ಹಣೆಬೊಟ್ಟು ಧರಿಸದ ಪತ್ರಕರ್ತೆಗೆ ಬೈಟ್ ನೀಡದ ಬಲಪಂಥೀಯ ನಾಯಕ!
ಮುಂಬೈ, ನ.03: ಹಣೆಗೆ ಬಿಂದಿ ಇಡದ ಕಾರಣ ಪತ್ರಕರ್ತೆಗೆ ಮಹಾರಾಷ್ಟ್ರದ ಬಲಪಂಥೀಯ ನಾಯಕ ಮತ್ತು ಕಾರ್ಯಕರ್ತ ಸಂದರ್ಶನ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯ ಮಹಿಳಾ ಆಯೋಗ ಕೂಡ ನೋಟಿಸ್ ನೀಡಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಮಂತ್ರಾಲಯದಲ್ಲಿ ಬುಧವಾರ ಭೇಟಿಯಾದ 80 ವರ್ಷದ ಬಲಪಂಥೀಯ ನಾಯಕ ಸಂಭಾಜಿ ಭಿಡೆ ಅವರನ್ನು ಪ್ರಶ್ನೆ ಮಾಡಲು ಮರಾಠಿ ಸುದ್ದಿವಾಹಿನಿ ಸಾಮ್ ಟಿವಿ ಪತ್ರಕರ್ತೆ ಮುಂದಾದರು. ಈ ವೇಳೆ ಪತ್ರಕರ್ತೆ ಹಣೆಗೆ ಬೊಟ್ಟು ಇಟ್ಟಿಲ್ಲ ಎಂಬ ಕಾರಣಕ್ಕೆ ಬೈಟ್ ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ನವವಿವಾಹಿತೆರಿಗೆ ಯಾವಾಗ ಗರ್ಭಿಣಿಯಾಗ್ತೀರಾ ಎಂದು ಪ್ರಶ್ನಿಸುತ್ತಿರುವ ಚೀನಾ ಅಧಿಕಾರಿಗಳು
ವಿಡಿಯೋದಲ್ಲಿ "ಪ್ರತಿ ಮಹಿಳೆ ಭಾರತ ಮಾತೆಯಂತೆ ಮತ್ತು ಭಾರತ ಮಾತೆ ವಿಧವೆಯಲ್ಲ. ಆದ್ದರಿಂದ ವಿಧವೆಯಂತೆ ಕಾಣಿಸಿಕೊಳ್ಳಬಾರದು. ಹೀಗಾಗಿ ಬೈಟ್ ತೆಗೆದುಕೊಳ್ಳಲು ಬರುವ ಮೊದಲು ಬಿಂದಿ ಧರಿಸಿರಬೇಕು" ಎಂದು ಸಂಭಾಜಿ ಭಿಡೆ ಹೇಳಿದ್ದಾರೆ. ಪತ್ರಕರ್ತೆಯ ಕುರಿತು ನೀಡಿರುವ ಹೇಳಿಕೆಗೆ ವಿವರಣೆ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಮಹಿಳಾ ಆಯೋಗ ಸಂಭಾಜಿ ಭಿಡೆಗೆ ನೋಟಿಸ್ ಜಾರಿ ಮಾಡಿದೆ.
ಇದು ಪ್ರಜಾಪ್ರಭುತ್ವ, ಬಿಂದಿ ಧರಿಸುವುದು, ಬಿಡುವುದು ನನ್ನ ಆಯ್ಕೆ
ಘಟನೆಯನ್ನು ಪತ್ರಕರ್ತೆ ತನ್ನ ಟ್ವಿಟರ್ ಹ್ಯಾಂಡಲ್ನಿಂದ ಹಂಚಿಕೊಂಡಿದ್ದು, ಬಿಂದಿಯನ್ನು ಧರಿಸಬೇಕೆ ಅಥವಾ ಬೇಡವೇ ಎಂಬುದು ತನ್ನ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.
"ನಾವು ಜನರನ್ನು ಅವರ ವಯಸ್ಸನ್ನು ನೋಡಿ ಗೌರವಿಸುತ್ತೇವೆ. ಆದರೆ ಜನರು ಕೂಡ ಆ ಗೌರವಕ್ಕೆ ಅರ್ಹರಾಗಿರಬೇಕು. ಬಿಂದಿಯನ್ನು ಧರಿಸಬೇಕೆ ಅಥವಾ ಬೇಡವೇ ಎಂಬುದು ನನ್ನ ವೈಯಕ್ತಿಕ ಆಯ್ಕೆಯಾಗಿದೆ. ಇದು ಪ್ರಜಾಪ್ರಭುತ್ವ" ಎಂದು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಪತ್ರಕರ್ತೆಗೆ ಬೆಂಬಲ ವ್ಯಕ್ತಪಡಿಸಿದ ಸಂಸದೆ ಸುಪ್ರಿಯಾ ಸುಲೆ
ಪತ್ರಕರ್ತೆ ರೂಪಾಲಿ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ಆಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಂದಿ ಧರಿಸುವುದು, ಬಿಡುವುದು ಆಕೆಯ ವೈಯಕ್ತಿಕ ಹಕ್ಕು ಎಂದಿದ್ದಾರೆ.
