ಇಲ್ಲಿದೆ ಕೊರೊನಾ: ಮಹಾನಗರಗಳಲ್ಲಿ ಹೋಳಿ ಆಚರಣೆಗೆ ನಿರ್ಬಂಧ!
ನವದೆಹಲಿ, ಮಾರ್ಚ್ 24: ಕೊರೊನಾವೈರಸ್ 2ನೇ ಅಲೆಯ ಹರಡುವಿಕೆ ಭೀತಿ ಹೆಚ್ಚಾಗುತ್ತಿದೆ. ದೇಶದ ಮಹಾನಗರಗಳ ವ್ಯಾಪ್ತಿಯಲ್ಲೇ ಅತ್ಯಧಿಕ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ತೀವ್ರ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಚ್ 28 ಮತ್ತು 29ರಂದು ನಡೆಯು ಹೋಳಿ ಹಬ್ಬಕ್ಕೆ ಹಲವು ರಾಜ್ಯಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ನವದೆಹಲಿ, ಮಹಾರಾಷ್ಟ್ರದ ಮುಂಬೈನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪ್ರದೇಶಗಳಲ್ಲಿ ಬಣ್ಣದ ಆಟಕ್ಕೆ ನಿರ್ಬಂಧಿಸಲಾಗಿದೆ.
ಮಹಾರಾಷ್ಟ್ರದ ಮುಂಬೈ ಮಹಾನಗರದಲ್ಲಿ ಕಳೆದ 24 ಗಂಟೆಗಳಲ್ಲೇ 3512 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಖಾಸಗಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಹೋಳಿ ಹಬ್ಬ ಆಚರಿಸುವಂತಿಲ್ಲ ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶಿಸಿದೆ.

ಹೋಳಿ ಹಬ್ಬ ಮತ್ತು ನವರಾತ್ರಿ ಆಚರಣೆಗೆ ನಿರ್ಬಂಧ
ನವದೆಹಲಿಯಲ್ಲೂ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಎನ್ ಸಿಟಿ ಮತ್ತು ನವದೆಹಲಿಯಲ್ಲಿ ಮುಂಬರುವ ಹೋಳಿ ಹಬ್ಬ, ನವರಾತ್ರಿ ಆಚರಣೆಗಳ ಹಿನ್ನೆಲೆ ಸಾರ್ವಜನಿಕರು ಒಟ್ಟಾಗಿ ಸೇರುವಂತಿಲ್ಲ. ಕೊವಿಡ್-19 ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಕೊರೊನಾವೈರಸ್ ನಿಯಮಗಳು ಪಾಲನೆ ಆಗುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ.

ಹೋಳಿ ಆಚರಣೆಗೆ ಉತ್ತರ ಪ್ರದೇಶದಲ್ಲಿ ಮಾರ್ಗಸೂಚಿ
ಉತ್ತರ ಪ್ರದೇಶ ಸರ್ಕಾರವು ಹೋಳಿ ಹಬ್ಬ ಆಚರಣೆಗೂ ಮೊದಲೇ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಚ್ 28 ಮತ್ತು 29ರಂದು ನಡೆಯುವ ಹೋಳಿ ಹಬ್ಬದ ದಿನ ಸಾರ್ವಜನಿಕ ಸ್ಥಳಗಳಿಂದ ಹಿರಿಯರು, ಅನಾರೋಗ್ಯ ಪೀಡಿತರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಅಂತರ ಕಾಯ್ದುಕೊಳ್ಳಬೇಕು. ಹೋಳಿ ಹಬ್ಬದ ಆಚರಣೆಯಿಂದ ದೂರ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಹೋಳಿ ಹಬ್ಬಕ್ಕಾಗಿ 7 ದಿನ ಶಾಲೆಗಳಿಗೆ ರಜೆ
ಉತ್ತರ ಪ್ರದಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಹೋಳಿ ಹಬ್ಬದಿಂದ ಮಕ್ಕಳನ್ನು ದೂರ ಇರಿಸುವಂತೆ ಸೂಚಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನಿರ್ಬಂಧ ವಿಧಿಸಲಾಗಿದೆ. ಇನ್ನೊಂದು ಕಡೆ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 7 ದಿನಗಳವರೆಗೂ ರಜೆ ಘೋಷಿಸಲಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆಯನ್ನು ಪುನಾರಂಭಿಸಲಾಗಿದೆ.

ದೇಶದಲ್ಲಿ ಆತಂಕ ಹೆಚ್ಚಿಸಿದ ಕೊವಿಡ್-19 ಸೋಂಕು
ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯು ಹೊಸ ಆತಂಕ ಸೃಷ್ಟಿಸುತ್ತಿದೆ. ಕಳೆದ 24 ಗಂಟೆಗಳಲ್ಲೇ 47262 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ 23,907 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಂದೇ ದಿನ 275 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು 1,17,34,058 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈವರೆಗೂ 1,12,05,160 ಸೋಂಕಿತರು ಗುಣಮುಖರಾಗಿದ್ದು, ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,60,441ಕ್ಕೆ ಏರಿಕೆಯಾಗಿದೆ. ಉಳಿದಂತೆ 3,68,457 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications