Gyanvapi Mosque case: ವಾರಣಾಸಿಯ ಜ್ಞಾನವಾಪಿ ಮಸೀದಿ ವ್ಯಾಜ್ಯದ ಸುತ್ತಮುತ್ತ, ಏನು ಎತ್ತ?
ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಆರಂಭಿಸುವ ಸಿದ್ದತೆಯಲ್ಲಿದ್ದ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ (ಜುಲೈ 24) ನೀಡಿದೆ. ಸಮೀಕ್ಷೆಗೆ ತಡೆ ನೀಡುವಂತೆ ಮಸೀದಿಯ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಜುಲೈ 26 ರವರೆಗೆ ತಡೆಹಿಡಿದಿದೆ.
ಮಧ್ಯಂತರ ತಡೆಯಾಜ್ಞೆಯ ಅವಧಿ ಮುಗಿಯುವ ಮುನ್ನ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಅಲಹಾಬಾದ್ ಹೈಕೋರ್ಟ್ಗೆ ಹೋಗುವಂತೆ ಸುಪ್ರೀಂ ಕೋರ್ಟ್ ಮಸೀದಿ ಆಡಳಿತ ಮಂಡಳಿಗೆ ಸೂಚಿಸಿದೆ. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್, ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಎನ್ನುವುದು ವಾದ.

ದಶಕಗಳಷ್ಟು ಹಳೆಯದಾದ ಈ ವ್ಯಾಜ್ಯವು ಕಳೆದ ವರ್ಷ, ಐದು ಹಿಂದೂ ಮಹಿಳೆಯರು ಮಸೀದಿ ಸಂಕೀರ್ಣದ ಹೊರಾಂಗಣದಲ್ಲಿರುವ ಮಾ ಶೃಂಗಾರಗೌರಿಯನ್ನು ಪೂಜಿಸಲು ಅವಕಾಶ ನೀಡಬೇಕೆಂದು ಕೋರ್ಟ್ ಮೆಟ್ಟಲೇರಿದ್ದರು. ಅಂದಿನಿಂದ ಈ ವ್ಯಾಜ್ಯದ ವಿಲೇವಾರಿ ಜಿಲ್ಲಾ ಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಸುತ್ತಿ ಮತ್ತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದಿತ್ತು.
ವಾರಣಾಸಿ ನ್ಯಾಯಾಲಯದ ಆದೇಶವೇನು?
ಜುಲೈ 21 ರಂದು, ವಾರಣಾಸಿ ನ್ಯಾಯಾಲಯವು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಸೀದಿ ಆವರಣದ ವೈಜ್ಞಾನಿಕ ತನಿಖೆ / ಸಮೀಕ್ಷೆ / ಉತ್ಖನನ ನಡೆಸುವಂತೆ ಸೂಚಿಸಿತ್ತು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಜಯ ಕೃಷ್ಣ ವಿಶ್ವೇಶ ಅವರು, ಮಸೀದಿಯ ಮೂರು ಗುಮ್ಮಟಗಳ ಕೆಳಗಡೆ ರಾಡಾರ್ ಮೂಲಕ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಿತ್ತು. ಜೊತೆಗೆ, ಅಗತ್ಯ ಬಿದ್ದರೆ ಉತ್ಖನನವನ್ನೂ ನಡೆಸಬಹುದು ಎಂದು ಆದೇಶಿಸಿದ್ದರು.
ಸ್ಥಳೀಯ ವಾರಣಸಿ ನ್ಯಾಯಾಲಯವು, ಈಗಿನ ಮಸೀದಿ ರಚನೆಯು (mosque structure) ಪೂರ್ವದ ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ, ಜೊತೆಗೆ, ಸಮೀಕ್ಷೆ ಅಥವಾ ಉತ್ಖನನ ನಡೆಸುವ ವೇಳೆ ಸಿಗುವ ಎಲ್ಲಾ ವಸ್ತು/ಕಲಾಕೃತಿಗಳ ವೈಜ್ಞಾನಿಕ ತನಿಖೆ ನಡೆಸಿ ವರದಿ ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್, ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕರಿಗೆ ಸೂಚಿಸಿತ್ತು.

ಈ ವ್ಯಾಜ್ಯವನ್ನು ನ್ಯಾಯಾಲಯ ಹೇಗೆ ಕೈಗೆತ್ತಿಕೊಂಡಿತು?
