ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿ ಮುಗ್ಗರಿಸಿ ಬಿದ್ದ ವಿಪಕ್ಷಗಳು?
ಮುಂಬೈ: 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ರಣಕಹಳೆ ಮೊಳಗಿಸಿದ್ದವು. ಆದರೆ ಹೀಗೆ ತೊಡೆತಟ್ಟಿದ ಒಂದೆರಡು ವಾರದಲ್ಲೇ ವಿಪಕ್ಷಗಳ ಒಳಗೆ ನಡುಕ ಶುರುವಾಗಿಬಿಟ್ಟಿದೆ. ಅದ್ರಲ್ಲೂ ಎನ್ಸಿಪಿ ಇಬ್ಭಾಗವಾಗುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ, ಹೊಸ ರಾಜಕೀಯ ಲೆಕ್ಕಾಚಾರ ಕೂಡ ಶುರುವಾಗಿದೆ.
ಬಿಹಾರ ರಾಜಧಾನಿಯಲ್ಲಿ ಸಭೆ ಸೇರಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ತೊಡೆತಟ್ಟಿದ್ದರು ವಿಪಕ್ಷಗಳ ನಾಯಕರು. ಆದರೆ ಹೀಗೆ ಸಭೆ ನಡೆಸಿ ಒಂದೆರಡು ವಾರದಲ್ಲೇ ಮಹಾರಾಷ್ಟ್ರ ರಾಜಕೀಯ ಅಲ್ಲಾಡಿ ಹೋಗಿದೆ. ಎನ್ಸಿಪಿ ಆಂತರಿಕ ಬಿಕ್ಕಟ್ಟು ಸ್ಫೋಟವಾಗಿ, ಶರದ್ ಪವಾರ್ ಪಕ್ಷ ಪೀಸ್ ಪೀಸ್ ಆಗುವ ಮುನ್ಸೂಚನೆ ಸಿಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ವಿರೋಧ ಪಕ್ಷಗಳ ನಾಯಕರ ನಡುವೆ ನಡುಕ ಶುರುವಾಗಿದೆ. ಈ ಭಿನ್ನಮತ ಮಹರಾಷ್ಟ್ರಕ್ಕೆ ಸೀಮಿತವಾಗಿ ಇರುತ್ತಾ? ಅಥವಾ ಈ ಜಗಳ ಮುಂದೆ ವಿರೋಧ ಪಕ್ಷಗಳನ್ನೇ ಅಲ್ಲಾಡಿಸುತ್ತಾ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಹಾಗಾದರೆ ಈಗ ವಿರೋಧ ಪಕ್ಷಗಳ ನಾಯಕರ ಮುಂದಿನ ನಡೆ ಏನಾಗಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಲೋಕಸಭೆಗೆ ಮುನ್ನ ದೊಡ್ಡ ಹೊಡೆತ?
ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಒನ್ಲೈನ್ ಅಜೆಂಡಾ. ಮಹಾರಾಷ್ಟ್ರದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಪಕ್ಷವೇ ಆಗಲಿ ಒಬ್ಬರೇ ನಿಂತು ಹೋರಾಡುವುದು ಕಷ್ಟಕಷ್ಟ ಎನ್ನಬಹುದು.
ಮುಂದಿನ ಪರಿಸ್ಥಿತಿ ಏನಾಗಬಹುದು?
ಒಬ್ಬರೇ ಚುನಾವಣೆ ಎದುರಿಸಲು ಆಗದು ಎಂಬ ಕಾರಣಕ್ಕೆ ಬಿಜೆಪಿ ಪಕ್ಷ ಶಿವಸೇನೆ ಜೊತೆ ಮತ್ತು ಕಾಂಗ್ರೆಸ್ ನಾಯಕರು ಎನ್ಸಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೇ ಎನ್ಸಿಪಿ ಪೀಸ್ ಪೀಸ್ ಆಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಲೋಕಸಭೆ ಚುನಾವಣೆಗೆ ಮುನ್ನ ದೊಡ್ಡ ಹೊಡೆತವೂ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸಭೆ ನಡೆಸಿ, ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನ ಬಿಹಾರ ಸಿಎಂ ಮಾಡುತ್ತಿದ್ದರು. ಆದರೆ ಎನ್ಸಿಪಿ ಪಕ್ಷದ ಬೆಳವಣಿಗೆ ವಿರೋಧ ಪಕ್ಷಗಳ ಒಗ್ಗಟ್ಟಿಗೇ ಆಘಾತ ನೀಡಿದೆ. ಮುಂದೆ ಏನು ಮಾಡುವುದು? ಎಂಬ ಚಿಂತೆಯಲ್ಲಿ ವಿಪಕ್ಷಗಳು ಮುಳುಗುವಂತೆ ಮಾಡಿದೆ.
ಡೋಂಟ್ ಕೇರ್ ಅಂತಿದ್ದಾರೆ ಶರದ್!
ಅಜಿತ್ ಪವಾರ್ ಎನ್ಸಿಪಿ ಬಿಟ್ಟ ಬಗ್ಗೆ ಗರಂ ಆಗಿರುವ ಶರದ್ ಪವಾರ್, ಅಜಿತ್ ಪವಾರ್ ಹೀಗೇಕೆ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದ್ರೆ ಇಂತಹ ಬೆಳವಣಿಗೆ ನನಗೆ ಹೊಸದಲ್ಲ. ಎಲ್ಲವನ್ನೂ ನಿಭಾಯಿಸಿ ಪಕ್ಷ ಮುನ್ನೆಡೆಸಿದ್ದೇನೆ. ಪ್ರಧಾನಿ ಇತ್ತೀಚೆಗೆ ಎನ್ಸಿಪಿ ಅನೇಕ ಹಗರಣ ಮಾಡಿದೆ ಎಂದು ಆರೋಪ ಮಾಡಿದ್ದರು. ಈ ಮಧ್ಯೆ ನಮ್ಮ ಪಕ್ಷದವರೇ ಈಗ ಅವರ ಜೊತೆ ಸೇರಿದ್ದು, ಪಿಎಂ ಮೋದಿ ಆರೋಪಗಳು ಸುಳ್ಳು ಎಂಬುದು ಸಾಬೀತಾಗಿದೆ. ಜುಲೈ 6ಕ್ಕೆ ಪಕ್ಷದ ಸಭೆ ಕೂಡ ನಾನು ಕರೆಯಲಿದ್ದೇನೆ ಎಂದಿದ್ದಾರೆ ಶರದ್ ಪವಾರ್. ಹಾಗೇ ಇದರ ಜೊತೆಗೆ ನಮ್ಮ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಯಾರು ಏನೇ ಹೇಳಿದ್ರೂ ಎನ್ಸಿಪಿ ಪಕ್ಷದೊಳಗಿನ ಬೆಳವಣಿಗೆ 2024ರ ಲೋಕಸಭೆ ಚುನವಣೆಗೆ ದೊಡ್ಡ ಹಿನ್ನಡೆ ತರುವುದು ಪಕ್ಕಾ. ಅದರಲ್ಲೂ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಒಗ್ಗೂಡಿ, ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ಕೆಲವೇ ದಿನದಲ್ಲಿ ಇಂತಹ ಬೆಳವಣಿಗೆ ನಡೆದಿದೆ. ಹೀಗೆ ಬಿಜೆಪಿ ಪಕ್ಷದ ಕೇಂದ್ರ ನಾಯಕರು ವಿಪಕ್ಷಗಳ ಒಗ್ಗಟ್ಟಿಗೆ ಶಾಕ್ ಕೊಟ್ಟಂತೆ ಕಾಣುತ್ತಿದೆ. ಜೊತೆಗೆ ಎನ್ಸಿಪಿ ಕೂಡ ಶಿವಸೇನೆ ರೀತಿ ಇಬ್ಭಾಗವಾಗಿದ್ದೇ ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಗೆಲುವಿಗಾಗಿ ಪರದಾಡವುದು ಪಕ್ಕಾ.












Click it and Unblock the Notifications