ಉತ್ತರಾಖಂಡ; ಎಎಪಿ ಘೋಷಿಸಿದ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

ಡೆಹ್ರಾಡೂನ್, ಆಗಸ್ಟ್ 17; ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿವೆ.

ಮಂಗಳವಾರ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ನಿವೃತ್ತ ಸೇನಾಧಿಕಾರಿ ಅಜಯ್ ಕೊತಿಯಾಲ್ ಅವರನ್ನು ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ" ಎಂದು ಘೋಷಣೆ ಮಾಡಿದರು.

"ಉತ್ತರಾಖಂಡ ರಾಜ್ಯದ ಜನರು ರಾಜಕಾರಣಿಗಳ ಆಡಳಿತದಿಂದ ಬೇಸರಗೊಂಡಿದ್ದಾರೆ. ಹಾಗಾಗಿ ಜನರ ಸಲಹೆಯಂತೆ ಅಜಯ್ ಕೊತಿಯಾಲ್ ಆಯ್ಕೆ ಮಾಡಿದ್ದೇವೆ. ತನ್ನ ಬೊಕ್ಕಸವನ್ನು ತುಂಬಿಸದೇ ಜನರ ಸೇವೆ ಮಾಡುವ ಸೇನಾಧಿಕಾರಿಯನ್ನು ಮುಖ್ಯಮಂತ್ರಿಯಾಗಿ ನೋಡಲು ಜನರು ಇಚ್ಚಿಸಿದ್ದಾರೆ" ಎಂದು ಹೇಳಿದರು.

 Who Is Ajay Kothiyal AAP Chief Minister Candidate For Uttarakhand

ಅಜಯ್ ಕೊತಿಯಾಲ್ ಯಾರು?; ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಕರ್ನಲ್ ಅಜಯ್ ಕೊತಿಯಾಲ್ ಉತ್ತರಕಾಶಿಯಲ್ಲಿರುವ ನೆಹರೂ ಪರ್ವತಾರೋಹಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು. ಈ ವರ್ಷದ ಏಪ್ರಿಲ್‌ನಲ್ಲಿ ಅವರು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

2013ರಲ್ಲಿನ ಭೀಕರ ಪ್ರವಾಹದ ಬಳಿಕ ಕೇದಾರನಾಥ್ ಮರು ನಿರ್ಮಾಣದಲ್ಲಿ ಅಜಯ್ ಕೊತಿಯಾಲ್ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಅವರನ್ನು 2022ರ ಉತ್ತರಾಖಂಡ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿಯಾಗಿದ್ದ ತೀರ್ಥಸಿಂಗ್ ಗಂಗೋತ್ರಿ ವಿಧಾನಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರ ಎದುರಾಳಿಯಾಗಿ ಅಜಯ್ ಕೊತಿಯಾಲ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ ಕೋವಿಡ್ ಕಾರಣದಿಂದಾಗಿ ಚುನಾವಣಾ ಆಯೋಗ ಇನ್ನೂ ಉಪ ಚುನಾವಣೆ ಘೋಷಣ ಮಾಡಿಲ್ಲ ಮತ್ತು ತೀರ್ಥಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆಯಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಅಜಯ್ ಕೊತಿಯಾಲ್ ಸಮರ್ಥ ಅಭ್ಯರ್ಥಿ. ಅವರು ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಜೊತೆಗೆ ಸೇನೆಗೆ ಯುವಕರನ್ನು ಸೇರಿಸಲು ತರಬೇತಿ ಶಿಬಿರವನ್ನು ಅವರು ನಡೆಸುತ್ತಾರೆ. ಅವರ ಸಮಾಜಮುಖಿ ಕಾರ್ಯಗಳು ಸಾಕಷ್ಟಿವೆ ಎಂದು ರಾಜ್ಯದ ಎಎಪಿ ನಾಯಕರು ಹೇಳಿದ್ದಾರೆ.

ಎಎಪಿ ಸೇರುವ ಮೊದಲು ಫೇಸ್‌ಬುಕ್‌ನಲ್ಲಿ ಅಜಯ್ ಕೊತಿಯಾಲ್ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದರು. ಉತ್ತರಾಖಂಡದ ಯುವಕರು ನನ್ನ ಬಳಿ ಮಾತನಾಡಿದ್ದು, ರಾಜ್ಯ ನಿಮ್ಮಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ ಎಂದು ಪೋಸ್ಟ್ ಹಾಕಿದ್ದರು.

ಅಜಯ್ ಕೊತಿಯಾಲ್ ಸೇನೆಗೆ ಯುವಕರು ಸೇರಲು ತರಬೇತಿ ನೀಡುತ್ತಾರೆ. 2013ರಲ್ಲಿ ಅವರು 30 ಯುವಕರಿಗೆ ತರಬೇತಿ ನೀಡಿದ್ದು, ಅದರಲ್ಲಿ 28 ಜನರು ಭಾರತೀಯ ಸೇನೆಯ ಗೆರಿಲ್ಲಾ ಪಡೆಗೆ ಆಯ್ಕೆಗೊಂಡಿದ್ದಾರೆ.

2015ರಲ್ಲಿ ಅಜಯ್ ಕೊತಿಯಾಲ್ ಲಾಭದಾಯಕವಲ್ಲದ ಟ್ರಸ್ಟ್ ರಚನೆ ಮಾಡಿದ್ದಾರೆ. ಯೂತ್ ಫೌಂಡೇಷನ್ ಹೆಸರಿನ ಟ್ರಸ್ಟ್ ಉತ್ತರಾಖಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6 ತರಬೇತಿ ಶಿಬಿರಗಳನ್ನು ನಡೆಸುತ್ತಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್, "ಅಜಯ್ ಕೊತಿಯಾಲ್ ನೇತೃತ್ವದಲ್ಲಿ ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಜಾಗತಿಕ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುತ್ತೇವೆ. ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.

ಉತ್ತರಾಖಂಡ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಮುಖ್ಯಮಂತ್ರಿಗಳ ಬದಲಾವಣೆ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕ ಸುದ್ದಿಯಲ್ಲಿದೆ. ಮಾರ್ಚ್ 10ರಂದು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದ ತೀರ್ಥಸಿಂಗ್ ರಾವತ್ 4 ತಿಂಗಳಿನಲ್ಲಿಯೇ ರಾಜೀನಾಮೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಬಳಿಕ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎರಡು ಬಾರಿ ಶಾಸಕರಾಗಿ ಖತಿಮಾ ಕ್ಷೇತ್ರದಿಂದ ಆಯ್ಕೆಯಾದ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+