ಜ್ಞಾನವಾಪಿ ಮಸೀದಿ ಆವರಣದಲ್ಲಿನ ಮಾ ಶೃಂಗಾರ್ ಗೌರಿಯ ಪೂಜೆಗೆ ಅವಕಾಶ ನೀಡಬೇಕೆಂದು ಐವರು ಹಿಂದೂ ಮಹಿಳೆಯರು ಮನವಿಯನ್ನು ವಾರಣಾಸಿ ಕೋರ್ಟಿಗೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕೋರ್ಟ್ ಸಮೀಕ್ಷೆ ನಡೆಸುವಂತೆ ಜುಲೈ 21ರಂದು ಆದೇಶ ನೀಡಿತ್ತು.
ಆದರೆ, ಕಳೆದ ವರ್ಷ ಸುಪ್ರೀಂಕೋರ್ಟ್ ಆದೇಶದನ್ವಯ ವುಜುಖಾನಾ ಮತ್ತು ಮಸೀದಿಯ ಕೆಲವು ಪ್ರದೇಶದ ಸಮೀಕ್ಷೆ ನಡೆಸಬಾರದು ಎಂದು ಸ್ಥಳೀಯ ನ್ಯಾಯಾಲಯ ಸೂಚಿಸಿತ್ತು. ಕಳೆದ ವರ್ಷ ಮಸೀದಿ ಆವರಣದಲ್ಲಿ ಶಿವಲಿಂಗವನ್ನು ನಾವು ಗುರುತಿಸಿದ್ದೇವೆ ಎಂದು ಹಿಂದೂ ದಾವೆದಾರರು ಪ್ರತಿಪಾದಿಸಿದ್ದರು. ಅದು ಶಿವಲಿಂಗವಲ್ಲ, ಕಾರಂಜಿಯ ಒಂದು ಆಕೃತಿ ಅಷ್ಟೇ ಎಂದು ಮುಸ್ಲಿಂ ದಾವೆದಾರರು ವಾದಿಸಿದ್ದರು.
ಜಿಲ್ಲಾ ನ್ಯಾಯಾಲಯವು, ಸಮೀಕ್ಷೆಯ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೊಗ್ರಾಫ್ ಮಾಡಿ ಆಗಸ್ಟ್ 4ರೊಳಗೆ ವರದಿಯನ್ನು ಸಲ್ಲಿಸುವಂತೆ ಎಎಸ್ಐಗೆ ನಿರ್ದೇಶಿಸಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ ಈ ವರ್ಷ ಮೇ 16 ರಂದು ಸಮೀಕ್ಷೆಗಾಗಿ ಎಎಸ್ಐ ಮನವಿಯನ್ನು ಆಲಿಸಲು ನ್ಯಾಯಾಲಯವು ಸಮ್ಮತಿಸಿತ್ತು.
ಹೈಕೋರ್ಟ್ ಆದೇಶವೇನು?
ಹಿಂದಿನ ಸಮೀಕ್ಷೆಯ ವೇಳೆ ಕಂಡು ಬಂದಿದೆ ಎಂದು ಹೇಳಲಾದ ಶಿವಲಿಂಗದ ಇಂಗಾಲ ಸಮೀಕ್ಷೆ (carbon dating) ಸೇರಿದಂತೆ ವೈಜ್ಞಾನಿಕ ಸಮೀಕ್ಷೆ ಗೆ ಹೈಕೋರ್ಟ್ ಮೇ 16, 2023 ರಂದು ಆದೇಶ ನೀಡಿತ್ತು. ಅಕ್ಟೋಬರ್ 14, 2022 ರಂದು ಶಿವಲಿಂಗದ ಕಾರ್ಬನ್ ಡೇಟಿಂಗ್ಗಾಗಿ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ತಮ್ಮ ಮನವಿಯನ್ನು ತಿರಸ್ಕರಿಸಿದ ನಂತರ ಅರ್ಜಿದಾರರಾದ ಲಕ್ಷ್ಮಿ ದೇವಿ ಮತ್ತು ಇತರ ಮೂವರು ಹೈಕೋರ್ಟ್ಗೆ ಮೊರೆ ಹೋಗಿದ್ದರು. ಏನಿದು ಕಾರ್ಬನ್ ಡೇಟಿಂಗ್?
ವಾರಣಾಸಿಯ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ದಿವಾಕರ್, ಏಪ್ರಿಲ್ 8, 2022 ರಂದು ಐವರು ಮಹಿಳೆಯರ ಮನವಿನ್ವಯ ವೀಡಿಯೊಗ್ರಾಫಿಕ್ ಸಮೀಕ್ಷೆಯನ್ನು ನಡೆಸಲಾಯಿತು. ಮೂರು ದಿನಗಳ ಸಮೀಕ್ಷೆಯನ್ನು ನ್ಯಾಯಾಲಯವು ನೇಮಿಸಿದ ಅಡ್ವೊಕೇಟ್ ಕಮಿಷನರ್ಗಳು, ಎರಡೂ ಕಡೆಯ ವಕೀಲರು, ಎಲ್ಲಾ ಸಂಬಂಧಿತ ಪಕ್ಷಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು, ಈ ಪ್ರಕ್ರಿಯೆ ಮೇ 16, 2022 ರಂದು ಮುಕ್ತಾಯಗೊಂಡಿತ್ತು.
