗೊಳಿಸಿದರು. ಆ ನಂತರ ಕೊಚ್ಚಿ ಶಿಪ್ ಯಾರ್ಡ್ ನ ನಿರ್ದೇಶಕರನ್ನಾಗಿ ಮಾಡಲಾಯಿತು. ಅವರ ನಾಯಕತ್ವದಲ್ಲೇ ಶಿಪ್ ಯಾರ್ಡ್ ನಲ್ಲಿ ಮೊದಲು ಹಡಗು ನಿರ್ಮಾಣವಾಯಿತು.

ನಿವೃತ್ತಿ ನಂತರವೂ ಮುಂದುವರಿಕೆ
ಆ ನಂತರ ಕೊಂಕಣ್ ರೈಲ್ವೆಯ ಜನರಲ್ ಮ್ಯಾನೇಜರ್ ಮಾಡಲಾಯಿತು. ಅಲ್ಲಿ ಹಲವು ಯೋಜನೆಗಳನ್ನು ಶ್ರೀಧರನ್ ಕೈಗೆತ್ತಿಕೊಂಡರು. ಅವರ ನಿವೃತ್ತಿ ನಂತರವೂ ಆಗಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಸೇವೆ ವಿಸ್ತರಣೆ ಮಾಡಿದರು. ಕಾಂಟ್ರಾಕ್ಡ್ ಆಧಾರದಲ್ಲಿ ಮುಂದುವರಿಸಿದರು.

ಕಷ್ಟದ ಯೋಜನೆ ಅಚ್ಚುಕಟ್ಟಾಗಿ ಆಯಿತು
1997ರಲ್ಲಿ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶ್ರೀಧರನ್ ಅವರನ್ನು ಆಗ ದೆಹಲಿ ಮುಖ್ಯಮಂತ್ರಿಯಾಗಿದ್ದ ಸಾಹಿಬ್ ಸಿಂಗ್ ವರ್ಮಾ ನೇಮಿಸಿದರು. ಪೂರ್ಣಗೊಳಿಸಲು ಸಾಧ್ಯವೇ ಇಲ್ಲ ಎಂಬಂತಿದ್ದ ಯೋಜನೆಯನ್ನು ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು ಶ್ರೀಧರನ್.

ಪದ್ಮವಿಭೂಷಣ ಗೌರವ
ದೆಹಲಿ ಮೆಟ್ರೋದ ಯಶಸ್ಸು ಖಂಡಿಯಾ ಶ್ರೀಧರನ್ ಅವರಿಗೆ ಸೇರಬೇಕು. 2011ರಲ್ಲಿ ಅವರು ನಿವೃತ್ತರಾದರು. ಅವರ ಸೇವೆಗೆ ಪದ್ಮಶ್ರೀ, ಪದ್ಮ ವಿಭೂಷಣ ಎಂಬ ಗೌರವವನ್ನು ಭಾರತ ಸರಕಾರ ನೀಡಿದೆ.

ಗೌರವ ಸಲ್ಲಿಕೆ
ಏಷ್ಯಾದ ಹಿರೋಗಳ ಪೈಕಿ ಈ ಮೆಟ್ರೋ ಮ್ಯಾನ್ ಒಬ್ಬರು ಎಂದು ಟೈಮ್ ನಿಯತಕಾಲಿಕೆ ಹದಿನಾಲ್ಕು ವರ್ಷದ ಹಿಂದೆ ಕೊಂಡಾಡಿದೆ. ಹೈ ಲೆವೆಲ್ ಅಡ್ವೈಸರಿ ಗ್ರೂಪ್ ಆನ್ ಸಸ್ಟೈನಬಲ್ ಟ್ರಾನ್ಸ್ ಪೋರ್ಟ್ ಗಾಗಿ ಅವರನ್ನು ಮೂರು ವರ್ಷದ ಅವಧಿಗೆ ನೇಮಕ ಮಾಡಲಾಯಿತು.

ಪ್ರೇಕ್ಷಕರಿಂದ ಚಪ್ಪಾಳೆ ಸ್ವಾಗತ
ಜೂನ್ ಹದಿನೇಳರ ಕೊಚ್ಚಿ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದ ವೇಳೆ ಕೊನೆಯಲ್ಲಿ ಹೇಳಿದ್ದು ಈ ಶ್ರೀಧರನ್ ಹೆಸರು. ಆ ವೇಳೆ ಅಲ್ಲಿ ಸೇರಿದ್ದ ಮೂರು ಸಾವಿರ ಮಂದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಭಾಷಣ ಮಾಡುತ್ತಿದ್ದವರು ಕೆಲ ಕಾಲ ಮಾತು ನಿಲ್ಲಿಸಬೇಕಾಯಿತು. ಆಗ ಪ್ರಧಾನಿ ಮೋದಿ ಅವರು ಶ್ರೀಧರನ್ ಅವರ ಮುಖದ ಮೇಲೆ ಯಾವುದೇ ಭಾವನೆಗಳು ಇಲ್ಲದಿದ್ದನ್ನು ಅಚ್ಚರಿಯಿಂದ ಗಮನಿಸುತ್ತಿದ್ದರು. ಕೊಚ್ಚಿ ಮೆಟ್ರೋ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವುದರಲ್ಲಿ ಕೂಡ ಶ್ರೀಧರನ್ ರ ಶ್ರಮವಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಹೆಸರು
ಇಂಥ ಕಾಯಕಯೋಗಿಯ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಕೇಳಿಬರುತ್ತಿದೆ. ಜೀವನದುದ್ದಕ್ಕೂ ಯೋಜನೆಗಳ ಜಾರಿ, ಅನುಷ್ಠಾನಗಳ ಸಾಕಾರಕ್ಕಾಗಿ ಶ್ರಮಿಸಿದ, ಶ್ರಮಿಸುತ್ತಿರುವ ಇಂಥ ವ್ಯಕ್ತಿ ಭಾರತಕ್ಕೆ ರಾಷ್ಟ್ರಪತಿ ಆಗಬಹುದಲ್ಲವೇ?!












Click it and Unblock the Notifications