ದೀಪಾವಳಿಗಷ್ಟೇ ಅಲ್ಲ, ಯಾವಾಗಲೂ ಅನ್ವಯ: ಸುಪ್ರೀಂ ತೀರ್ಪಿನ ಮುಖ್ಯಾಂಶ
ನವದೆಹಲಿ, ಅಕ್ಟೋಬರ್ 24: ದೀಪಾವಳಿ ಕಣ್ಣೆದುರಿಗೆ ಇದೆ. ಯಾರ್ಯಾರೋ ದೀಪಾವಳಿಗೆ ಪಟಾಕಿ ಚೀಟಿ ಹಾಕಿಕೊಂಡಿದ್ದರೋ ಅಥವಾ ತಮಿಳುನಾಡಿನ ಹೊಸೂರಿನಿಂದ ಸಾವಿರಗಟ್ಟಲೆ ದುಡ್ಡು ಕೊಟ್ಟು ಜೋರು ದೀಪಾವಳಿ ಮಾಡಬೇಕು ಅಂದುಕೊಂಡಿದ್ದರೋ ಎಲ್ಲರಿಗೂ ಸುಪ್ರೀಂ ಕೋರ್ಟ್ ಮಂಗಳವಾರದ ತೀರ್ಪು ಖಂಡಿತಾ ಬಿಸಿ ಮುಟ್ಟಿಸಿದೆ.
ಹಾಗಂತ ಇದು ದೀಪಾವಳಿಗೆ ಮಾತ್ರ ಸೀಮಿತವಾ ಅಂತ ನೋಡಿದರೆ ಖಂಡಿತಾ ಅಲ್ಲ. ಎಲ್ಲ ಆಚರಣೆಗೂ ಇದು ಅನ್ವಯ ಆಗುತ್ತದೆ. ಅಷ್ಟೇ ಅಲ್ಲ, ಮದುವೆ, ಮೆರವಣಿಗೆ ಸೇರಿದಂತೆ ವಿವಿಧ ಸಂದರ್ಭಗಳಿಗೂ ಈ ತೀರ್ಪು ಲಾಗೂ ಆಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ಕಾನೂನು ಜಾರಿಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ.
ಅದರ ಜತೆಗೆ ಸಾರ್ವಜನಿಕರು ಸಹ ಜವಾಬ್ದಾರಿಯಿಂದ ವರ್ತಿಸಲೇಬೇಕು. ಈ ತೀರ್ಪು ನೀಡಿದ ಕೋರ್ಟ್ ಕೊನೆಯಲ್ಲಿ ಮತ್ತೊಂದು ಅಂಶವನ್ನು ಸಹ ಸೇರಿಸಿದೆ. ಇವೆಲ್ಲ ಮೇಲ್ನೋಟಕ್ಕೆ ಕಂಡು ಬಂದ ತೊಂದರೆಗಳಿಗೆ ಸೂಚಿಸುವ ಪರಿಹಾರಗಳು. ಅದರ ಆಚೆಗೆ ಪಟಾಕಿ ಮಾರಾಟದಲ್ಲಿ ಆದಾಯಕ್ಕೆ ಖೋತಾ ಬಿದ್ದರೆ, ಉದ್ಯೋಗ ಕಳೆದುಕೊಳ್ಳುವವರ ಗತಿ ಏನು ಇತ್ಯಾದಿ ವಿಚಾರಗಳನ್ನು ನಂತರ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಹಾಗಾದರೆ ಕೋರ್ಟ್ ನೀಡಿದ ತೀರ್ಪಿನಲ್ಲಿನ ಮುಖ್ಯಾಂಶವೇನು ಎಂಬುದು ಇಲ್ಲಿದೆ ಓದಿಕೊಳ್ಳಿ.

