ಹವಾಮಾನ ಎಚ್ಚರಿಕೆ: ಉತ್ತರಾಖಂಡದಲ್ಲಿ 3 ದಿನಗಳ ಕಾಲ ರೆಡ್ ಅಲರ್ಟ್
ಡೆಹ್ರಾಡೂನ್ ಜುಲೈ 18: ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಅಲರ್ಟ್ ಮೋಡ್ ನಲ್ಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂಗಳು ಕೂಡ ಸಕ್ರಿಯವಾಗಿರುವಂತೆ ತಿಳಿಸಲಾಗಿದೆ.
ಕಳೆದ 3 ದಿನಗಳಿಂದ ಉತ್ತರಾಖಂಡದ ಹವಾಮಾನದ ಸ್ವರೂಪ ಸಂಪೂರ್ಣ ಬದಲಾಗಿದೆ. ಬಹುತೇಕ ಕಡೆ ಬಿಸಿಲಿನ ಝಳದಿಂದಾಗಿ ಕಂಗೆಟ್ಟಿದ್ದಾರೆ. ಆದರೆ ಇದೀಗ ಮುಂದಿನ ದಿನಗಳಲ್ಲಿ ಹವಾಮಾನ ಸಂಪೂರ್ಣ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹವಾಮಾನ ಕೇಂದ್ರದ ನಿರ್ದೇಶಕ ಬಿಕ್ರಮ್ ಸಿಂಗ್ ಪ್ರಕಾರ, ಸೋಮವಾರ ರಾತ್ರಿಯಿಂದ ರಾಜ್ಯದಾದ್ಯಂತ ಹವಾಮಾನ ಬದಲಾಗಲಿದೆ.
ಮೂರು ದಿನಗಳ ಕಾಲ ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್, ಚಂಪಾವತ್, ಉಧಮ್ ಸಿಂಗ್ ನಗರ ಮತ್ತು ಹರಿದ್ವಾರದಲ್ಲಿ ಭಾರೀ ಮಳೆಯಾಗಬಹುದು. ಹೀಗಾಗಿ ಇಂದು, ನಾಳೆ (ಜುಲೈ 19) ಮತ್ತು 20 ರಂದು ಮನೆಯಿಂದ ಹೊರಗೆ ಬರದಂತೆ ತಿಳಿಸಲಾಗಿದೆ. ಇದರೊಂದಿಗೆ, ಚಾರ್ಧಾಮ್ ಯಾತ್ರೆ ಮತ್ತು ಕನ್ವರ್ ಯಾತ್ರೆಗೆ ಹೊರಗಿರುವ ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಕೇಳಲಾಗಿದೆ. ಜುಲೈ 22ರವರೆಗೆ ತೀವ್ರ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ವಿಪತ್ತಿನ ಸವಾಲನ್ನು ಎದುರಿಸಲು ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅನಾಹುತದ ಸಂದರ್ಭದಲ್ಲಿ ಜೆಸಿಬಿಗಳನ್ನು ಯಾವಾಗಲೂ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು. ವಿಪತ್ತು ಪೀಡಿತ ಸ್ಥಳಗಳಲ್ಲಿ ಇವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರಬೇಕು. ಇದರಿಂದ ಭೂಕುಸಿತದಿಂದ ರಸ್ತೆಗಳನ್ನು ತಕ್ಷಣವೇ ತೆರೆಯಬಹುದಾಗಿದೆ. ಲೋಕೋಪಯೋಗಿ ಇಲಾಖೆಯಿಂದ ವಿವಿಧ ಮಾರ್ಗಗಳಲ್ಲಿ ಒಟ್ಟು 396 ಯಂತ್ರಗಳನ್ನು (ಜೆಸಿಬಿ, ಪೊಕ್ಲೇನ್) ನಿಯೋಜಿಸಲಾಗಿದೆ. ಯಾವುದೇ ವಿಪತ್ತಿನ ಸಂದರ್ಭದಲ್ಲಿ ಕನಿಷ್ಠ ಪ್ರತಿಕ್ರಿಯೆ ಸಮಯದಲ್ಲಿ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ತಲುಪಿವೆ ಎಂದು ಸಿಎಂ ಹೇಳಿದರು.
