ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕ: ಯಾರು ಈ ಕರಂಬೀರ್ ಸಿಂಗ್?
ನವದೆಹಲಿ, ಮೇ 31: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಕರಂಬೀರ್ ಸಿಂಗ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಸುಮಾರು ನಾಲ್ಕು ದಶಕ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಡ್ಮಿರಲ್ ಸುನಿಲ್ ಲಂಬಾ ಅವರು ಕರಂಬೀರ್ ಸಿಂಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
39 ವರ್ಷಗಳ ಸೇವೆ ಸಲ್ಲಿಸಿರುವ ಕರಂಬೀರ್, ನವದೆಹಲಿಯಲ್ಲಿರುವ ನೌಕಾ ಪಡೆ ಕೇಂದ್ರ ಕಚೇರಿಯಲ್ಲಿ ವೈಸ್ ಚೀಫ್ ಆಗಿದ್ದರು. ಕಳೆದ ವರ್ಷ ಅವರು ಪೂರ್ವ ನೌಕಾಪಡೆ ಕಮಾಂಡರ್ ಆಗಿ ವಿಶಾಖಪಟ್ಟಣಕ್ಕೆ ವರ್ಗಾವಣೆಯಾಗಿದ್ದರು.
ಶಕ್ತಿಯುತ, ಸಮರ್ಥ ಮತ್ತು ಸಾಗರತೀರದಲ್ಲಿ ಯಾವುದೇ ಭದ್ರತಾ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವಂತೆ ನೌಕಾಪಡೆಯನ್ನು ದೇಶಕ್ಕೆ ನೀಡುವುದು ತಮ್ಮ ಮೂಲ ಉದ್ದೇಶ ಎಂದು ಅವರು ಹೇಳಿದ್ದಾರೆ.
'ನೌಕಾ ಪಡೆಯ 24ನೇ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ಬಹುದೊಡ್ಡ ಗೌರವ ಮತ್ತು ಹೆಮ್ಮೆಯಾಗಿದೆ. ನನ್ನ ಪೂರ್ವಾಧಿಕಾರಿಗಳು ತಮ್ಮ ಪರಿಶ್ರಮದಿಂದ ನೌಕಾಪಡೆಗೆ ಅತ್ಯಂತ ಭದ್ರವಾದ ಬುನದಿ ಹಾಕಿದ್ದಾರೆ. ಈ ಮೂಲಕ ಅದನ್ನು ಹೊಸ ಉತ್ತುಂಗಕ್ಕೆ ಕೊಂಡಿಯ್ದಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಕರಂಬೀರ್ ಸಿಂಗ್ ಅವರು ಪಂಜಾಬ್ನ ಜಲಂಧರ್ನಲ್ಲಿ ಭಾರತೀಯ ವಾಯು ಪಡೆಯ ಅಧಿಕಾರಿಯೊಬ್ಬರ ಮಗನಾಗಿ ಜನಿಸಿದರು. ಕರಂಬೀರ್ ಅವರು ಅವರ ಕುಟುಂಬದಲ್ಲಿ ಎರಡನೆಯ ಪೀಳಿಗೆಯ ಸೇನಾಧಿಕಾರಿಯಾಗಿದ್ದಾರೆ.
ನಾಸಿಕ್ನ ಬೇರ್ನ್ಸ್ ಶಾಲೆಯಲ್ಲಿ ಓದಿದ ಅವರು, ಪುಣೆಯಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿಕೊಂಡು, ಹಂಟರ್ ಸ್ಕ್ವಾಡ್ರನ್ನಲ್ಲಿದ್ದರು.
ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್ನಲ್ಲಿ ಹಾಗೂ ಮುಂಬೈನ ಕಾಲೇಜ್ ಆಫ್ ನಾವೆಲ್ ವೆಲ್ಫೇರ್ನಲ್ಲಿ ಅಧ್ಯಯನ ಮಾಡಿದ ಅವರು, 1980ರ ಜುಲೈನಲ್ಲಿ ನೌಕಾಪಡೆ ಸೇರಿಕೊಂಡಿದ್ದರು.
|
ಅನೇಕ ಪ್ರಶಸ್ತಿ ಗೌರವ
ಕರಂಬೀರ್ ಸಿಂಗ್ ಅವರು ಅತ್ಯಂತ ಗೌರವಾನ್ವಿತ ಅಡ್ಮಿರಲ್ಗಳಲ್ಲಿ ಒಬ್ಬರು. ಪರಮ್ ವಸಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಆಪರೇಷನ್ ವಿಜಯ್ ಪದಕ ಮತ್ತು ಆಪರೇಷನ್ ಪರಾಕ್ರಮ ಪದಕ ಸೇರಿದಂತೆ ಅನೇಕ ಪ್ರಮುಖ ಗೌರವಗಳಿಗೆ ಪಾತ್ರರಾಗಿದ್ದಾರೆ.