ಕೋರ್ಟ್ ಸಲಹೆ ನೀಡಿದ ಪಟಾಕಿಗಳ ಮಾರಾಟ ಮಾತ್ರ ಮಾಡಬೇಕು
ಕಡಿಮೆ ಹೊಗೆ ಹೊರಹಾಕುವ ಪಟಾಕಿಗಳು (ಸುಧಾರಿತ ಪಟಾಕಿಗಳು) ಮತ್ತು ಪರಿಸರಸ್ನೇಹಿ ಪಟಾಕಿಗಳನ್ನು ಇನ್ನು ಮುಂದೆ ತಯಾರಿಸಬೇಕು ಮತ್ತು ಮಾರಾಟ ಮಾಡಬೇಕು. ಕೋರ್ಟ್ ಸಲಹೆ ನೀಡಿದಂಥ ಪಟಾಕಿಗಳ ಉತ್ಪಾದನೆ, ಮಾರಾಟವಷ್ಟೇ ಮಾಡಬೇಕು. ಉಳಿದೆಲ್ಲ ಬಗೆಯನ್ನು ನಿಷೇಧಿಸಬೇಕು. ಸರ ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಗೆ ನಿಷೇಧ. ಏಕೆಂದರೆ ಇದರಿಂದ ವಾಯು, ಶಬ್ದ ಹಾಗೂ ಘನ ತ್ಯಾಜ್ಯದ ಸಮಸ್ಯೆಯಾಗುತ್ತದೆ. ಪಟಾಕಿಗಳ ಮಾರಾಟವನ್ನು ಪರವಾನಗಿ ಇರುವ ಮಾರಾಟಗಾರರ ಮೂಲಕವೇ ಮಾಡಬೇಕು. ಇನ್ನು ಪರವಾನಗಿ ಪಡೆದ ಮಾರಾಟಗಾರರು ಕೂಡ ಕೋರ್ಟ್ ಆದೇಶದಲ್ಲಿ ತಿಳಿಸಿರುವಂಥ ಪಟಾಕಿಗಳನ್ನೇ ಮಾರಾಟ ಮಾಡಬೇಕು.

ಆನ್ ಲೈನ್ ಮೂಲಕ ಪಟಾಕಿ ಮಾರುವುದಕ್ಕೆ ನಿಷೇಧ
ಇ ಕಾಮರ್ಸ್ ವೆಬ್ ಸೈಟ್ ಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಇತರ ಸಂಸ್ಥೆಗಳು ಆನ್ ಲೈನ್ ಮೂಲಕ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಇದನ್ನು ಮೀರಿಯೂ ಆನ್ ಲೈನ್ ಕಂಪನಿಗಳು ಪಟಾಕಿ ಮಾರಾಟ ಮಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಈ ರೀತಿ ಮಾಡಿದಾಗ ಕೋರ್ಟ್ ನಿಂದ ದಂಡ ಕೂಡ ವಿಧಿಸಬಹುದಾಗಿದೆ. ಬೇರಿಯಂ ಸಾಲ್ಟ್ಸ್ ಹೊಂದಿರುವ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ. ಅನುಮತಿ ಇರುವಂಥ, ಅನುಮತಿ ಇರುವಷ್ಟು ರಾಸಾಯನಿಕ ಮಾತ್ರ ಬಳಸಿದ ಪಟಾಕಿಗಳನ್ನು ಖರೀದಿ, ಮಾರಾಟ, ಬಳಿಯಲ್ಲಿ ಇಟ್ಟುಕೊಳ್ಳಬಹುದು. ಇದು ದೀಪಾವಳಿ ಸೇರಿದಂತೆ ಎಲ್ಲ ಧರ್ಮದ ಆಚರಣೆಗಳಿಗೂ ಅನ್ವಯ ಆಗುತ್ತದೆ. ಮದುವೆ ಮುಂತಾದ ಕಾರ್ಯಕ್ರಮಕ್ಕೂ ಇದು ಅನ್ವಯ. ನಿಷೇಧಿತ ರಾಸಾಯನಿಕಗಳಾದ ಲಿಥಿಯಂ, ಅರ್ಸೆನಿಕ್, ಅಂಟಿಮೋನಿ, ಲೆಡ್, ಪಾದರಸ ಇವೆಯೇ ಎಂಬುದನ್ನು 'ಪೆಸೋ' ಖಾತ್ರಿ ಪಡಿಸಬೇಕು. ಅದೇ ರೀತಿ ಪಟಾಕಿಯ ಶಬ್ದದ ಮಟ್ಟ ನಿಗದಿತ ಮಿತಿಯಲ್ಲಿರಬೇಕು. ಒಂದು ವೇಳೆ ಆ ಮಿತಿಯನ್ನು ಮೀರಿದ್ದರೆ ಉತ್ಪಾದಕರ ಪರವಾನಗಿ ರದ್ದು ಮಾಡಬೇಕು. ಮತ್ತು ಶಬ್ದ ಮಾಲಿನ್ಯದ ವಿಚಾರವಾಗಿ ಈ ಹಿಂದೆ ಹೊರಡಿಸಿದ ಆದೇಶಗಳು ಹಾಗೇ ಮುಂದುವರಿಯುತ್ತದೆ.

