ಕ್ಸಿ ಕಂಡರೆ ಮೋದಿಗೆ ಭಯ: ರಾಹುಲ್ ಗಾಂಧಿ ವ್ಯಂಗ್ಯ, ಟ್ವಿಟ್ಟಿಗರ ತರಾಟೆ
Recommended Video

ನವದೆಹಲಿ, ಮಾರ್ಚ್ 14: ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಘೋಷಣೆ ಮಾಡಲು ಚೀನಾ ಅಡ್ಡಗಾಲು ಹಾಕಿದ ಪ್ರಕರಣವನ್ನು ಕಾಂಗ್ರೆಸ್, ಬಿಜೆಪಿ ವಿರುದ್ಧದ ಟೀಕಾಸ್ತ್ರವಾಗಿ ಬಳಸಿಕೊಂಡಿದೆ.
ಮಸೂದ್ ಅಜರ್ ಒಬ್ಬ ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿನ ಎಲ್ಲ ದೇಶಗಳೂ ಬೆಂಬಲ ನೀಡಿದ್ದವು. ಆದರೆ, ಚೀನಾ ನಾಲ್ಕನೆ ಬಾರಿಗೆ ಇದಕ್ಕೆ ತನ್ನ ಸಹಮತ ಇಲ್ಲ ಎನ್ನುವ ಮೂಲಕ ಭಾರತದ ಪ್ರಯತ್ನಕ್ಕೆ ಪುನಃ ಅಡ್ಡಿಪಡಿಸಿತ್ತು.
ಇದನ್ನು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಭಾರತದ ರಾಜತಾಂತ್ರಿಕ ವೈಫಲ್ಯ ಎಂದು ಟೀಕಿಸಿವೆ. ಚೀನಾಕ್ಕೆ ತೆರಳಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ನಡೆಸಿದ ಮಾತುಕತೆಗಳು, ಒಪ್ಪಂದಗಳ ಪ್ರಯೋಜನವೇನು? ಒಬ್ಬ ಉಗ್ರನ ವಿರುದ್ಧ ಚೀನಾದ ಅಭಿಪ್ರಾಯ ಬದಲಿಸುವುದು ಪ್ರಧಾನಿ ಮೋದಿ ಅವರಿಗೆ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ವಿಚಾರವನ್ನು ಬಿಜೆಪಿ ಮತ್ತು ಮೋದಿ ವಿರುದ್ಧದ ಟೀಕೆಗೆ ಉಪಯೋಗಿಸಿದ್ದಾರೆ. ಮೋದಿ ಅವರನ್ನು ದುರ್ಬಲ ಎಂದು ಲೇವಡಿ ಮಾಡಿರುವ ರಾಹುಲ್, ಕ್ಸಿ ಅವರನ್ನು ಕಂಡರೆ ಮೋದಿಗೆ ಭಯ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬೆಂಬಲಿಸಿ ಅನೇಕರು ಟ್ವೀಟ್ ಮಾಡಿದ್ದಾರೆ. ಹಾಗೆಯೇ ರಾಹುಲ್ ಹೇಳಿಕೆಗೆ ಪ್ರತಿಯಾಗಿ ಟೀಕೆಗಳೂ ವ್ಯಕ್ತವಾಗಿವೆ.
|
ದುರ್ಬಲ ಮೋದಿಗೆ ಭಯ
ದುರ್ಬಲ ಮೋದಿಗೆ ಕ್ಸಿಯನ್ನು ಕಂಡರೆ ಭಯ. ಚೀನಾವು ಭಾರತದ ವಿರುದ್ಧದ ನಡೆ ಅನುಸರಿಸಿದಾಗ ಮೋದಿ ಅವರ ಬಾಯಿಯಿಂದ ಒಂದೇ ಒಂದು ಪದ ಹೊರಬಂದಿಲ್ಲ. 'ನಮೋ' ಅವರ ಚೀನಾ ರಾಜತಾಂತ್ರಿಕ ನೀತಿ ಇದು,
1. ಗುಜರಾತ್ನಲ್ಲಿ ಕ್ಸಿ ಜೊತೆ ಸುತ್ತಾಟ
2. ದೆಹಲಿಯಲ್ಲಿ ಕ್ಸಿಗೆ ಆಲಿಂಗನ
3. ಚೀನಾದಲ್ಲಿ ಕ್ಸಿ ಎದುರು ತಲೆಬಾಗುವಿಕೆ
ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
|
ನೆಹರೂ ಅವರೇ ಕೊಟ್ಟಿದ್ದು
ಚೀನಾಕ್ಕೆ ಅಧಿಕಾರ ನೀಡಿದ್ದು ನೆಹರೂ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾಕ್ಕೆ ಕಾಯಂ ಸದಸ್ಯತ್ವ ನೀಡಿದ್ದು ನಿಮ್ಮ ನೆಹರೂ. ಭಾರತಕ್ಕೆ ಆಫರ್ ನೀಡಲಾಗಿದ್ದ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಸ್ಥಾನವನ್ನು ಚೀನಾಕ್ಕೆ ಉಡುಗೊರೆಯಾಗಿ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಬಿಟ್ಟುಕೊಟ್ಟಿದ್ದರು ಎಂಬುದು ಹೆಚ್ಚಿನ ಭಾರತೀಯರಿಗೆ ತಿಳಿದಿಲ್ಲ ಎಂಬುದಾಗಿ ರಿಷಿ ಬ್ಯಾನರ್ಜಿ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಆಗಲೂ ಮಾಡಿತ್ತಲ್ಲ?
ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿರುವುದು ಭಾರತದ ವಿದೇಶಾಂಗ ನೀತಿಯ ವೈಫಲ್ಯದ ಸೂಚಕವಾಗಿದ್ದರೆ, 2009ರಲ್ಲಿಯೂ ಚೀನಾ ಇದೇ ರೀತಿ ಅಡ್ಡಿಪಡಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಿ ಎಂದು ದಿ ಸ್ಕಿನ್ ಡಾಕ್ಟರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಒಮ್ಮುಖದ ಕಥೆ ಬೇಡ
ಮಸೂದ್ ಅಜರ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದು ಬಿಜೆಪಿಯಲ್ಲ. ಆತನನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಸರ್ವ ಪಕ್ಷ ಸಭೆಯಲ್ಲಿ ತೀವ್ರ ಒತ್ತಡ ಹೇರಿದ್ದು ಸೋನಿಯಾ ಗಾಂಧಿ ಮತ್ತು ಅವರ ತಂಡ. ಒಂದು ಮುಖದ ಕಥೆಯನ್ನು ಹೇಳಬೇಡಿ ಎಂದು ಬಿಜು ವೇಣುಗೋಪಾಲ್ ನಾಯರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಬಾಳೆಯ ಮರದಲ್ಲಿ...
ಮೋದಿ ಅವರಿಂದ ಯಶಸ್ಸನ್ನು ನಿರೀಕ್ಷಿಸುವುದು ಬಾಳೆಯ ಮರದಲ್ಲಿ ಮಾವಿನ ಹಣ್ಣು ನಿರೀಕ್ಷಿಸಿದಂತೆ. ಅವರು ದೊಡ್ಡದಾಗಿ ವಿಫಲ ಅನುಭವಿಸಿದ್ದಾರೆ. ಮತ್ತು ಅದನ್ನು ಪ್ರತಿ ಅಂಶದಲ್ಲಿಯೂ ನಿರಂತರವಾಗಿ ಸಾಬೀತುಪಡಿಸಿದ್ದಾರೆ ಎಂದು ಮನೀಶ್ ಸೂದ್ ಎಂಬುವವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
|
ದೇಶದ ಸಮಸ್ಯೆಯೇ ನಿಮ್ಮ ಕುಟುಂಬ
ದುರ್ಬಲ ಮೋದಿ, ಆದರೆ ಅಜರ್ 'ಜಿ'? ಇರಲಿ, ನಿಮ್ಮಿಂದ ಸಂಸ್ಕೃತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಚಾಚಾ ನೆಹರೂ ಯುಎನ್ಎಸ್ಸಿಯಲ್ಲಿ ನಮ್ಮ ಕಾಯಂ ಸೀಟನ್ನು ನಿರಾಕರಿಸಿದ್ದರು. ಅದನ್ನು ಚೀನಾ ಪಡೆದುಕೊಂಡು ವೀಟೊ ಅಧಿಕಾರವನ್ನೂ ಗಳಿಸಿತು. ಸಮಸ್ಯೆಗಳು ನಿಮ್ಮ ಕುಟುಂಬದ ಮೂಲದಿಂದಲೇ ಶುರುವಾಗಿದ್ದು. ಈ ದೇಶಕ್ಕೆ ನಿಮ್ಮ ಕುಟುಂಬವೇ ಸಮಸ್ಯೆ! ಎಂದು ಕೌಸ್ತುಬ್ ಪೇಟೆ ಎಂಬುವವರು ಆರೋಪಿಸಿದ್ದಾರೆ.
|
ನೆಹರೂ ಘಂಡಿ ಕುಟುಂಬ ಹೊಣೆಗಾರ
ದೋಖ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದರು. ಭಾರತೀಯ ಸೇನೆಗೆ ಕಳಂಕ ತರುವಂತೆ ಚೀನಾಕ್ಕೆ ಉತ್ತೇಜನ ನೀಡುವುದನ್ನು ಮುಂದುವರಿಸಿದರು.
ಶ್ರೀ ಕೈಲಾಸ ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ಬೀಜಿಂಗ್ಗೆ ತೆರಳಿ ಚೀನಾ ಸೇನಾಧಿಕಾರಿಗಳನ್ನು ರಾಹುಲ್ ಭೇಟಿ ಮಾಡಿದ್ದರು. ನೆಹರೂ ಘಂಡಿ ಕುಟುಂಬವೇ ಇದಕ್ಕೆ ಹೊಣೆಗಾರರು ಎಂದು ಜಿಗ್ಸ್ ಎಂಬ ಖಾತೆಯಿಂದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.












Click it and Unblock the Notifications