ಸುಪ್ರೀಂ ಕೋರ್ಟ್ ಚಿತ್ರಣವನ್ನು ಹೇಗೆ ಪ್ರವೇಶಿಸಿತು?
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿಯು ಈ ಪ್ರಕ್ರಿಯೆಯು ಮಸೀದಿಯ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಪ್ರಯತ್ನವಾಗಿದೆ ಎಂದು ವಾದಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು. ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ 1991ರ ಪ್ರಕಾರ, ಆಗಸ್ಟ್ 15, 1947ರಿಂದ ಅಸ್ತಿತ್ವದಲ್ಲಿರುವ ಕಾಯಿದೆಯನ್ವಯ ಉಲ್ಲಂಘನೆಯಾಗಲಿದೆ ಎಂದು ವಾದಿಸಿತ್ತು. ಈ ಕಾನೂನಿಗೆ ಈಗ ಇರುವ ಕೇವಲ ಒಂದು ಅಪವಾದವೆಂದರೆ ಅದು ರಾಮಜನ್ಮಭೂಮಿ - ಬಾಬರಿ ಮಸೀದಿ ಸಂಕೀರ್ಣ, ಅದು ಆ ಸಮಯದಲ್ಲಿ ನೆಲಸಮಗೊಂಡಿರಲಿಲ್ಲ ಎಂದು ಸಮಿತಿ ವಾದಿಸಿತ್ತು.
ಈ ಮೊಕದ್ದಮೆಯಲ್ಲಿರುವ ಸೂಕ್ಷ್ಮತೆಯನ್ನು ಆಧರಿಸಿ ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ , ಮೇ 20, 2022 ರಂದು ವರ್ಗಾಯಿಸಿತು. ಪ್ರಕರಣದ ಪ್ರಾಥಮಿಕ ಅಂಶಗಳನ್ನು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಿದ ನಂತರವೇ ಮಧ್ಯಪ್ರವೇಶಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿತ್ತು.
ವಿಚಾರಣೆಯ ವೇಳೆ ಮಸೀದಿ ಸಮಿತಿ ಪರ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ವಾರಣಾಸಿ ನ್ಯಾಯಾಲಯ ಆರಂಭಿಸಿರುವ ಪ್ರಕ್ರಿಯೆಯು 1991ರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ (ಈಗ ಸಿಜೆಐ), ಸೂರ್ಯ ಕಾಂತ್ ಮತ್ತು ಪಿ ಎಸ್ ನರಸಿಂಹ ಅವರ ಪೀಠ, "ಒಂದು ಸ್ಥಳದ ಧಾರ್ಮಿಕ ಸ್ವರೂಪದ ನಿರ್ಣಯವನ್ನು 1991ರ ಕಾಯಿದೆಯಿಂದ ನಿರ್ಬಂಧಿಸಲಾಗಿಲ್ಲ ಎಂದು ಹೇಳಿದ್ದರು.
ನವೆಂಬರ್ 2022 ರಲ್ಲಿ, ಸರ್ವೋಚ್ಚ ನ್ಯಾಯಾಲಯ ತನ್ನ ಮಧ್ಯಂತರ ನಿರ್ದೇಶನವನ್ನು ವಿಸ್ತರಿಸಿ, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಅದರ ರಕ್ಷಣೆ ಮತ್ತು ಮುಂದಿನ ಆದೇಶದವರೆಗೆ ಮುಸ್ಲಿಮರಿಗೆ ಪ್ರವೇಶ ಮತ್ತು ನಮಾಜ್ ಮಾಡುವ ಹಕ್ಕುಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ವಾರಣಾಸಿ ಜಿಲ್ಲಾಡಳಿತಕ್ಕೆ ಆದೇಶವನ್ನು ನೀಡಿತು.
ಈ ಪ್ರಕರಣದಲ್ಲಿ ಒಳಗೊಂಡಿರುವ ಸಮಸ್ಯೆಗಳೇನು?
ಈ ಪ್ರಕರಣ, ಮಾ ಶೃಂಗಾರ್ ಗೌರಿಯನ್ನು ಪೂಜಿಸುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಮೊಕದ್ದಮೆಯ ಸುತ್ತ ಸುತ್ತುತ್ತಿದೆ. ದೇವಸ್ಥಾನವಿರುವ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಕಡೆಯವರ ವಾದ. ವಕ್ಫ್ ಆವರಣದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಮುಸ್ಲಿಂ ಕಡೆಯವರ ವಾದ. ಮೇ 2022 ರಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಇದೆ ಎನ್ನುವ ವಾದದೊಂದಿಗೆ ವ್ಯಾಜ್ಯ ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿತು.