ದೀಪಾವಳಿಯಲ್ಲಿ ರಾತ್ರಿ 8ರಿಂದ 10ಗಂಟೆ ಮಧ್ಯೆ ಮಾತ್ರ ಅವಕಾಶ
ಪಟಾಕಿಗಳ ಅಡ್ಡ ಪರಿಣಾಮದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶಾಲೆಗಳು ಮತ್ತಿತರ ಕಡೆಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನ ಕೈಗೊಳ್ಳಬೇಕು. ದೀಪಾವಳಿ ದಿವಸ ಅಥವಾ ಇನ್ಯಾವುದೇ ಹಬ್ಬದ ದಿನಗಳಲ್ಲಿ ರಾತ್ರಿ 8ರಿಂದ 10ಗಂಟೆ ಮಧ್ಯೆ ಮಾತ್ರ ಪಟಾಕಿ ಸಿಡಿಸಬೇಕು. ಕ್ರಿಸ್ ಮಸ್, ಹೊಸ ವರ್ಷದ ಹಿಂದಿನ ಮಧ್ಯರಾತ್ರಿ ಆರಂಭಿಸಬಹುದು. ಅದು 12 ಗಂಟೆಗೆ. 11.55ರಿಂದ 12.30ವರೆಗೆ ಮಾತ್ರ.

ನಿರ್ದಿಷ್ಟ ಸ್ಥಳವನ್ನು ಗುರುತಿಸಿ, ಸಾರ್ವಜನಿಕವಾಗಿ ಪಟಾಕಿ ಸಿಡಿಸಿ
ಕೇಂದ್ರ ಸರಕಾರ, ದೆಹಲಿ ಸರಕಾರ ಮತ್ತು ಎನ್ ಸಿಆರ್ ನಲ್ಲಿ ಸಾಮೂಹಿಕವಾಗಿ ಪಟಾಕಿ ಸಿಡಿಸಲು ಮಾತ್ರ ಅವಕಾಶ (ದೀಪಾವಳಿ ಮತ್ತಿತರ ಹಬ್ಬದ ಸಂದರ್ಭದಲ್ಲಿ). ಅದು ಎಲ್ಲಾದರೂ ಆಗಬಹುದು. ಅದಕ್ಕಾಗಿ ಒಂದು ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆ ಮಾಡಿರಬೇಕು. ಇದು ಕೋರ್ಟ್ ತೀರ್ಪು ಬಂದ ವಾರದೊಳಗೆ ಆಗಬೇಕು. ಹೀಗೆ ನಿರ್ಧರಿಸಿದ ಸ್ಥಳಗಳ ಬಗ್ಗೆ ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸುವುದರಿಂದ ಅನುಕೂಲ ಆಗುತ್ತದೆ. ದೀಪಾವಳಿಗೆ ಒಂದು ವಾರಕ್ಕೆ ಮುಂಚಿತವಾಗಿ ಈ ಬಗ್ಗೆ ಮಾಹಿತಿ ನೀಡಬೇಕು. ಈ ಸಾಮೂಹಿಕ ಸ್ಥಳವು ಇತರ ಸಂದರ್ಭಗಳಿಗೂ ಅನ್ವಯ ಆಗುತ್ತದೆ. ಮದುವೆ ಮತ್ತು ಇತರ ಸಂದರ್ಭಗಳಿಗೂ ಇದೇ ಲಾಗೂ ಆಗುತ್ತದೆ. ಅದಕ್ಕೆ ಕೂಡ ಸುಧಾರಿತ ಮತ್ತು ಪರಿಸರಸ್ನೇಹಿ ಪಟಾಕಿಗಳನ್ನೇ ಬಳಸಬೇಕು.

