ಬೀದಿಗೆ ಬಿತ್ತು ಅನ್ನದಾತನ ಬದುಕು, ನಾಶವಾದ ಬೆಳೆ ಮೇಲೆ ಉರುಳಾಡಿದ ರೈತ
ಭೋಪಾಲ್, ಮಾರ್ಚ್ 16: ದೇಶದ ರೈತರ ಬದುಕು ಅಕ್ಷರಶಃ ಕರುಣಾಜನಕ ಸ್ಥಿತಿಗೆ ತಲುಪಿದೆ. ಒಂದ್ಕಡೆ ದೆಹಲಿಯಲ್ಲಿ ರೈತ ಸಮುದಾಯ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ದೇಶದ ವಿವಿಧೆಡೆ ಅತಿವೃಷ್ಟಿ ಅನ್ನದಾತರನ್ನು ಬೀದಿಗೆ ಬೀಳುವಂತೆ ಮಾಡಿದೆ.
ಇಂತಹದ್ದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿತ್ತು. ಹೀಗೆ ಬಿದ್ದಿದ್ದ ಆಲಿಕಲ್ಲು ರೈತನ ಬದುಕನ್ನೇ ನುಚ್ಚುನೂರು ಮಾಡಿದೆ. ಸಾವಿರಾರು ಎಕರೆಯಲ್ಲಿನ ಬೆಳೆ ನಷ್ಟವಾಗಿದೆ. ಹೀಗೆ ಚಂದೇರಿ ಗ್ರಾಮದಲ್ಲಿ ಸಜ್ಜನ್ ಸಿಂಗ್ ಎಂಬ ರೈತನಿಗೆ ಸೇರಿದ ಬೆಳೆ ಕೂಡ ಆಲಿಕಲ್ಲು ಮಳೆಯಿಂದಾಗಿ ನಾಶವಾಗಿದೆ.
ನಾಶವಾದ ಬೆಳೆ ಮೇಲೆ ಬಿದ್ದು ಕಣ್ಣೀರು ಹಾಕುತ್ತಾ ಒದ್ದಾಡಿರುವ ಸಜ್ಜನ್ ಸಿಂಗ್, ಬೆಳೆ ಮೇಲೆ ಉರುಳಾಡಿದ್ದಾನೆ. ತನ್ನ ನೋವು ಹಾಗೂ ಯಾತನೆ ಹೇಳಲು ಆಗದೆ ಒದ್ದಾಡಿದ್ದಾನೆ. ನೋಡಿದವರ ಕಣ್ಣಲ್ಲಿ ನೀರು ತರಿಸುವಂತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಶೋಕಭಾವ ಮೂಡಿಸಿದೆ.

ದೇಶದ ಹಲವೆಡೆ ಅಕಾಲಿಕ ಮಳೆ
ಮಧ್ಯಪ್ರದೇಶ ಮಾತ್ರವಲ್ಲ ದೇಶದ ಹಲವು ಭಾಗಗಳಲ್ಲಿ ಇದೇ ರೀತಿ ಅಕಾಲಿಕ ಮಳೆ ಬಿದ್ದಿದೆ. ಇನ್ನೇನು ಬೆಳೆ ಕೈಸೇರಬೇಕು ಎನ್ನುವಷ್ಟರಲ್ಲಿ ಮಳೆ ಎಲ್ಲವನ್ನೂ ಹಾಳು ಮಾಡಿದೆ. ರೈತರು ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮಧ್ಯಪ್ರದೇಶ ಹಿಂದೆ ಎಂದೂ ಕಾಣದಂಥ ಸಂಕಷ್ಟದ ಸ್ಥಿತಿ ಎದುರಿಸಿದೆ. ಒಂದು ಕಡೆ ಕೊರೊನಾ ಕಾಟವಾದರೆ, ಮತ್ತೊಂದು ಕಡೆ ವರುಣ ದೇವ ಕೆಂಗಣ್ಣು ಬೀರಿರುವುದು ರೈತರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿ ರೈತರು ನರಳುತ್ತಿದ್ದಾರೆ.
ಕ್ಲೈಮೆಟ್ ಚೇಂಜ್ ಎಫೆಕ್ಟ್..?
ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆ, ಇನ್ನು ಬೇಸಿಗೆಯಲ್ಲೂ ವರುಣನ ಅಬ್ಬರ. ಹೀಗೆ ಭೂ ವಾತಾವರಣ ವಿಪರೀತ ಬದಲಾಗುತ್ತಿದೆ. ಮಾನವನ ದುರಾಸೆಯಿಂದಾಗಿ ಮಾಲಿನ್ಯ ಸೃಷ್ಟಿಯಾಗಿದೆ. ಮಾಲಿನ್ಯದ ಪರಿಣಾಮ ಭೂಮಿ ಮೇಲಿನ ವಾತಾವರಣ ನಾಶವಾಗುತ್ತಿದೆ. ಯಾವ ಸಮಯದಲ್ಲಿ ಏನಾಗಬೇಕೋ ಅದೆಲ್ಲಾ ಉಲ್ಟಾ ಆಗುತ್ತಿದೆ. ಇದು ಪರಿಸ್ಥಿತಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ರೈತರ ಬೆಳೆ ನಾಶವಾಗುವ ಜೊತೆಗೆ ಇದು ಆಹಾರ ಭದ್ರತೆಗೂ ಕಂಟಕ ಎದುರಾಗುವಂತೆ ಮಾಡಿದೆ. ಅಕಾಲಿಕ ಮಳೆ ನೂರಾರು ಅವಾಂತರ ಸೃಷ್ಟಿಸುತ್ತಿದೆ.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ.












Click it and Unblock the Notifications