23 ಸ್ಥಳಗಳಲ್ಲಿ ನದಿ ನೀರಿನ ಮಟ್ಟ ಮೇಲ್ವಿಚಾರಣೆ
ಅಲ್ಮೋರಾ, ಪಿಥೋರಗಢ, ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಝಜ್ರಾದಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರು ನದಿಗಳು ಮತ್ತು ಚರಂಡಿಗಳ ಕಡೆಗೆ ಹೋಗದಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಎಲ್ಲಾ ಗೋದಾಮುಗಳಲ್ಲಿ ಮೂರು ತಿಂಗಳ ಮುಂಗಡ ಆಹಾರ ಧಾನ್ಯಗಳು ಲಭ್ಯವಾಗುವಂತೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಪ್ರವಾಹ ನಿಯಂತ್ರಣ ಕೊಠಡಿ ಮತ್ತು ಡೆಹ್ರಾಡೂನ್ನಲ್ಲಿ ಕೇಂದ್ರೀಯ ಪ್ರವಾಹ ನಿಯಂತ್ರಣ ಕೇಂದ್ರವನ್ನು ನೀರಾವರಿ ಇಲಾಖೆ ಸ್ಥಾಪಿಸಿದೆ. ನೀರಾವರಿ ಇಲಾಖೆಯು 23 ಸ್ಥಳಗಳಲ್ಲಿ ನದಿಗಳ ನೀರಿನ ಮಟ್ಟ ಮೇಲ್ವಿಚಾರಣೆ ಮಾಡುತ್ತಿದೆ. ಉತ್ತರಾಖಂಡ ಜಲ ಸಂಸ್ಥಾನದಿಂದ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ.
ಯಾತ್ರಾರ್ಥಿಗಳಿಗೆ ಸೂಚನೆ
ಇನ್ನೂ ಚಾರ್ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಹಲವಾರು ಜನ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಅನೇಕ ಯಾತ್ರಾರ್ಥಿಗಳು ಸಾವನ್ನಪ್ಪಿರುವ ವರದಿಗಳಾಗಿವೆ. ಇದರ ನಡುವ ಪ್ರವಾಹದ ಭೀತಿ ಕೂಡ ಇದೆ. ಹೀಗಾಗಿ ಯಾತ್ರಾರ್ಥಿಗಳಿಗೆ ವಾಸಸ್ಥಳದಿಂದ ಮುಂದಿನ ಮೂರು ದಿನ ಹೊರಬಾರದಂತೆ ಸೂಚಿಸಲಾಗಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಯಾತ್ರಿಗಳ ಸಂಖ್ಯೆ ಇಳಿಕೆ
ಚಾರ್ಧಾಮ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ 20 ಲಕ್ಷ ದಾಟಿದೆ. ಚಾರ್ಧಾಮ್ ಯಾತ್ರೆಯು ಮೇ 3 ರಿಂದ ಪ್ರಾರಂಭವಾಯಿತು. ಬದರಿನಾಥ ಧಾಮದ ಬಾಗಿಲು ತೆರೆದ ದಿನಾಂಕ ಮೇ 8 ರಿಂದ ಇಲ್ಲಿಯವರೆಗೆ 718312 ಯಾತ್ರಿಕರು ಭೇಟಿ ನೀಡಿದ್ದಾರೆ. ಅದೇ ರೀತಿ, 698590 ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದು, ಅದರಲ್ಲಿ 71273 ಯಾತ್ರಿಕರು ಹೆಲಿಸೇವಾ ಮೂಲಕ ತಲುಪಿದ್ದಾರೆ. ಇಲ್ಲಿಯವರೆಗೆ 333909ಕ್ಕೂ ಹೆಚ್ಚು ಯಾತ್ರಿಕರು ಗಂಗೋತ್ರಿ ಧಾಮವನ್ನು ಮತ್ತು 550398 ಯಾತ್ರಿಕರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ.
ಬಾಗಿಲು ತೆರೆಯುವ ದಿನಾಂಕವಾದ ಮೇ 22 ರಿಂದ ಗುರುದ್ವಾರ ಹೇಮಕುಂಟ್ ಸಾಹಿಬ್ ತಲುಪಿದ ಯಾತ್ರಾರ್ಥಿಗಳ ಸಂಖ್ಯೆ 63124ಕ್ಕೂ ಹೆಚ್ಚಾಗಿದೆ. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಈ ಹಿಂದೆ ಪ್ರವಾಹದಿಂದಾಗಿ ಹಲವಾರು ಜನ ಪ್ರಾಣಗಳಿದುಕೊಂಡಿದ್ದು ಬಹುತೇಕ ಜನ ಕಾಣೆಯಾಗಿದ್ದಾರೆ. ಹೀಗಾಗಿ ಮಳೆ ಹೆಚ್ಚಾಗುತ್ತಿರುವುದರಿಂದ ಈ ಪ್ರದೇಶದಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ.
Recommended Video