ತೆಲಂಗಾಣ ಮೂಲದ ನಾಗೇಶ್ವರ್ ಈಗ ಸಿಬಿಐ ಹಂಗಾಮಿ ನಿರ್ದೇಶಕ
ನವದೆಹಲಿ, ಅಕ್ಟೋಬರ್ 24: ತೆಲಂಗಾಣ ರಾಜ್ಯದ ವಾರಂಗಲ್ ಮೂಲದ ಎಂ ನಾಗೇಶ್ವರ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ ಮಾಡಿ ನಿನ್ನೆ ಮಧ್ಯರಾತ್ರಿ ನಂತರ ಮೋದಿ ಸರ್ಕಾರವು ಆದೇಶ ಹೊರಡಿಸಿದೆ.
ಸಿಬಿಐನ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ವರ್ ರಾವ್ ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳುವಂತೆ ಪ್ರಧಾನಿ ಮೋದಿ ನೀಡಿರುವ ಆದೇಶದಲ್ಲಿ ಹೇಳಲಾಗಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ನಡುವಿನ ಆಂತರಿಕ ಯುದ್ಧಕ್ಕೆ ತಾತ್ವಿಕ ಅಂತ್ಯ ಹಾಡಲು ಪ್ರಧಾನಿ ಸಚಿವಾಲಯ ಮುಂದಾಗಿದ್ದು, ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿರುವ ಗುಜರಾತ್ ಕೇಡರ್ ನ ಅಧಿಕಾರಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರ ಎಲ್ಲಾ ಅಧಿಕಾರಗಳನ್ನು ಮೊಟುಕುಗೊಳಿಸಿ, ರಜೆ ಮೇಲೆ ಕಳಿಸಲಾಗಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೂ ಅದೇ ಸೂಚನೆ ಸಿಕ್ಕಿದೆ. ರಾಕೇಶ್ ಅಸ್ಥಾನ ತಂಡದಲ್ಲಿದ್ದ ಅನೇಕ ಅಧಿಕಾರಿಗಳಿಗೆ ಅಂಡಮಾನ್ ಸೇರಿದಂತೆ ವಿವಿಧೆಡೆ ವರ್ಗಾವಣೆ ಮಾಡಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಲ್ಲಿಸಿರುವ ಪ್ರಕರಣ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಕೇಶ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಮುಂದಿನ ವಿಚಾರಣೆ(ಅಕ್ಟೋಬರ್ 247) ತನಕ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಮನ್ನೆಂ ನಾಗೇಶ್ವರ್ ಪರಿಚಯ
ಮನ್ನೆಂ ನಾಗೇಶ್ವರ್ ರಾವ್ ಅವರು ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಬೊರೆನರಸಾಪುರ ಗ್ರಾಮದವರು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಐಐಟಿ ಮದ್ರಾಸ್ ನಲ್ಲಿ ಸಂಶೋಧಕರಾಗಿದ್ದರು.
1986ರ ಐಪಿಎಸ್ ಬ್ಯಾಚಿನ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಒಡಿಶಾದ ರೈಲ್ವೆ ಇಲಾಖೆಯ ಹೆಚ್ಚುವರಿ ಪೊಲೀಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಸಿಬಿಐನಲ್ಲಿ ಜಂಟಿ ನಿರ್ದೇಶಕ ಹುದ್ದೆಗೇರಿದರು. ಈಗ ಸಿಬಿಐನ ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಬಂಧನ ಭೀತಿಯಲ್ಲಿರುವ ರಾಕೇಶ್ ಅಸ್ಥಾನ
ಭ್ರಷ್ಟಾಚಾರ ಆರೋಪ ಹೊತ್ತುಕೊಂಡಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರು ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೊಕ್ಕಿದ್ದರು. ಮಂಗಳವಾರದಂದು ಸಿಬಿಐ ನಂ.2ಗೆ ಮಂಗಳವಾರದಂದು ಮಿಶ್ರಫಲ ಸಿಕ್ಕಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಲ್ಲಿಸಿರುವ ಪ್ರಕರಣ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಕೇಶ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಮುಂದಿನ ವಿಚಾರಣೆ ತನಕ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಯಾವ ಯಾವ ಹೈ ಪ್ರೊಫೈಲ್ ಕೇಸುಗಳಿವೆ
ಗುಜರಾತ್ ಕೆಡರ್ ಐಪಿಎಸ್ ಅಧಿಕಾರಿಯಾಗಿರುವ ಅಸ್ಥಾನ ಹಾಗೂ ತಂಡವು, ಆಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಹಾಗೂ ವಿಜಯ್ ಮಲ್ಯ ವಿರುದ್ಧದ ವಂಚನೆ ಪ್ರಕರಣ, ರಾಬರ್ಟ್ ವದ್ರಾ ಭೂ ಹಗರಣ, ದಯಾನಿಧಿ ಮಾರನ್, ಪಿ ಚಿದಂಬರಂ ಆಕ್ರಮ ಅಸ್ತಿ, ಹರ್ಯಾಣ ಸಿಎಂ ಭೂಪಿಂದರ್ ಹೂಡಾ ಭೂ ಹಗರಣ ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.
ಈಗ ಈ ಕೇಸುಗಳು ಹಂಗಾಮಿ ನಿರ್ದೇಶಕ ನಾಗೇಶ್ವರ್ ರಾವ್ ಅವರ ಕೈಗೆ ಬರಲಿದೆ. ಆದರೆ, ಅಧಿಕಾರ ಮಿತಿಯಲ್ಲಿ ಹೈ ಫ್ರೊಫೈಲ್ ಕೇಸುಗಳು ತ್ವರಿತಗತಿಯಲ್ಲಿ ತನಿಖೆ ನಡೆಸುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ, ಆಂತರಿಕ ಯುದ್ಧದಿಂದ ತನಿಖಾ ಸಂಸ್ಥೆಯ ಚುರುಕುತನಕ್ಕೆ ತಕ್ಕಮಟ್ಟಿನ ಹಿನ್ನಡೆ ಖಂಡಿತಾ ಆಗಿದೆ ಎನ್ನಬಹುದು.

ನಾಗೇಶ್ವರ್ ರಾವ್ ವಿಶೇಷ ತನಿಖಾ ಸಾಮರ್ಥ್ಯ
ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆ ಮಾಡಿರುವ ನಾಗೇಶ್ವರ್ ರಾವ್ ಅವರು ಒಡಿಶಾ, ಪಶ್ಚಿಮ ಬಂಗಾಲದ ಸೆಲೆಬ್ರಿಟಿಗಳ ನಿದ್ದೆಗೆಡಿಸಿದ ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆ ನಡೆಸಿದವರು.
ಒಡಿಶಾದಲ್ಲಿ 1996ರಲ್ಲೇ ಮೊಟ್ಟಮೊದಲ ಬಾರಿಗೆ ಡಿಎನ್ಎ ಬೆರಳಚ್ಚು ತಂತ್ರಜ್ಞಾನವನ್ನು ಬಳಸಿ ಜಗತ್ ಸಿಂಗ್ ಪುರ್ ಜಿಲ್ಲೆ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ್ದರು.
ಮಣಿಪುರದಲ್ಲಿ ಸಿ ಆರ್ ಪಿಎಫ್ ಡಿ ಐಜಿ, ಐಜಿಪಿ, ಆಗಿ ನಕ್ಸಲ್ ವಿರುದ್ಧ 2008ರ ಕಾರ್ಯಾಚರಣೆ ನಡೆಸಿದ್ದರು. ಕಂದಾಮಾಲ್ ನಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಂಡರು.












Click it and Unblock the Notifications