ಡಿಸೆಂಬರ್ 6 ಶೌರ್ಯ ದಿನವನ್ನಾಗಿ ಆಚರಿಸಲು ವಿಹಿಂಪ ಕರೆ
ಲಖನೌ, ಡಿಸೆಂಬರ್ 05 : ಡಿಸೆಂಬರ್ 06 ಅನ್ನು ಸಂಭ್ರಮ, ಸಡಗರದಿಂದ ಆಚರಿಸುವಂತೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.
ಬಾಬ್ರಿ ಮಸೀದಿ ಧ್ವಂಸಗೊಳಿಸಿ ಡಿಸೆಂಬರ್ 06ಕ್ಕೆ 25 ವರ್ಷ ಪೂರ್ಣವಾಗುತ್ತಿರುವ ಕಾರಣ ಆ ದಿನವನ್ನು 'ಶೌರ್ಯ ದಿನ'ವನ್ನಾಗಿ ಆಚರಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಅದರ ಸೋದರ ಸಂಸ್ಥೆಯಾದ ಭಜರಂಗದಳ ಕರೆ ನೀಡಿವೆ.
ಅಯೋಧ್ಯೆಯ ಜನ ಅಂದು ಮನೆಗಳಲ್ಲಿ ದೀಪಗಳನ್ನು ಹೊತ್ತಿಸಿ ರಾಮಮಂದಿರ ಕಟ್ಟಿಯೇ ತೀರುವುದಾಗಿ ಶಪಥ ಮಾಡಿ ಎಂದು ವಿಹಿಂಪ ಕರೆ ನೀಡಿದೆ. ಭಜರಂಗ ದಳವು, ಅಂದು ಪಂಜಿನ ಮೆರವಣಿಗೆ ಮಾಡುವಂತೆ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ.

ಡಿಸೆಂಬರ್ 06ರಂದು ಅಯೋದ್ಯೆಯ ಮನೆಗಳು, ದೇವಾಲಯಗಳಲ್ಲಿ ದೀಪ ಹೊತ್ತಿಸಿ ರಾಮಮಂದಿರ ನಿರ್ಮಾಣಕ್ಕೆ ಪ್ರತಿಜ್ಞೆ ಸ್ವೀಕರಿಸಲಾಗುವುದು ಹಾಗೂ ಅಂದಿನ ದಿನ ರಾಜ್ಯದ ಅನೇಕ ಕಡೆ ಸಭೆಗಳನ್ನೂ ನಡೆಸಲಾಗುವುದು ಎಂದು ಅಯೋಧ್ಯೆಯ ವಿಹಿಂಪ ಮುಖಂಡ ಶರದ್ ಶರ್ಮಾ ಹೇಳಿದ್ದಾರೆ.
ಮತ್ತೊಂದು ಕಡೆ ಭಜರಂಗ ದಳದ ರಾಷ್ಟ್ರೀಯ ಸಂಘಟಕ ಮನೋಜ್ ವರ್ಮಾ ಮಾತನಾಡಿ "ಭಜರಂಗ ದಳ ಕಾರ್ಯಕರ್ತರು ರಾಜ್ಯದೆಲ್ಲೆಡೆ ಪಂಜಿನ ಮೆರವಣಿಗೆ ಮಾಡಲಿದ್ದಾರೆ, ಹಾಗೂ ಬಾಬ್ರಿ ಮಸೀದಿಯ ಧ್ವಂಸದ ರೊಚಕ ಘಟನೆಗಳನ್ನು ಸ್ಥಳೀಯರಿಗೆ ವಿವರಿಸುವ ಸಭೆಗಳನ್ನು ನಡೆಸಲಿದ್ದಾರೆ' ಎಂದರು.
ಅಯೋಧ್ಯೆಯ ಮುಸ್ಲಿಂ ಸಮುದಾಯದ ಸಂಘದವರು ಡಿಸೆಂಬರ್ 6 ಅನ್ನು ಯೆಮನ್-ಇ-ಘಮ್ (ನೋವಿನ ದಿನ), ಮತ್ತು ಯೆಮನ್-ಇ-ಸ್ಯಾಹ್ (ಕಪ್ಪು ದಿನ)ವನ್ನಾಗಿ ಆಚರಿಸುತ್ತಿದ್ದಾರೆ.
ಅಯೋಧ್ಯೆ ರಾಮಮಂದಿರ ಪ್ರಕರಣ ಡಿಸೆಂಬರ್ 05ಕ್ಕೆ ಮಂಗಳವಾರ ಅಂತಿಮ ವಿಚಾರಣೆ ನಡೆಯಿತು. ಅಗತ್ಯ ದಾಖಲೆಗಳ ತರ್ಜುಮೆ ಕೆಲಸಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸುನ್ನಿ ಮುಸ್ಲಿಂ ಪಂಗಡದವರು ಕೋರಿದ ಕಾರಣ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 08, 2018ಕ್ಕೆ ಮುಂದೂಡಲಾಗಿದೆ.












Click it and Unblock the Notifications