ವಿಎಚ್ಪಿ ಸದಸ್ಯರ ಫುಂಡಾಟ, ತಾಜ್ ಮಹಲ್ನ ದಕ್ಷಿಣ ದ್ವಾರ ಧ್ವಂಸ
ನವ ದೆಹಲಿ, ಜೂನ್ 13: ವಿಶ್ವ ಹಿಂದೂ ಪರಿಷತ್ತಿನ ಸದಸ್ಯರು ವಿಶ್ವ ವಿಖ್ಯಾತ ತಾಜ್ ಮಹಲ್ನ ದಕ್ಷಿಣದ ಗೇಟನ್ನು ಧ್ವಂಸ ಮಾಡಿರುವ ಘಟನೆ ಭಾನುವಾರ ನಡೆದಿದ್ದು ತಡವಾಗಿ ವರದಿಯಾಗಿದೆ.
ತಾಜ್ ಮಹಲ್ನ ದಕ್ಷಿಣದ ದ್ವಾರವು 400 ವರ್ಷ ಪುರಾತನ ಶಿವನ ದೇವಾಲಯಕ್ಕೆ ತೆರಳುವ ಮಾರ್ಗವನ್ನು ಮುಚ್ಚುತ್ತದೆ ಎಂದು ಆರೋಪಿಸಿ 30-35 ಜನರ ವಿಶ್ವ ಹಿಂದೂ ಪರಿಷತ್ ಸದಸ್ಯರ ಗುಂಪು ದಾಳಿ ಮಾಡಿ ಗೇಟ್ ಅನ್ನು ಕಿತ್ತು ಎಸೆದಿದೆ.
ಪ್ರತಿಭಟನಾಕಾರರು ಸುತ್ತಿಗೆ, ಕಬ್ಬಿಣದ ಸರಳುಗಳಂತಹಾ ಆಯುಧಗಳನ್ನು ಹಿಡಿದು ಏಕಾಏಕಿ ನುಗ್ಗಿ ತಾಜ್ ಮಹಲ್ನ ದಕ್ಷಿಣದ ಗೇಟ್ ಅನ್ನು ಕಿತ್ತೆಸೆದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಅವರು ತಾಜ್ ಮಹಲ್ ವಿರುದ್ಧ ಹಾಗೂ ಭಾರತೀಯ ಪುರಾತತ್ವ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಹೇಳಲಾಗಿದೆ.

ಭಾರತ ಪುರಾತತ್ವ ಇಲಾಖೆಯು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು, ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸಿದ, ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
ಈಗಾಗಲೇ ಕೆಲವು ಬಿಜೆಪಿ ಮಂತ್ರಿಗಳೇ 'ತಾಜ್ ಮಹಲ್' ಹೆಸರನ್ನು ತೇಜೋ ಮಹಲ್ ಎಂದು ಬದಲಾಯಿಸಬೇಕು ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಹಿಂದೂ ಸಂಘಟನೆಗಳೂ ಸಹ ತಾಜ್ ಮಹಲ್ ಅನ್ನು ಹಿಂದೂ ದೇವಾಲಯ ಎಂಬ ವಾದವನ್ನು ಮಂಡಿಸುತ್ತಲೇ ಬಂದಿವೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ ಕೆಲವು ಮುಸ್ಲಿಂ ಹೆಸರುಗಳುಳ್ಳ ಪ್ರಮುಖ ಸ್ಥಳಗಳು, ರಸ್ತೆಗಳ ಹೆಸರನ್ನು ಹಿಂದೂ ಹೆಸರುಗಳನ್ನಾಗಿ ಬದಲಾಯಿಸಿದ್ದು, ಈಗ ತಾಜ್ ಮಹಲ್ ಮೇಲೆ ಆಗಿರುವ ದಾಳಿ ಯಾವ ರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.












Click it and Unblock the Notifications