ಉಪ ರಾಷ್ಟ್ರಪತಿ ಚುನಾವಣೆ; ವಿರೋಧ ಪಕ್ಷಗಳ ಆಯ್ಕೆ ಏನು?
ನವದೆಹಲಿ, ಜುಲೈ 6: ಭಾರತದ ಮುಂದಿನ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯನ್ನು ಹುಡುಕಲು ಕಾಂಗ್ರೆಸ್ ಈ ಬಾರಿ ಒಂದು ಹೆಜ್ಜೆ ಮುಂದಿಡಲು ಎಲ್ಲ ರೀತಿ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಚುನಾವಣೆಗೆ ಯಶ್ವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ ಆಗಿದ್ದಾರೆ. ಅದೇ ರೀತಿ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳನ್ನು ಸಂಪರ್ಕಿಸುವ ಹೊಣೆಯನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲಿಕಾರ್ಜುನ್ ಖರ್ಗೆಗೆ ಕಾಂಗ್ರೆಸ್ ವಹಿಸಿದೆ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ವಿಪಕ್ಷಗಳ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಆದರೆ ಅದಕ್ಕೂ ಮೊದಲು ಪ್ರತಿಪಕ್ಷದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮಾಡುವುದಕ್ಕೆ ಪಕ್ಷ ಅಣಿಯಾಗಿದೆ. ಯಾವ ಪಕ್ಷದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ.

ಯಾವ ಪಕ್ಷದಿಂದ ಬರುತ್ತಾರೆ ಉಪರಾಷ್ಟ್ರಪತಿ
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಯಾವ ಪಕ್ಷದವರು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷದವರೇ ಅಭ್ಯರ್ಥಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಪಕ್ಷದ ಉನ್ನತ ಮೂಲಗಳು ಬೇರೆಯದ್ದೇ ಉತ್ತರವನ್ನು ನೀಡುತ್ತಿವೆ. ಕಾಂಗ್ರೆಸ್ ಪಕ್ಷದವರೇ ಅಭ್ಯರ್ಥಿ ಆಗಬೇಕು ಎಂದೇನಿಲ್ಲ. ಬೇರೆ ಪಕ್ಷದಿಂದಲೂ ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮೊದಲ ಮತ್ತು ಅಗ್ರಗಣ್ಯ ನಾಯಕನನ್ನು ಆಯ್ಕೆ ಮಾಡುವುದೊಂದೇ ನಮ್ಮ ಗುರಿ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಭುತ್ವದಲ್ಲಿ ವಾಕ್ ಓವರ್ ಮಾಡುವುದಿಲ್ಲ
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಳ್ಳುವುದಕ್ಕೆ ಪ್ರತಿಪಕ್ಷಗಳು ಅಗತ್ಯ ಸಂಖ್ಯಾಬಲವನ್ನು ಹೊಂದಿವೆಯೇ ಎಂಬುದಕ್ಕೆ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ ಓವರ್ ಮಾಡುವುದಕ್ಕಿಂದ ಸ್ಪರ್ಧೆ ನೀಡುವುದು ನಮ್ಮ ಹಕ್ಕು ಎಂದಿದ್ದಾರೆ.

ದ್ರೌಪದಿ ಮುರ್ಮು ಹೆಸರಿನಿಂದ ಅಭಿಪ್ರಾಯ ಬದಲಾವಣೆ
ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಎನ್ಡಿಎ ಅಭ್ಯರ್ಥಿ ಆಗಿರುವುದು ಕೆಲವು ವಿರೋಧ ಪಕ್ಷಗಳೇ ವಿಭಿನ್ನ ಅಭಿಪ್ರಾಯವನ್ನು ಹೊಂದಿವೆ. ಅವರು ಕೆಲವು ಪ್ರಾದೇಶಿಕ ಪಕ್ಷಗಳಿಂದ ಬೆಂಬಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದರ ಮಧ್ಯೆಯೂ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಠಿಣ ಸವಾಲು ನೀಡಲಿದ್ದಾರೆ.

ಚಿತ್ರಣ ಬದಲಾಗುವ ನಿರೀಕ್ಷೆಯಲ್ಲಿ ವಿರೋಧ ಪಕ್ಷಗಳು
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ವಿರೋಧ ಪಕ್ಷಗಳೇ ಭಿನ್ನ ಅಭಿಪ್ರಾಯಗಳನ್ನು ಹೊಂದಿವೆ. ಆದರೆ ಉಪ ರಾಷ್ಟ್ರಪತಿ ಚುನಾವಣೆ ಹೊತ್ತಿಗೆ ಈ ರಾಜಕೀಯ ಚಿತ್ರಣ ಬದಲಾಗಬಹುದು. ಭಾರತದ 16ನೇ ಉಪ ರಾಷ್ಟ್ರಪತಿ ಆಯ್ಕೆಗೆ ಆಯೋಗವು ಚುನಾವಣೆಯನ್ನು ಘೋಷಣೆ ಮಾಡಿದೆ. ಜುಲೈ 5ರಂದು ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 19 ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಲಿದೆ.

ಉಪ ರಾಷ್ಟ್ರಪತಿ ಆಯ್ಕೆಯ ವಿಧಾನ
2022ರಲ್ಲಿ ದೇಶದ 16ನೇ ಉಪ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಸಲಾಗುತ್ತದೆ. ಈ ವೇಳೆ ಸಂಸತ್ ಉಭಯ ಸದನಗಳ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭೆಯ 233 ಚುನಾಯಿತ ಸದಸ್ಯರು, ರಾಜ್ಯಸಭೆಯ 12 ನಾಮ ನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ 543 ಸದಸ್ಯರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟು ಮೂರನೇ ಎರಡರಷ್ಟು ಮತಗಳನ್ನು ಪಡೆದುಕೊಳ್ಳುವ ಅಭ್ಯರ್ಥಿಯು ಮುಂದಿನ ಉಪ ರಾಷ್ಟ್ರಪತಿ ಆಗಿ ಆಯ್ಕೆ ಆಗಲಿದ್ದಾರೆ.












Click it and Unblock the Notifications