ಸಂಸದೆ ಸುಪ್ರಿಯಾ ಸುಲೆ, ನಟಿ ಉರ್ಮಿಳಾ ಮತೋಂಡ್ಕರ್ ಸೇರಿದಂತೆ ಹಲವು ಮಂದಿ ಆಕೆಯ ಹಕ್ಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.
ಸಂಸದೆ ಸುಪ್ರಿಯಾ ಸುಲೆ, ಸರಣಿ ಕವನಗಳ ಮೂಲಕ ಪುರುಷರು ಮಹಿಳೆಯರನ್ನು ಮಂಗಳಸೂತ್ರ, ಬಳೆ, ಸೀರೆ, ಬಿಂದಿಗಳು ಎಂಬ ಸಾಂಪ್ರದಾಯಿಕ ಆಚರಣೆಗಳ ಹೆಸರಿನಲ್ಲಿ ಬಿಗಿದಿಡುತ್ತಿರುವ ಬಗ್ಗೆ ಹೇಳಿದ್ದಾರೆ.
ಮಹಿಳೆಯ ಹಕ್ಕು, ಸಾಮಾಜಿಕ ಸ್ಥಾನಮಾನಕ್ಕೆ ಅವಮಾನ
ಸಂಭಾಜಿ ಭಿಡೆಗೆ ನೋಟಿಸ್ ನೀಡಿ ಅವರ ಹೇಳಿಕೆಯನ್ನು ಖಂಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್, ಬಲಪಂಥೀಯ ಕಾರ್ಯಕರ್ತ ಮಹಿಳೆಯ ಹಕ್ಕು ಮತ್ತು ಸಾಮಾಜಿಕ ಸ್ಥಾನಮಾನವನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ಮಹಿಳಾ ಪತ್ರಕರ್ತೆಯ ಹಣೆಯ ಮೇಲೆ ಬಿಂದಿ ಇಲ್ಲದ ಕಾರಣ ನೀವು ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದೀರಿ. ಆದರೆ, ಮಹಿಳೆಯು ತನ್ನ ಉತ್ತಮ ಕೆಲಸದಿಂದ ಹೆಸರುವಾಸಿಯಾಗಿದ್ದಾರೆ' ಎಂದು ರೂಪಾಲಿ ಚಕಂಕರ್ ಹೇಳಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಯನ್ನು ಮಹಿಳಾ ಆಯೋಗ ಗಮನಿಸಿದೆ ಎಂದು ಹೇಳಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಕಾಯಿದೆ, 1993 ರ ಸೆಕ್ಷನ್ 12 (2) ಮತ್ತು 12 (3) ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ಪ್ರಮುಖ ಆರ್ಎಸ್ಎಸ್ ಪ್ರಚಾರಕರಾಗಿದ್ದ ಸಂಭಾಜಿ ಭಿಡೆ
2014 ರ ಜನವರಿಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಂಗ್ಲಿಗೆ ಹೋಗಿ ಬಂದ ನಂತರ ಸಂಭಾಜಿ ಭಿಡೆ 'ಗುರೂಜಿ' ಎಂದು ಜನಪ್ರಿಯವಾದರು. ಅದಕ್ಕೂ ಮುನ್ನ ಅವರು ತಮ್ಮ ಜಮೀನಿನಲ್ಲಿ ಮಾವಿನ ಹಣ್ಣು ತಿಂದ ದಂಪತಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ ಎಂದು ಹೇಳಿಕೊಂಡು ವಿವಾದ ಸೃಷ್ಟಿಸಿದ್ದರು.
2019 ರಲ್ಲಿ, ಮಹಾವಿಕಾಸ್ ಅಘಾಡಿ ರೂಪುಗೊಂಡಾಗ, ಉದ್ಧವ್ ಠಾಕ್ರೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವುದನ್ನು ತಡೆಯುವ ಪ್ರಯತ್ನದಲ್ಲಿ ಮಾತೋಶ್ರೀಗೆ ಹೋಗಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ತಮ್ಮದೇ ಆದ ಶ್ರೀ ಶಿವಪ್ರತಿಷ್ಠಾನ್ ಹಿಂದೂಸ್ತಾನ್ ಸಂಘ ರಚಿಸುವ ಮೊದಲು ಪೂರ್ಣ ಸಮಯದ ಆರ್ಎಸ್ಎಸ್ ಪ್ರಚಾರಕರಾಗಿದ್ದರು.