ನಿಯಮಗಳ ಉಲ್ಲಂಘನೆ ಆದರೆ ಪೊಲೀಸರೇ ಹೊಣೆ
ನಿಗದಿತ ಸಮಯ ಹಾಗೂ ಅವಧಿಯಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಹಾಗೂ ಪೊಲೀಸರು ಖಾತ್ರಿ ಪಡಿಸಬೇಕು. ಇದರ ಜತೆಗೆ ನಿಷೇಧಿತ ಪಟಾಕಿಗಳ ಮಾರಾಟ ಆಗುತ್ತಿಲ್ಲ ಎಂಬುದನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರದೇ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಧಿಕಾರಿ ಜವಾಬ್ದಾರರಾಗುತ್ತಾರೆ. ಅದು ಕೂಡ ನ್ಯಾಯಾಂಗ ನಿಂದನೆ ಆಗುತ್ತದೆ. ಅಂಥ ಸಂದರ್ಭಗಳಲ್ಲಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬಹುದು.

ಹಬ್ಬಕ್ಕೆ ಏಳು ದಿನ ಮೊದಲು ಹಾಗೂ ನಂತರದ ಏಳು ದಿನ ನಿಗಾ
ಆಯಾ ರಾಜ್ಯಗಳ ಅಥವಾ ಕೇಂದ್ರಾಡಳಿತ ಪ್ರದೇಶಗಳ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಸಮಿತಿಗಳು ದೀಪಾವಳಿಗೆ ಏಳು ದಿನ ಮೊದಲು ಹಾಗೂ ಹಬ್ಬದ ಏಳು ದಿನದ ನಂತರದ ಪರಿಸ್ಥಿತಿ ಮೇಲೆ ನಿಗಾ ವಹಿಸಿರಬೇಕು. ಮುಖ್ಯವಾಗಿ ಅಲ್ಯೂಮಿನಿಯಂ, ಬೇರಿಯಂ, ಕಬ್ಬಿಣ ಇತರ ಅಂಶಗಳ ಬಗ್ಗೆ ನಿಗಾ ವಹಿಸಬೇಕು. ಜತೆಗೆ ಗಾಳಿಯ ಗುಣಮಟ್ಟದ ಪ್ರಮಾಣ ನಿಗದಿತವಾಗಿಯೇ ಇದೆಯಾ ಎಂಬ ಬಗ್ಗೆ ಕೂಡ ತಿಳಿಯಬೇಕು. ಹೀಗೆ ಮಾಡುವುದರಿಂದ ಪಟಾಕಿಯಿಂದ ಸಂಭವಿಸುವ ಮಾಲಿನ್ಯದ ಬಗ್ಗೆ ಮಾಹಿತಿ ಸಂಗ್ರಹವಾಗುತ್ತದೆ. ಆ ನಂತರ ಪಟಾಕಿಗಳಲ್ಲಿ ಅಲ್ಯೂಮಿನಿಯಂ, ಬೇರಿಯಂ ಹಾಗೂ ಕಬ್ಬಿಣ ಯಾವ ಪ್ರಮಾಣದಲ್ಲಿ ಮಾತ್ರ ಇರಬೇಕು ಎಂದು ನಿರ್ಧರಿಸಲು ಅನುಕೂಲ ಆಗುತ್ತದೆ.

ಪಟಾಕಿ ನಿಷೇಧದ ಪರಿಣಾಮ ನಂತರ ಪರಾಂಬರಿಸಲಾಗುತ್ತದೆ
ಈ ಎಲ್ಲ ವಿಚಾರದ ಬಗ್ಗೆ ಒಂದು ಸ್ಪಷ್ಟನೆ ನೀಡಬೇಕು. ನಮ್ಮ ಚರ್ಚೆಯು ಪರಿಚ್ಛೇದ 19(1)(g), 25ರ ಆಧಾರದಲ್ಲಿ ನಡೆದಿದೆ. ಈ ಎಲ್ಲ ಕ್ರಮಗಳಿಂದ ಆದಾಯದಲ್ಲಿ ಆಗುವ ನಷ್ಟ, ನಿರುದ್ಯೋಗ, ಒಂದು ವೇಳೆ ಪಟಾಕಿ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ನಿಷೇಧ ಮಾಡಿದರೆ ಇದು ಮೇಲ್ನೋಟಕ್ಕೆ ಮತ್ತು ನಮ್ಮದು ಇದು ಅಂತಿಮ ನಿರ್ಧಾರವಲ್ಲ.












Click it and Unblock the Notifications