ನೀತಿ ಸಂಹಿತೆ ಉಲ್ಲಂಘಿಸಿದ ರಾಜಸ್ಥಾನ ರಾಜ್ಯಪಾಲ: ಇತಿಹಾಸದಲ್ಲೇ ಮೊದಲು
ನವದೆಹಲಿ, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಲ್ಯಾಣ್ ಸಿಂಗ್ ಅವರು ತಮ್ಮ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು. ಈಗ 'ಅಗತ್ಯ ಕ್ರಮ' ತೆಗೆದುಕೊಳ್ಳುವ ಸಲುವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ.
ಪ್ರಧಾನಿ ಪರ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತೆಯನ್ನು ರಾಜ್ಯಪಾಲರೊಬ್ಬರು ಉಲ್ಲಂಘನೆ ಮಾಡಿರುವುದು ಕಂಡುಬಂದಿರುವುದು ದೇಶದಲ್ಲಿ ಇದೇ ಮೊದಲ ಬಾರಿ. ರಾಜ್ಯಪಾಲರಂತಹ ಸಾಂವಿಧಾನಿಕ ಅಧಿಕಾರಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಸಕ್ರಿಯ ರಾಜಕಾರಣದಿಂದ ರಾಜ್ಯಪಾಲರುಗಳು ದೂರವೇ ಇರಬೇಕು ಎಂದು ರಾಷ್ಟ್ರಪತಿ ಅವರು ಗೃಹ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದರ ವಿರುದ್ಧ ದೂರು ನೀಡಲು ಕಾಂಗ್ರೆಸ್ ರಾಷ್ಟ್ರಪತಿಗಳ ಭೇಟಿಗೆ ಕಾಲಾವಕಾಶ ಕೋರಿದೆ.
ರಾಷ್ಟ್ರಪತಿಯವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ರಾಜ್ಯಪಾಲರು ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಗಂಭೀರ ಮತ್ತು ಅಪರೂಪದ ಪ್ರಕರಣ ಎಂದಿದೆ.
ರಾಜ್ಯಪಾಲರನ್ನು ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ತೆಗೆದುಹಾಕಬಹುದೇ ಎಂಬುದರ ಬಗ್ಗೆ ಪ್ರಧಾನಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಅಲಿಗಢದಲ್ಲಿ ಮಾತನಾಡಿದ್ದ ಕಲ್ಯಾಣ್ ಸಿಂಗ್, ದೇಶದ ಒಳಿತಿಗಾಗಿ ನರೇಂದ್ರ ಮೋದಿ ಅವರ ಮರು ಆಯ್ಕೆ ಅಗತ್ಯವಾಗಿದೆ ಮತ್ತು ಅದಕ್ಕಾಗಿ ಪಕ್ಷದ ಪ್ರತಿಯೊಬ್ಬ ಸದಸ್ಯರೂ ಶ್ರಮಿಸಬೇಕು ಎಂದಿದ್ದರು.












Click it and Unblock the Notifications