ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್
Recommended Video
ಕೊಯಮತ್ತೂರು, ಮಾರ್ಚ್ 04 : "ನಾವು ಯಾವುದಕ್ಕಾದರೂ ಗುರಿಯಿಟ್ಟರೆ, ಅದನ್ನು ಹೊಡೆದೇ ತೀರುತ್ತೇವೆ. ನಮ್ಮ ಗುರಿ ತಪ್ಪಿದ್ದರೆ, ಪಾಕ್ ಪ್ರಧಾನಿ ಇಮ್ಮಾನ್ ಖಾನ್ ಏಕೆ ಪ್ರತಿಕ್ರಿಯಿಸುತ್ತಿದ್ದರು? ನಾವೊಂದು ವೇಳೆ ದಟ್ಟಾರಣ್ಯದಲ್ಲಿ ಬಾಂಬ್ ಎಸೆದಿದ್ದರೆ ಅವರು ಪ್ರತಿಕ್ರಿಯಿಸುತ್ತಿದ್ದರಾ?" ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಕೊಯಮತ್ತೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಸೋಮವಾರ ಮಾತನಾಡುತ್ತಿದ್ದ ಅವರು, ಅಭಿನಂದನ್ ಅವರು ಬಳಸಿದ್ದ ಮಿಗ್-21 ಬೈಸನ್ ಅತ್ಯಂತ ಸಮರ್ಥ ಯುದ್ಧ ವಿಮಾನ ಮತ್ತು ಅದನ್ನು ಮೇಲ್ದರ್ಜೆಗೇರಿಸಲಾಗಿದೆ. ಅದರಲ್ಲಿ ಉತ್ತಮ ರಾಡಾರ್ ವ್ಯವಸ್ಥೆ, ಆಕಾಶದಿಂದ ಆಕಾಶಕ್ಕೆ ನೆಗೆಯುವ ಮಿಸೈಲ್ ಗಳಿವೆ, ಅತ್ಯುತ್ತಮ ಶಸ್ತ್ರಾಸ್ತ್ರಗಳೂ ಇವೆ ಎಂದು ಅವರು ಪುರಾತನ ಮಿಗ್-21 ಬೈಸನ್ ಬಳಸಿದ್ದಕ್ಕೆ ಉದ್ಭವವಾಗಿದ್ದ ಅಸಮಾಧನಕ್ಕೆ ಉತ್ತರ ನೀಡಿದರು.
ಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ
ನಮ್ಮ ಕೆಲಸ ಶತ್ರುಗಳ ನೆಲೆಗಳನ್ನು ಗುರಿಯಿಟ್ಟು ಧ್ವಂಸಗೊಳಿಸುವುದು. ಆ ದಾಳಿಯಲ್ಲಿ ಸಾವಿಗೀಡಾದ ವ್ಯಕ್ತಿಗಳ ಹೆಣಗಳನ್ನು ನಾವು ಲೆಕ್ಕ ಹಾಕುವುದಿಲ್ಲ. ಆ ಬಗ್ಗೆ ಸ್ಪಷ್ಟ ಚಿತ್ರಣ ನೀಡುವುದೂ ಸಾಧ್ಯವಲ್ಲ, ಆ ಕೆಲಸ ಸರಕಾರದ್ದು ಎಂದು ಅವರು ಈ ಕುರಿತು ಎದ್ದಿರುವ ಸಂದೇಹಗಳಿಗೆ ಉತ್ತರಿಸಿದರು. ಕೇಂದ್ರ ಸರಕಾರ 250 ಉಗ್ರರನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದರೆ, ಅವರನ್ನು ವಿರೋಧಿಸುವವರು ಅದಕ್ಕೆ ಲೆಕ್ಕ ಮತ್ತು ಸಾಕ್ಷ್ಯ ನೀಡಿ ಎಂದು ದುಂಬಾಲು ಬಿದ್ದಿದ್ದಾರೆ.
ಭಾರತದಲ್ಲಿಯೇ ಇರುವ ಹಲವಾರು ವಿರೋಧಿಗಳು
ಪಾಕಿಸ್ತಾನ ಸೇರಿದಂತೆ ಭಾರತದಲ್ಲಿಯೇ ಇರುವ ಹಲವಾರು ವಿರೋಧಿಗಳು, ಎಲ್ಲಿವೆ ಹೆಣ ತೋರಿಸಿ, ನೀವು ಸುಳ್ಳು ಲೆಕ್ಕ ನೀಡುತ್ತಿದ್ದೀರಿ, ಅಲ್ಲಿ ಯಾರೂ ಸತ್ತೇ ಇಲ್ಲ ಎಂದು ಆಡಳಿತ ಪಕ್ಷಕ್ಕೆ ತಪರಾಕಿ ನೀಡುತ್ತಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ, ಕನಿಷ್ಠ 35 ಹೆಣಗಳನ್ನು ಅಲ್ಲಿಂದ ಸಾಗಿಸಲಾಗಿದೆ. ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಹಲವಾರು ಮುಖಂಡರು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ನಿಖರವಾದ ಅಂಕಿಅಂಶ ಇನ್ನೂ ಸಿಕ್ಕಿಲ್ಲ.
ಅಭಿನಂದನ್ ಅವರು ಮತ್ತೆ ಕಾಕ್ ಪಿಟ್ ಹತ್ತಲಿದ್ದಾರೆ
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅಥವಾ ಇತರರ ದೈಹಿಕ ಆರೋಗ್ಯದ ಮೇಲೆ ಅವರು ಮಿಗ್-21 ಬೈಸನ್ ಯುದ್ಧ ವಿಮಾನವನ್ನು ಹಾರಿಸುತ್ತಾರಾ ಇಲ್ಲವಾ ಎಂಬುದು ನಿರ್ಧಾರವಾಗುತ್ತದೆ. ಆ ಕಾರಣದಿಂದಾಗಿಯೇ ಅಭಿನಂದನ್ ಅವರು ವಿಮಾನದಿಂದ ಪ್ಯಾರಾಶೂಟ್ ಮೂಲಕ ಜಿಗಿದಿರುವುದರಿಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ. ಅವರಿಗೆ ನೀಡಬೇಕಾದ ಚಿಕಿತ್ಸೆ ನೀಡಿ, ವೈದ್ಯಕೀಯ ವರದಿ ಬಂದ ನಂತರ ಅವರು ಫೈಟರ್ ಕಾಕ್ ಪಿಟ್ ಅನ್ನು ಮತ್ತೆ ಪ್ರವೇಶಿಸಲಿದ್ದಾರೆ ಎಂದು ಧನೋವಾ ಅವರು ನುಡಿದರು.
ಪಾಕ್ ಸೇನೆ ಅಭಿನಂದನ್ ರ ವಶಕ್ಕೆ ಪಡೆಯುವ ಮುನ್ನ ನಡೆದಿದ್ದೇನು?
ಎಲ್ಲ ಯುದ್ಧ ವಿಮಾನಗಳು ಮೇಲ್ದರ್ಜೆಗೇರಿವೆ
ಒಂದು ವಿಷಯವೇನೆಂದರೆ, ನಾವು ಎಲ್ಲವನ್ನೂ ಪ್ಲಾನ್ ಮಾಡಿ ದಾಳಿಯನ್ನು ಮಾಡುತ್ತೇವೆ. ಆದರೆ, ವ್ಯತಿರಿಕ್ತ ಪರಿಸ್ಥಿತಿ ಒಂದು ವೇಳೆ ಎದುರಾದರೆ, ಯಾವ ಯುದ್ಧ ವಿಮಾನ ಲಭ್ಯವಿದೆಯೋ ಅದು ಕಾರ್ಯನಿರತವಾಗುತ್ತದೆ, ಅದು ಯಾವುದೇ ಏರ್ ಕ್ರಾಫ್ಟ್ ಆಗಿರಲಿ. ನಮ್ಮಲ್ಲಿರುವ ಎಲ್ಲ ಯುದ್ಧ ವಿಮಾನಗಳು ವೈರಿಗಳನ್ನು ಹೊಡೆದುರುಳಿಸಲು ಸನ್ನದ್ಧವಾಗಿರುತ್ತವೆ ಮತ್ತು ಮೇಲ್ದರ್ಜೆಗೇರಿರುತ್ತವೆ ಎಂದು ಚೀಫ್ ಏರ್ ಮಾರ್ಷಲ್ ವಿಶ್ವಾಸ ವ್ಯಕ್ತಪಡಿಸಿದರು.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಪಾಕಿಸ್ತಾನ ಖಂಡಿತವಾಗಿ ಒಪ್ಪಂದ ಉಲ್ಲಂಘನೆ ಮಾಡಿದೆ
ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧ ಪಾಕಿಸ್ತಾನ ಬಳಸಿದ್ದರ ಬಗ್ಗೆ ಪ್ರತಿಕ್ರಿಯಿಸಿದರ ಅವರು, ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಏನು ಒಪ್ಪಂದ ನಡೆದಿದೆಯೋ ನನಗೆ ಗೊತ್ತಿಲ್ಲ. ಆದರೆ, ಯುದ್ಧಕ್ಕಾಗಿ ಎಫ್-16 ವಿಮಾನವನ್ನು ಬಳಸಬಾರದು ಎಂದು ಎರಡೂ ರಾಷ್ಟ್ರಗಳ ನಡುವೆ ಒಪ್ಪಂದ ಆಗಿದ್ದರೆ, ಪಾಕಿಸ್ತಾನ ಖಂಡಿತವಾಗಿ ಆ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಧನೋವಾ ಅವರು ಅಭಿಪ್ರಾಯ ತಿಳಿಸಿದರು. ಇದರ ಬಗ್ಗೆ, ಆ ವಿಮಾನಗಳನ್ನು ನಾವು ಕೊಂಡಿದ್ದರಿಂದ ನಾವು ಅವನ್ನು ಹೇಗೆ ಬೇಕಾದರೂ ಬಳಸಬಹುದು ಎಂದು ಪಾಕಿಸ್ತಾನ ವಾಯು ಸೇನೆ ಉದ್ಧಟತನದಿಂದ ಉತ್ತರ ನೀಡಿತ್ತು.
ಎಫ್-16 ಯುದ್ಧ ವಿಮಾನ ದುರ್ಬಳಕೆ: ಪಾಕ್ ವಿರುದ್ಧ ಅಮೆರಿಕಕ್ಕೆ ಸಾಕ್ಷ್ಯ ನೀಡಿದ ಭಾರತ
ಹೊಡೆದುರುಳಿಸಿದ್ದು ವಿಮಾನ ಎಫ್-16 ಎಂಬುದಕ್ಕೆ ಪುರಾವೆ ಇದೆ
ನಾವು ಹೊಡೆದುರುಳಿಸಿದ್ದು ವಿಮಾನ ಎಫ್-16 ಎಂಬುದಕ್ಕೆ ನಮ್ಮ ಪುರಾವೆ ಇದೆ ಮತ್ತು ನಾವು ಅದನ್ನು ಈಗಾಗಲೆ ಮಾಧ್ಯಮದೆದಿರು ಕೂಡ ಪ್ರದರ್ಶಿಸಿದ್ದೇವೆ. ಎರಡು ರಾಷ್ಟ್ರಗಳ ನಡುವೆ ನಡೆದ ಕಾಳಗದಲ್ಲಿ ಪಾಕಿಸ್ತಾನ ಖಂಡಿತವಾಗಿ ಎಫ್-16 ಯುದ್ಧ ವಿಮಾನವನ್ನು ಕಳೆದುಕೊಂಡಿದೆ. ಅವರು ನಮ್ಮ ವಿರುದ್ಧವೇ ಆ ಯುದ್ಧ ವಿಮಾನವನ್ನು ಬಳಸಿದ್ದಾರೆ ಎಂಬ ವಾದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಎಂದು ಏರ್ ಚೀಫ್ ಮಾರ್ಷಲ್ ಪ್ರಶ್ನಿಸಿದರು.