ಫ್ಲ್ಯಾಗ್ ಆಫೀಸರ್ ಆಗಿ ಸೇವೆ
ಅಂಡಮಾನ್ ನಿಕೋಬಾರ್ ದ್ವೀಪದ ಯುನಿಫೈಡ್ ಕಮಾಂಡ್ನ ಸಿಬ್ಬಂದಿ ಮುಖ್ಯಸ್ಥರಾಗಿ, ಮಹಾರಾಷ್ಟ್ರ ಹಾಗೂ ಗುಜರಾತ್ ನೌಕಾಪಡೆ ಪ್ರದೇಶಗಳ ಫ್ಲಾಗ್ ಆಫೀಸರ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಹೆಲಿಕಾಪ್ಟರ್ ಪೈಲಟ್
ನೌಕಾ ಪಡೆಯ 'ಗ್ರೇ ಈಗಲ್' (ಅತಿ ಹೆಚ್ಚು ಸೇವೆ ಸಲ್ಲಿಸಿರುವ ನೌಕಾಧಿಕಾರಿ) ನೌಕಾಪಡೆ ಮುಖ್ಯಸ್ಥರಾದ ಮೊದಲ ಹೆಲಿಕಾಪ್ಟರ್ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಹೆಲಿಕಾಪ್ಟರ್ ಪೈಲಟ್ ಆಗಿ ಅವರು ಚೇತಕ್ ಹಾಗೂ ಕಾಮೋವ್ಗಳನ್ನು ಚಲಾಯಿಸಿದ್ದಾರೆ.

ನೇಮಕ ಪ್ರಶ್ನಿಸಿದ ವೈಸ್ ಅಡ್ಮಿರಲ್
ಹಿರಿತನದ ಬದಲು ಅರ್ಹತೆ ಆಧಾರದಲ್ಲಿ ಕರಂಬೀರ್ ಅವರನ್ನು ನೌಕಾಪಡೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದನ್ನು ಪ್ರಶ್ನಿಸಿ ಪ್ರಸ್ತುತ ಅಂಡಮಾನ್ ದ್ವೀಪಗಳ ಟ್ರೈ ಸರ್ವಿಸ್ ಕಮಾಂಡರ್ ಆಗಿರುವ ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಅವರು ಸಶಸ್ತ್ರ ಸೇನಾಪಡೆಗಳ ನ್ಯಾಯಮಂಡಳಿ ಮೊರೆ ಹೋಗಿದ್ದಾರೆ. ಅವರ ಪ್ರಕರಣವನ್ನು ವಿಚಾರಣೆ ಒಪ್ಪಿಕೊಂಡಿರುವ ನ್ಯಾಯಮಂಡಳಿ, ಕರಂಬೀರ್ ಅವರು ಅಧಿಕಾರ ಸ್ವೀಕರಿಸಲು ಅನುಮತಿ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 17ರಂದು ನಡೆಯಲಿದ್ದು, ಹಿರಿತನದ ಬದಲು ಕರಂಬೀರ್ ಅವರನ್ನು ಆಯ್ಕೆ ಮಾಡಿದ್ದು ಏಕೆ ಎಂದು ಸರ್ಕಾರ ದಾಖಲೆಯೊಂದಿಗೆ ವಿವರಣೆ ನೀಡಲಿದೆ.












Click it and Unblock the Notifications