ಆದಾಗ್ಯೂ, ಧಾರ್ಮಿಕ ಸ್ಥಳಗಳ ಕಾಯಿದೆ 1991ರ ಪ್ರಕಾರ, ಮಸೀದಿ ಸಂಕೀರ್ಣದೊಳಗೆ ಇದೆ ಎನ್ನಲಾಗುತ್ತಿರುವ ಶಿವಲಿಂಗವನ್ನು ಪೂಜಿಸುವ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗುವುದನ್ನು ಹಿಂದೂಗಳ ಕಡೆಯಿಂದ ನಿರ್ಬಂಧಿಸುತ್ತದೆಯೇ ಎಂಬುದು ಕಾನೂನಿನ ಮುಖ್ಯ ಪ್ರಶ್ನೆ. ಕಾಯಿದೆಯ ಸೆಕ್ಷನ್ 4ರ ಪ್ರಕಾರ ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿರುವ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಆ ದಿನದಲ್ಲಿ ಹೇಗೆ ಇತ್ತೋ, ಅದೇ ರೀತಿ ಮುಂದುವರಿಯ ಬೇಕು.
ಈ ಪ್ರಕರಣದಲ್ಲಿನ ಅರ್ಜಿಯ ಪ್ರಕಾರ, ಸಮೀಕ್ಷೆ ಅಥವಾ ಉತ್ಖನನ ನಡೆಸಲು ಅನುಮತಿಯನ್ನು ನೀಡಿದರೆ, ಆರು ನೂರು ವರ್ಷಕ್ಕಿಂತಲೂ ಹಳೆಯದಾದ ಮಸೀದಿಯ ಸ್ವರೂಪವನ್ನು ಬದಲಾಯಿಸಿದಂತಾಗುತ್ತದೆ ಎನ್ನುವುದು ಮುಸ್ಲಿಂ ಕಡೆಯವರ ವಾದ. ಹಿಂದೂ ಪರ ಅರ್ಜಿದಾರರು 1993ರವರೆಗೆ, ಮಸೀದಿ ಸಂಕೀರ್ಣದೊಳಗೆ ಹಿಂದೂ ದೇವತೆಗಳಿಗೆ ನಿಯಮಿತ ಪೂಜೆಗಳನ್ನು ಮಾಡಲಾಗುತ್ತಿತ್ತು ಮತ್ತು 1993ರಿಂದ, ವರ್ಷಕ್ಕೊಮ್ಮೆ ನಿಗದಿ ಪಡಿಸಿದ ದಿನದಂದು ಪ್ರಾರ್ಥನೆ ನಡೆಸಲು ಅನುಮತಿ ಇತ್ತು ಎನ್ನುವುದು ಹಿಂದೂ ಪರ ವಕೀಲರ ವಾದ.
ಈ ಕಾಯಿದೆಯು ಅಯೋಧ್ಯೆ ಪ್ರದೇಶಕ್ಕೆ ಸೀಮಿತವಾದಂತೆ ವಿನಾಯಿತಿಯನ್ನು ಹೊಂದಿತ್ತು. ಕಾಯಿದೆಯ ಸೆಕ್ಷನ್ 5ರ ಪ್ರಕಾರ ಈ ಕಾಯಿದೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾವೆ, ಮೇಲ್ಮನವಿ, ವಿಚಾರಣೆಗೆ ಅನ್ವಯವಾಗಿರುವುದಿಲ್ಲ.
ಈ ಕಾಯಿದೆಯನ್ನು ಪ್ರಶ್ನಿಸಿ ಲಕ್ನೋ ಮೂಲದ ವಿಶ್ವಭದ್ರ ಪೂಜಾರಿ ಪುರೋಹಿತ್ ಮಹಾಸಂಘ ಮತ್ತು ಸನಾತನ ವೈದಿಕ ಧರ್ಮದ ಅನುಯಾಯಿಗಳು ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಎರಡು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ. ಮಾರ್ಚ್ 2021 ರಲ್ಲಿ ಉಪಾಧ್ಯಾಯ ಅವರ ಮನವಿಯ ಮೇಲೆ ನ್ಯಾಯಾಲಯವು ನೋಟಿಸ್ ನೀಡಿತ್ತು, ಆದರೆ ಕೇಂದ್ರ ಸರ್ಕಾರ ಇನ್ನೂ ತನ್ನ ಉತ್ತರವನ್ನು ಸ್ಪಷ್ಟ ಪಡಿಸಲಿಲ್ಲ. (ಮಾಹಿತಿ: Indian Express)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications